ಬೆಂಗಳೂರು ದಕ್ಷಿಣದಲ್ಲಿ 'ಆ ವ್ಯಕ್ತಿ' ಬಿಜೆಪಿಯನ್ನು ಗೆಲ್ಲಿಸುತ್ತಾರಾ?
ಅನುಕಂಪದ ಅಲೆಯಲ್ಲಿ ನಿರಾಯಾಸವಾಗಿ ಗೆಲ್ಲಬಹುದಾಗಿದ್ದ ಕ್ಷೇತ್ರವೊಂದನ್ನು ಬಿಜೆಪಿ ವರಿಷ್ಠರು ಸುಖಾಸುಮ್ಮನೆ ಕಾಂಪ್ಲಿಕೇಟೆಡ್ ಮಾಡಿಕೊಂಡರಾ? ಸದ್ಯಕ್ಕಿರುವ ಗ್ರೌಂಡ್ ರಿಯಾಲಿಟಿಯ ಪ್ರಕಾರ, ಇದಕ್ಕೆ ಉತ್ತರ ಹೌದು. ಚುನಾವಣೆಗೆ ಇನ್ನೂ ನಾಲ್ಕು ವಾರದ ಸಮಯವಿದೆ, ಪರಿಸ್ಥಿತಿ ಹೇಗೆ ಬೇಕಾದರೂ ಬದಲಾಗಬಹುದು, ಆಗಲಿ...
ಬೆಂಗಳೂರು ದಕ್ಷಿಣ ಬಿಜೆಪಿಯ ಭದ್ರಕೋಟೆಯಾಗಿದ್ದರೂ, ಸತತವಾಗಿ ಬಿಜೆಪಿ ಈ ಕ್ಷೇತ್ರವನ್ನು ಉಳಿಸಿಕೊಂಡಿರುವುದಕ್ಕೆ ಅನಂತ್ ಕುಮಾರ್ ವರ್ಚಸ್ಸೂ ಕಾರಣ. ಸದ್ಯ, ಅನಂತ್ ಕುಮಾರ್ ಇಲ್ಲದ ಈ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಪರಿಚಯವಿಲ್ಲದ ಯುವ ಮುಖಂಡನ ಗೆಲುವಿಗೆ ಬರೀ ಮೋದಿ ಹೆಸರೊಂದೇ ಸಾಕೇ? ಬಿಜೆಪಿ ಮುಖಂಡರ 'ಸಂಘಟಿತ' ಪ್ರಯತ್ನ ಬೇಡವೇ?
ಬ್ರಹ್ಮಚಾರಿ, ಉಗ್ರ ಹಿಂದುತ್ವವಾದಿ ಬಿಎಲ್ ಸಂತೋಷ್ ಜೀ ವ್ಯಕ್ತಿಚಿತ್ರ
ಅಂಬರೀಶ್ ನಿಧನದ ನಂತರ ಸುಮಲತಾ ಪರವಾಗಿ ನಿಂತ ಬಿಜೆಪಿ, ಅನಂತ್ ಕುಮಾರ್ ಪತ್ನಿಯ ವಿಚಾರದಲ್ಲಿ ಯಾಕೆ ಅದೇ ರೀತಿಯಲ್ಲಿ ನಡೆದುಕೊಳ್ಳಲಿಲ್ಲ. ಮಂಡ್ಯ ಹೇಗೂ ಸೋಲುವ ಕ್ಷೇತ್ರ, ಅಭ್ಯರ್ಥಿಯನ್ನು ನಿಲ್ಲಿಸಿದರೂ ಒಂದೇ, ಬಿಟ್ಟರೂ ಒಂದೇ, ಬೆಂಗಳೂರು ಹಾಗಲ್ಲವಲ್ಲ ಎನ್ನುವ ರಾಜಕೀಯ ಲೆಕ್ಕಾಚಾರವೇ ಎನ್ನುವ ಕಾರ್ಯಕರ್ತರ, ಮತದಾರರ ಪ್ರಶ್ನೆಗಳಿಗೆ, ಪಕ್ಷ ಮತ್ತು ಸಂಘಟನೆ ಯಾವರೀತಿ ಉತ್ತರ ಕೊಡುತ್ತೋ?
