ಬೆಂಗಳೂರಿನಲ್ಲಿ ಅಗ್ರಿಟೆಕ್ ಅತ್ಯುನ್ನತ ಕೇಂದ್ರ ಸ್ಥಾಪನೆಗೆ ಸಿದ್ಧತೆ
ಬೆಂಗಳೂರು, ಫೆಬ್ರವರಿ 07 : ಕೃಷಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಪೂರಕವಾದ ಐಟಿ-ಬಿಟಿ ಇಲಾಖೆಯು ಕೃಷಿ ಇಲಾಖೆ ಸಹಯೋಗದಲ್ಲಿ ಅಗ್ರಿಟೆಕ್ ಅತ್ಯುನ್ನತ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಮುಂದಾಗಿದೆ.
ಈ ಮೂಲಕ ದೇಶದಲ್ಲೇ ಪ್ರಥಮ ಬಾರಿಗೆ ಅಗ್ರಿಟೆಕ್ ಅತ್ಯುನ್ನತ ಕೇಂದ್ರ ಸ್ಥಾಪನೆಗೆ ಕರ್ನಾಟಕ ನಾಂದಿ ಹಾಡಿದಂತಾಗಿದೆ. ಮುಖ್ಯಮಂತ್ರಿ ಸಿದ್ರಾಮಯ್ಯ ಅವರು ಫೆ.16 ರಂದು ಮಂಡಿಸಲಿರುವ ಈ ಬಾರಿಯ ಬಜೆಟ್ ನಲ್ಲಿ ಅಗ್ರಿಟೆಕ್ ಅತ್ಯುನ್ನತ ಕೇಂದ್ರ ಸ್ಥಾಪನೆ ಘೋಷಣೆ ಮಾಡುವ ಸಂಭವವಿದೆ. ಇದರ ಯಶಸ್ಸು ಆಧರಿಸಿ ರಾಜ್ಯದ ಇತರ ಕಡೆಗಳಲ್ಲಿಯೂ ಇಂತಹ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಪರಿಶೀಲಿಸಲಿದೆ.
ಕರ್ನಾಟಕದ ರೈತರ ಪಾಲಿನ ಸೌಭಾಗ್ಯ 'ಕೃಷಿ ಭಾಗ್ಯ'
ಬೇಸಾಯ ಹಾಗೂ ಕೃಷಿ ಬೆಳೆ ಮಾರಾಟ ಪ್ರಕ್ರಿಯೆಯಲ್ಲಿ ಸುಧಾರಣೆಗೆ ಹೊಸ ಸಂಶೋಧನೆ, ಆವಿಷ್ಕಾರ ಕೈಗೊಳ್ಳಲು ಈ ಕೇಂದ್ರ ನೆರವಾಗಲಿದೆ. ಈ ಉದ್ದೇಶಕ್ಕಾಗಿ 2018-19 ನೇ ಸಾಲಿನ ಬಜೆಟ್ ನಲ್ಲಿ ೨೦ ಕೋಟಿ ರೂ ಮೀಸಲಿಡುವ ಸಾಧ್ಯತೆ ಇದೆ.
ಬೇಸಾಯ ಕ್ರಮದಲ್ಲಿ ಬದಲಾವಣೆ, ಹೆಚ್ಚು ಇಳುವರಿ ನೀಡುವ ಬಿತ್ತನೆ ಬೀಜಗಳ ಅಭಿವೃದ್ಧಿ, ಸುಧಾರಿತ ರಸಗೊಬ್ಬರ, ಕೀಟನಾಶಕಗಳ ಅಭಿವೃದ್ಧಿ, ಸುಧಾರಿತ ಯಂತ್ರೋಪಕರಣಗಳ ತಯಾರಿಕೆಯಲ್ಲಿ ಹೊಸ ಸಂಶೋಧನೆ, ಕೃಷಿ, ಬೆಳೆ, ಉಪ ಬೆಳೆ, ಉಪ ಉತ್ಪನ್ನ, ಸಿರಿಧಾನ್ಯ, ಸಾವಯವ ಕೃಷಿ, ನೀರಿನ ಸಂರಕ್ಷಣೆ ಹೀಗೆ ಕೃಷಿ ಸಂಬಂಧಿತ ನಾನಾ ಚಟುವಟಿಕೆಗಳಲ್ಲಿ ಹೊಸ ಸಂಶೋಧನೆ, ಆವಿಷ್ಕಾರ ರೂಪಸುವುದು ಹಾಗೂ ಯಾಸ್ವಿ ಬಳಕೆಗೆ ಪ್ರೋತ್ಸಾಹಿಸುವುದು ಈ ಕೇಂದ್ರದ ಸ್ಥಾಪನೆಯ ಮುಖ್ಯ ಉದ್ದೇಶವಾಗಿದೆ.