ಪವರ್ಸ್ಟಾರ್ ನಿಧನದ ನಂತರ ಬೆಂಗಳೂರಿನ ಮದ್ಯದಂಗಡಿಗಳು ಬಂದ್
ಬೆಂಗಳೂರು ಅಕ್ಟೋಬರ್ 29: ಕನ್ನಡದ ಜನಪ್ರಿಯ ನಟ ಪುನೀತ್ ರಾಜ್ಕುಮಾರ್ ಶುಕ್ರವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಂತಿಮ ದರ್ಶನ ಪಡೆಯಲು ಕಂಠೀರವ ಸ್ಟೇಡಿಯಂನಲ್ಲಿ ಅವರ ಮೃತದೇಹವನ್ನು ಇರಿಸಲಾಗಿದೆ. ಅವರ ಅಂತಿಮ ದರ್ಶನ ಪಡೆಯಲು ಜನ ಸಾಗರವೇ ಹರಿದು ಬರುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ನಿರೀಕ್ಷೆಯಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಕರ್ನಾಟಕ ಸರ್ಕಾರವು ಎಲ್ಲಾ ಪೊಲೀಸ್ ಮತ್ತು ಜಿಲ್ಲಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.
ಹೀಗಾಗಿ ಬೆಂಗಳೂರಿನಲ್ಲಿ ಕೆಲವೆಡೆ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿದೆ. ನೆಚ್ಚಿನ ನಟ ಪುನೀತ್ ರಾಜ್ಕುಮಾರ್ ಅಕಾಲಿಕ ಅಗಲಿಕೆಗೆ ಹಲವು ಕಡೆ ಸ್ವಯಂ ಘೋಷಿತವಾಗಿ ಅಂಗಡಿಗಳನ್ನು ಜನ ಮುಚ್ಚಿದ್ದಾರೆ. ಶುಕ್ರವಾರದಂದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ನಿಧನದ ನಂತರ, ಬೆಂಗಳೂರು ಪೊಲೀಸರು ನಗರದ ಎಲ್ಲಾ ಮದ್ಯದಂಗಡಿಗಳನ್ನು "ಮುನ್ನೆಚ್ಚರಿಕೆ ಕ್ರಮವಾಗಿ" ಎರಡು ರಾತ್ರಿಗಳ ಕಾಲ ಮುಚ್ಚುವಂತೆ ಸೂಚಿಸಿದ್ದಾರೆ.
ಸ್ವಘೋಷಿತ ಬಂದ್
ಇಂದು ಅಭಿಮಾನಿಗಳು ತಮ್ಮ ನೆಚ್ಚಿನ ನಟ ಸಾವಿನ ಸುದ್ದಿ ಕೇಳುತ್ತಿದ್ದಂತೆ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿದ್ದಾರೆ. ನಾಳೆ ಅಥವಾ ನಾಳಿದ್ದು ಸ್ವಯಂ ಪ್ರೇರಿತರಾಗಿ ಇಡೀ ಕರುನಾಡು ಬಂದ್ ಮಾಡುವ ಮುಖಾಂತರ ಕನ್ನಡದ ಶ್ರೇಷ್ಠ ನಟನಿಗೆ ಗೌರವ ಸಲ್ಲಿಸಿ ಮತ್ತೆ ಈ ನಾಡಿನಲ್ಲಿ ಹುಟ್ಟಿ ಬರಬೇಕೆಂಬ ವಚನ ತೆಗೆದುಕೊಂಡು ಗೌರವಿತವಾಗಿ ಕಳುಹಿಸಿ ಕೊಡೋಣ. ಕನ್ನಡ ಸಂಘಟನೆಗಳ ಮುಖಂಡರ ಚರ್ಚೆ ನಡೆಯುತ್ತಿದ್ದು ಶೀಘ್ರದಲ್ಲಿ ತೀರ್ಮಾನ ತಿಳಿಸುತ್ತೇವೆ ಎಂದಿದ್ದಾರೆ.