ಅನಂತ್ ಕುಮಾರ್ ನಿಧನದ ನಂತರ, ಅವರ ಪತ್ನಿ ತೇಜಸ್ವಿನಿಯವರ ಹೆಸರೇ ಚಾಲ್ತಿಯಲ್ಲಿ ಇದ್ದದ್ದನ್ನು ಬಿಟ್ಟರೆ, ಮಿಕ್ಕೆಲ್ಲಾ ಹೆಸರುಗಳು ಹಾಗೇ ಬಂದು ಹೀಗೆ ಹೋಗುತ್ತಿತ್ತು. ಅದಮ್ಯ ಟ್ರಸ್ಟ್ ಮೂಲಕ ಬೆಂಗಳೂರಿಗರಿಗೆ ಚಿರಪರಿಚಿತರಾಗಿದ್ದ ತೇಜಸ್ವಿನಿಗೆ ಕೊನೇ ಕ್ಷಣದಲ್ಲಿ ಟಿಕೆಟ್ ತಪ್ಪಿದ್ದು ಹೇಗೆ ಅಂದರೆ, ಬೊಟ್ಟು ಕೇಶವಕೃಪದ ಕಡೆಗೆ ಹೋಗುತ್ತದೆ, ಜೊತೆಗೆ ಬಿ ಎಲ್ ಸಂತೋಷ್ ಕಡೆಗೆ ಕೂಡಾ..
ತೇಜಸ್ವಿ ಸೂರ್ಯಗೆ ಬೆಂ.ದಕ್ಷಿಣ ಟಿಕೆಟ್: ಬಿಜೆಪಿ ಮುಖಂಡರಲ್ಲಿ ಅಸಮಾಧಾನ
ಬಿಜೆಪಿ ವಲಯದಲ್ಲಿ ಸಂಘಟನಾ ಚತುರ ಎಂದೇ ಹೆಸರಾಗಿರುವ ಬಿ ಎಲ್ ಸಂತೋಷ್
ಬಿಜೆಪಿ ಬೇರೆ ಅಲ್ಲ, ಆರ್ ಎಸ್ ಎಸ್ ಬೇರೆ ಅಲ್ಲ ಎನ್ನುವುದು ಒಪ್ಪಿಕೊಳ್ಳುವ ಮಾತಾದಾರೂ, ಅನುಕಂಪದ ಅಲೆಯಲ್ಲಿ ಎಷ್ಟು ದಿನಾಂತ ಟಿಕೆಟ್ ಕೊಡಲು ಸಾಧ್ಯ ಎನ್ನುವ ನಿಲುವನ್ನು ಬಿಜೆಪಿ ವಲಯದಲ್ಲಿ ಸಂಘಟನಾ ಚತುರ ಎಂದೇ ಹೆಸರಾಗಿರುವ ಬಿ ಎಲ್ ಸಂತೋಷ್, ಕೇಂದ್ರ ಚುನಾವಣಾ ಸಮಿತಿಯ ಮುಂದೆ ಹೇಳಿದ್ದರು ಎನ್ನುವ ಮಾತು ಕೇಳಿಬರುತ್ತಿದೆ. ಮೇಲ್ನೊಟಕ್ಕೆ ವರ್ಕೌಟ್ ಆಗಿದ್ದು, ಇದೇ ಮಾತು..
ತೇಜಸ್ವಿ ಸೂರ್ಯಗೆ ಬಿಫಾರಂ ನೀಡಿಯಾಗಿದೆ, ಅವರು ನಾಮಪತ್ರ ಸಲ್ಲಿಸಿಯೂ ಆಗಿದೆ
ಅದೇನೇ ಇರಲಿ, ಬಿಜೆಪಿ ಯುವಮುಖಂಡ ತೇಜಸ್ವಿ ಸೂರ್ಯಗೆ ಬಿಫಾರಂ ನೀಡಿಯಾಗಿದೆ, ಅವರು ನಾಮಪತ್ರ ಸಲ್ಲಿಸಿಯೂ ಆಗಿದೆ, ನಾಮಪತ್ರ ಸಲ್ಲಿಸುವ ಕೊನೆಯ ದಿನವೂ ಮುಕ್ತಾಯಗೊಂಡಿದೆ. ಇನ್ನೇನಿದ್ದರೂ, ರಾಜ್ಯ ಹಿರಿಯ, ಕಿರಿಯ ಮತ್ತು ತೇಜಸ್ವಿ ಹೆಸರನ್ನು ಬಲವಾಗಿ ಶಿಫಾರಸು ಮಾಡಿದ್ದ ಸಂಘಪರಿವಾರ, ಬಿಜೆಪಿ ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಟೊಂಕ ಕಟ್ಟಿ ನಿಲ್ಲಬೇಕಿದೆ. ಇದು, RSS ಮುಖಂಡರ ಮರ್ಯಾದೆಯ ಪ್ರಶ್ನೆ ಎಂದರೆ ತಪ್ಪಾಗಲಾರದು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಆಯ್ಕೆಯ ಒಳಸುಳಿ
