ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದ ನಿವೃತ ಕಾರ್ಮಿಕ ಅಧಿಕಾರಿ !
ಬೆಂಗಳೂರು, ಡಿಸೆಂಬರ್ 02: ನಿವೃತ್ತಿಯಾದರೂ ಲಂಚದ ದಾಹ ಕಡಿಮೆಯಾಗಿರಲಿಲ್ಲ. ಕಾರ್ಮಿಕರನ್ನು ನೇಮಿಸಿಕೊಳ್ಳಲು ಪರವಾನಗಿ ಪಡೆಯಲು ಮೂರು ವರ್ಷದ ಹಿಂದೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥ ಮಾಡಲಿಕ್ಕೆ ಲಂಚ ಸ್ವೀಕರಿಸಿ ನಿವೃತ್ತ ಲೇಬರ್ ಇನ್ಸ್ಪೆಕ್ಟರ್ ಹಾಗೂ ಸಹಾಯಕ ಕಾರ್ಮಿಕ ಆಯುಕ್ತ ಎಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ನಿವೃತ್ತಿಯಾದರೂ ಲಂಚ ಮೇಲಿನ ಆಸೆ ಇಳಿದಿರಲಿಲ್ಲ. ಇನ್ನೊಂದಡೆ ಮೂರು ವರ್ಷ ವಾದ್ರೂ ಪರವಾನಗಿ ನೀಡಿರಲಿಲ್ಲ ಎಂಬುದು ವಿಶೇಷ.
ಮಾಲೂರಿನ ನಿವಾಸಿಯೊಬ್ಬರು ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸಂಸ್ಥೆ ತಾತ್ಕಾಲಿಕ ಕಾರ್ಮಿಕರನ್ನು ನೇಮಿಸಿಕೊಳ್ಳಲು ಪರವಾನಗಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅದೂ 2017 ಸಲ್ಲಿಸಿದ್ದ ಅರ್ಜಿ. ಬನ್ನೇರುಘಟ್ಟ ರಸ್ತೆಯಲ್ಲಿರುವ ಸಹಾಯಕ ಕಾರ್ಮಿಕ ಆಯುಕ್ತರು ಪರವಾನಗಿ ನೀಡಬೇಕಿತ್ತು. ಪೂನಾದಲ್ಲಿರುವ ಖಾಸಗಿ ಸಂಸ್ಥೆ ಪರವಾನಗಿ ನೀಡುವಂತೆ ಕೇಳಿದಾಗ, ಎರಡು ಲಕ್ಷ ರೂಪಾಯಿ ಲಂಚ ನೀಡುವಂತೆ ಸಹಾಯಕ ಕಾರ್ಮಿಕ ಆಯುಕ್ತರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ 1.80 ಲಕ್ಷ ರೂ. ನೀಡುವಂತೆ ಕೇಳಿದ್ದಾರೆ. ಲಂಚದ ವ್ಯವಹಾರವನ್ನು ನಿವೃತ್ತ ಕಾರ್ಮಿಕ ಇನ್ಸ್ಪೆಕ್ಟರ್ ಮೂಲಕ ನಡೆಸಲು ಸೂಚಿಸಿದ್ದಾರೆ.
ಅದರಂತೆ ಮಂಗಳವಾರ 1.80 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಸಹಾಯಕ ಕಾರ್ಮಿಕ ಆಯುಕ್ತ ಸಂತೋಷ್ ಇಪ್ಪರಗಿ, ಹಾಗೂ ನಿವೃತ್ತ ಕಾರ್ಮಿಕ ಇನ್ಸ್ಪೆಕ್ಟರ್ ಶಿವಕುಮಾರ್ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಅಷ್ಟೂ ಲಂಚದ ಹಣ ವಶಕ್ಕೆ ಪಡೆದಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಿದ್ದಾರೆ. ಆರೋಪಿ ಅಧಿಕಾರಿಗಳನ್ನು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪರವಾನಗಿ ನೀಡಲು ಮೂರು ವರ್ಷದ ಹಿಂದೆಯೇ ಅರ್ಜಿ ಸಲ್ಲಿಸಲಾಗಿತ್ತು. ಲಂಚ ಕೊಡದ ಕಾರಣ ಇಷ್ಟು ವರ್ಷವಾದರೂ ಅರ್ಜಿ ಇತ್ಯರ್ಥ ಮಾಡಿರಲಿಲ್ಲ. ಸಹಾಯಕ ಕಾರ್ಮಿಕ ಆಯುಕ್ತರನ್ನು ಭೇಟಿ ಮಾಡಿದಾಗ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು ನಿವೃತ್ತ ಕಾರ್ಮಿಕ ಇನ್ಸ್ಪೆಕ್ಟರ್ ಮೂಲಕ ವ್ಯವಹಾರ ಕುದುರಿಸಿ ಸಿಕ್ಕಿಬಿದ್ದಿದ್ದಾರೆ. ನಿವೃತ್ತಿಯಾದರೂ ಕಚೇರಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ಕುರಿತು ಮತ್ತಷ್ಟು ಅಕ್ರಮಗಳು ಎಸಿಬಿಗೆ ಲಭ್ಯವಾಗಿವೆ ಎಂದು ತಿಳಿದು ಬಂದಿದೆ.