ಕಂಬನಿ ಮಿಡಿದ ಕಾಫಿನಾಡಿನ ಜನ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ಇಡೀ ರಾಜ್ಯವೇ ಶೋಕ ವ್ಯಕ್ತಪಡಿಸುತ್ತಿದೆ. ಶುಕ್ರವಾರ ಬೆಳಗ್ಗೆ ಚಲನಚಿತ್ರ ನಟ ಪುನೀತ್ ರಾಜ್ಕುಮಾರ್ ಅವರಿಗೆ ಹೃದಯಘಾತ ವಾಗಿ ಆಸ್ಪತೆಗೆ ಸೇರಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಬಿತ್ತರವಾಗುತ್ತಿದ್ದಂತೆ ಪುನೀತ್ ರಾಜ್ ಕುಮಾರ್ ಅವರು ಬೇಗ ಚೇತರಿಸಿಕೊಳ್ಳಲ್ಲಿ ಎಂದು ಅಭಿಮಾನಿಗಳು ದೇವರ ಮೋರೆ ಹೋಗಿದ್ದು, ಅಭಿಮಾನಿಗಳ ಪ್ರಾರ್ಥನೆ ಫಲಿಸದೆ ಅವರು ಇಹಲೋಕ ತ್ಯಜಿಸಿದ್ದು ಕಾಫಿ ನಾಡಿನಾದ್ಯಂತ ದು:ಖ ಮಡುಗಟ್ಟಿದೆ. ಪವರ್ಸ್ಟಾರ್ ಪುನೀತ್ರಾಜ್ಕುಮಾರ್ ಅವರು ಕಾಫಿನಾಡಿನೊಂದಿಗೆ ಅಪಾರವಾದ ನಂಟು ಹೊಂದಿದ್ದು, ಅವರ ಅನೇಕ ಚಲನಚಿತ್ರಗಳಿಗೆ ಈ ನೆಲ ಸಾಕ್ಷಿಯಾಗಿದೆ. ಅಭಿ, ಅಪ್ಪು, ಮಿಲನ, ಬೆಟ್ಟದಹೂವು ಸೇರಿದಂತೆ 15ಕ್ಕೂ ಹೆಚ್ಚು ಚಲನಚಿತ್ರಗಳ ಚಿತ್ರೀಕರಣ ಇಲ್ಲಿ ನಡೆದಿದ್ದು, ಚಿತ್ರೀಕರಣದ ಜೊತೆಗೆ ಕೌಟುಂಬಿಕ ನಂಟು ಹೊಂದುವ ಮೂಲಕ ಕಾಫಿನಾಡಿನ ಅಳಿಯನಾಗಿದ್ದು, ಕನ್ನಡ ಚಲನಚಿತ್ರ ರಂಗದ ಪವರ್ಸ್ಟಾರ್ ಕಾಫಿನಾಡಿನ ಅಳಿಯನಾಗಿದ್ದು ಕಾಫಿನಾಡಿನ ಗರಿಮೆ ಹೆಚ್ಚಿಸಿತ್ತು. ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರು ಸಮೀಪದ ಬಾಗೇಮನೆ ಬಿ.ರೇವನಾಥ್ ಮತ್ತು ವಿಜಯಾ ರೇವನಾಥ್ ಅವರ ಪುತ್ರಿ ಅಶ್ವಿನಿಯವರೊಂದಿಗೆ ದಾಪಂತ್ಯ ಜೀವನಕ್ಕೆ ಕಾಲಿಡುವ ಮೂಲಕ ಕಾಫಿನಾಡಿನ ಅಳಿಯನಾದರೂ. 40 ವರ್ಷಗಳಿಂದ ಬಿ.ರೇವನಾಥ್ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದ್ದು, ಬಾಗೇಮನೆಯಲ್ಲಿ ಬಿ.ರೇವನಾಥ್ ಸೇರಿದ ಮನೆ ಇದ್ದು, ಅಲ್ಲಿಗೆ ಅನೇಕ ಬಾರೀ ಪುನೀತ್ ರಾಜ್ಕುಮಾರ್ ಬಂದು ತಂಗಿದ್ದರು. ಅವರ ನಿಧನದಿಂದ ಬಾಗೇಮನೆ ಮತ್ತು ಜಿಲ್ಲಾದ್ಯಂತ ಅತೀವ ಶೋಕ ಮಡುಗಟ್ಟಿದೆ.
Mortal remains of #PuneethRajkumar will be kept at Kanteerva Stadium for public viewing. There is a ban on sale of liquor in Bengaluru for two night as a precautionary measure. Intensive patrolling is being conducted to ensure no untoward incident occurs: DCP Central #Bengaluru pic.twitter.com/J2aQ8UAmNY
— ANI (@ANI) October 29, 2021
ಅಭಿಮಾನಿಗೆ ಹೃದಯಾಘಾತ
ಇನ್ನೂ ನಟ ಪುನೀತ್ ನಿಧನ ಸುದ್ದಿ ಕೇಳಿ ಅಭಿಮಾನಿಯೊಬ್ಬನಿಗೆ ಹೃದಯಾಘಾತವಾಗಿರುವ ವರದಿಯಾಗಿದೆ. ಹನೂರು ತಾಲೂಕು ಮರೂರಿನ ಮುನಿಯಪ್ಪ (29) ಸಾವನ್ನಪ್ಪಿದ್ದಾರೆ. ಇವರು ಪುನೀತ್ ಅಪ್ಪಟ ಅಭಿಮಾನಿಯಾಗಿದ್ರು. ಸಾವಿನ ಸುದ್ದಿ ಕೇಳುತ್ತಲೇ ಕುಸಿದುಬಿದ್ದ ಮುನಿಯಪ್ಪ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಡಾ. ರಾಜಕುಮಾರ್ ಸಮಾಧಿ ಪಕ್ಕದಲ್ಲಿ ಪುನಿತ್ ರಾಜಕುಮಾರ್ ಅಂತ್ಯಸಂಸ್ಕಾರ: ಪುನಿತ್ ರಾಜಕುಮಾರ್ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಕಂಠೀರವ ಸ್ಟುಡಿಯೋದ ಆವರಣದಲ್ಲಿನ ಡಾ. ರಾಜಕುಮಾರ್ ಸಮಾಧಿ ಸಮೀಪ ಮಾಡಲು ಅಧಿಸೂಚನೆ ಹೊರಡಿಸಿ ರಾಜ್ಯ ಸರ್ಕಾರ ಅನುಮತಿ ನೀಡಿದೆ.