ತೇಜಸ್ವಿನಿ ಅನಂತ್ ಕುಮಾರ್ ಗೆ ತಪ್ಪಿದ ಟಿಕೆಟ್
ಬೆಂಗಳೂರಿನ ಹಿರಿಯ ಬಿಜೆಪಿ (ಕೆಲವು) ಮುಖಂಡರು ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ಆತ್ಮಸಾಕ್ಷಿಯಾಗಿ ಸಮರ್ಥಿಸಿಕೊಳ್ಳದಿದ್ದರೂ, ಅವರೇ ನಮ್ಮ ಅಭ್ಯರ್ಥಿ ಎಂದು ಬಿಜಿಪಿ ಸ್ಕ್ರೀನಿಂಗ್ ಕಮಿಟಿಗೆ ಶಿಫಾರಸು ಮಾಡಿ ಕಳುಹಿಸಿದ್ದರು. ಇದೇ ಖುಷಿಯಲ್ಲಿ ಪಕ್ಷದ ಕಚೇರಿಯನ್ನೂ ತೆರೆಯಲಾಗಿತ್ತು. ಆದರೆ, ಮೊದಲನೇ ಪಟ್ಟಿಯಲ್ಲಿ ಹದಿನೇಳು ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿ, ಬೆಂಗಳೂರು ದಕ್ಷಿಣ ಬಿಟ್ಟಾಗಲೇ, ಎಲ್ಲೋ ಎಡವಟ್ಟಾಗುತ್ತಿದೆ ಎಂದು ರಾಜ್ಯ ಬಿಜೆಪಿ ಮುಖಂಡರಿಗೆ ಅರಿವಾಗಲಾರಂಭಿಸಿತು.
ಸಂತೋಷ್ ಅವರ ರೆಕಮೆಂಡೇಶನ್ ಗೆ ಬಿಜೆಪಿ ವರಿಷ್ಠರು ಮಣೆಹಾಕಿದ್ದಾರಾ ಎನ್ನುವ ಪ್ರಶ್ನೆ
ನಾವು ತೇಜಸ್ವಿನಿ ಅವರ ಹೆಸರನ್ನು ಮಾತ್ರ ಶಿಫಾರಸು ಮಾಡಿದ್ದು ಎಂದು ಯಡಿಯೂರಪ್ಪ, ಅಶೋಕ್ ಆದಿಯಾಗಿ ಬಿಜೆಪಿ ಮುಖಂಡರು ಈಗ ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ. ಹಾಗಿದ್ದರೆ, ರಾಜ್ಯದ ಯಾವ ಮುಖಂಡರನ್ನೂ ಅಮಿತ್ ಶಾ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲವೇ? ತೇಜಸ್ವಿನಿ ಅನಂತ್ ಕುಮಾರ್ ಗೆ ಟಿಕೆಟ್ ಸಿಗುವುದಿಲ್ಲ ಎನ್ನುವ ಸಣ್ಣ ಸುಳಿವೂ ಇಲ್ಲಿನ ಮುಖಂಡರಿಗೆ ಸಿಕ್ಕಿರಲಿಲ್ಲವೇ? ಕೊನೇ ಕ್ಷಣದಲ್ಲಿ, ಆರ್ ಎಸ್ ಎಸ್ ಮುಖಂಡರ ರೆಕಮೆಂಡೇಶನ್ ಗೆ ಬಿಜೆಪಿ ವರಿಷ್ಠರು ಮಣೆಹಾಕಿದ್ದಾರಾ ಎನ್ನುವ ಪ್ರಶ್ನೆಗೆ ಬಹುತೇಕ ಹೌದು ಎನ್ನುವುದು ಬಿಜೆಪಿ ಆಪ್ತವಲಯದಿಂದಲೇ ಕೇಳಿಬರುತ್ತಿರುವ ಉತ್ತರ.
ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದೇಕೆ?
ಯಡಿಯೂರಪ್ಪ ಮತ್ತು ಸಂತೋಷ್ ಗೆ ಆಗಿಬರುವುದಿಲ್ಲ ಎನ್ನುವುದು ಬಹಳಷ್ಟು ಬಾರಿ ಸಾಬೀತಾಗಿದೆ
ಯಡಿಯೂರಪ್ಪ ಮತ್ತು ಸಂತೋಷ್ ಗೆ ಆಗಿಬರುವುದಿಲ್ಲ ಎನ್ನುವುದು ಬಹಳಷ್ಟು ಬಾರಿ ಸಾಬೀತಾಗಿ ಹೋಗಿದೆ. ಇಬ್ಬರ ನಡುವೆ ಸಂಘ ಪರಿವಾರದ ಮುಖಂಡರು ಸಂಧಾನ ಪ್ರಕ್ರಿಯೆಯನ್ನೂ ನಡೆಸಿದ್ದರು. ಬಿ ಎಲ್ ಸಂತೋಷ್ ಯಾವಾಗಲೂ ಒಂದು ಮಾತನ್ನು ಹೇಳುತ್ತಿರುತ್ತಾರೆ, 'ನಮ್ಮದು ಕಾರ್ಯಕರ್ತರನ್ನು ನಂಬಿರುವ ಪಕ್ಷ, ಕಾರ್ಯಕರ್ತನೂ ಅಭ್ಯರ್ಥಿ ನಮ್ಮಲ್ಲಿ ಆಗಬಹುದು' ಎಂದು. ಇದಕ್ಕೆ ಪೂರಕ ಎನ್ನುವಂತೆ, ಬಿಜೆಪಿ ಟಿಕೆಟ್ ಸಿಗುತ್ತದೆ ಎನ್ನುವುದನ್ನೂ ಊಹಿಸಲೂ ನನಗೆ ಸಾಧ್ಯವಾಗುತ್ತಿಲ್ಲ ಎಂದು ಖುದ್ದು ತೇಜಸ್ವಿ ಸೂರ್ಯ ಅವರೇ ಹೇಳಿದ್ದಾರೆ.
ತೇಜಸ್ವಿ ಸೂರ್ಯ ಉತ್ತಮ ಅಂತರದಿಂದ ಗೆದ್ದಿದ್ದೇ ಆದರೆ, ಅದು ಮತದಾರರಿಗೆ ಬಿಜೆಪಿ ಮೇಲಿರುವ ವಿಶ್ವಾಸ
ಬೆಂಗಳೂರು ಬಿಜೆಪಿಯಲ್ಲಿ ಎಷ್ಟೇ ಬಣಗಳಿರಲಿ, ಮೋದಿ ಮತ್ತೊಮ್ಮೆ ಎಂದು ಹೋದಲೆಲ್ಲಾ ಸಾರುತ್ತಿರುವ ಬಿಜೆಪಿ ಮುಖಂಡರು, ಸಂಘ ಪರಿವಾರ, ಕ್ಷೇತ್ರಕ್ಕೆ ತೇಜಸ್ವಿ ಸೂರ್ಯ ಎನ್ನುವ ಯುವ ನಾಯಕನನ್ನು ಮೊದಲು ಪರಿಚಯಿಸುವುದು, ಅದಾದ ನಂತರ ಗೆಲ್ಲಿಸಿಕೊಂಡು ಬರುವುದಕ್ಕೆ ಯಾವ ರೀತಿ ಗೇಮ್ ಪ್ಲ್ಯಾನ್ ಹಾಕಿಕೊಳ್ಳಲಿದೆ ಎನ್ನುವುದು ಕಾದು ನೋಡಬೇಕಿದೆ. ಒಂದು ವೇಳೆ, ತೇಜಸ್ವಿ ಸೂರ್ಯ ಉತ್ತಮ ಅಂತರದಿಂದ ಗೆದ್ದಿದ್ದೇ ಆದರೆ, ಅದು ಮತದಾರರಿಗೆ ಬಿಜೆಪಿ ಮೇಲಿರುವ ವಿಶ್ವಾಸ, ಮೋದಿ ಮೇಲಿನ ನಂಬಿಕೆ ಅಂದರೆ ತಪ್ಪಾಗಲಾರದು. ಬೆಂಗಳೂರು ದಕ್ಷಿಣ ಬಿಜೆಪಿಗೆ ಇನ್ನೊಂದು 'ಜಯನಗರ'ವಾಗದಿದ್ದರೆ ಸಾಕು ಎನ್ನುವುದು ಬಿಜೆಪಿ ಕಾರ್ಯಕರ್ತ ಬಯಕೆ. ಓವರ್ ಟು ಮತದಾರ..
ತೇಜಸ್ವಿನಿಗೆ ತಪ್ಪಿದ ಟಿಕೆಟ್, ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