ಬೆಂಗಳೂರಿನಲ್ಲೆಲ್ಲೂ ವೈರಲ್ ಜ್ವರ: ಡೆಂಗ್ಯೂ, ಚಿಕುನ್ ಗುನ್ಯಾ ಭೀತಿ
ಕೇರಳಕ್ಕೆ ಕಾಲಿಟ್ಟಿದ್ದ ವೈರಲ್ ಜ್ವರ ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಇದೇ ವರ್ಷ ಜನವರಿಯಿಂದ ಈವರೆಗೆ ಸುಮಾರು 2000 ಸಾವಿರ ಮಂದಿ ಜ್ವರ ಪೀಡಿತರು ಚಿಕಿತ್ಸೆ ಪಡೆದಿರುವುದಾಗಿ ದಾಖಲೆಗಳು ಹೇಳುತ್ತಿವೆ.
ಬೆಂಗಳೂರು, ಜುಲೈ 18: ಕೆಲವು ದಿನಗಳ ಹಿಂದಷ್ಟೇ ಕೇರಳದಲ್ಲಿ ರುದ್ರತಾಂಡವ ನಡೆಸಿದ್ದ ವೈರಲ್ ಜ್ವರ ಇದೀಗ ರಾಜ್ಯಕ್ಕೂ ಕಾಲಿಟ್ಟಿದ್ದೂ, ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ (ಬಿಬಿಎಂಪಿ) ವ್ಯಾಪ್ತಿಯೊಂದರಲ್ಲೇ ಈವರೆಗೆ ಸುಮಾರು 2000 ಜ್ವರ ಸೋಂಕು ತಗುಲಿರುವುದಾಗಿ ವರದಿಗಳು ಹೇಳಿವೆ.
ಡೆಂಗ್ಯೂ ಭೀತಿ: ಸೊಳ್ಳೆ ಬ್ಯಾಟ್, ಪರಂಗಿ ಹಣ್ಣಿಗೆ ಡಿಮ್ಯಾಂಡೋ ಡಿಮ್ಯಾಂಡು!
ಈ ಸಂಖ್ಯೆಯು ಜನವರಿಯಿಂದ ಇಲ್ಲಿಯವರೆಗೆ ಸೋಂಕಿಗೆ ತುತ್ತಾಗಿರುವ ವ್ಯಕ್ತಿಗಳದ್ದಾಗಿದ್ದು, ಆದರೆ, ಈ ಎಲ್ಲಾ ಪ್ರಕರಣಗಳು ಡೆಂಗ್ಯೂ ಅಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.
ಜುಲೈ 16ರ ಭಾನುವಾರದೊಳಗೆ ಬೆಂಗಳೂರಿನಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ 1,991ರಷ್ಟಿದೆ. ಇದೀಗ ಹೊಸ ಪಟ್ಟಿಯೊಂದನ್ನು ತಯಾರಿಸಲು ಬಿಬಿಎಂಪಿಯ ಆರೋಗ್ಯ ಇಲಾಖೆಯು ನಿರ್ಧರಿಸಿದ್ದು, ಸದ್ಯದಲ್ಲೇ ಇದರ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಅಂದಾಜಿಸಲಾಗಿದೆ.
ಡೆಂಗ್ಯೂ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು...
ಬಿಬಿಎಂಪಿಯ ಮುಖ್ಯ ವೈದ್ಯಾಧಿಕಾರಿಯಾದ ಡಾ. ಎಂ.ಎನ್. ಲೋಕೇಶ್ ಅವರ ಪ್ರಕಾರ, ಹೊಸ ಪಟ್ಟಿಯಲ್ಲಿ ಈ ಹಿಂದಿದ್ದ ಡೆಂಗ್ಯೂ ಪೀಡಿರ ಸಂಖ್ಯೆಗೆ ಇನ್ನು 100 ಮಂದಿ ಹೆಚ್ಚಳವಾಗಿ ಸೇರ್ಪಡೆಗೊಳ್ಳಬಹುದು. ಹಾಗೆ ನೋಡಿದರೆ, ಬೆಂಗಳೂರು ವ್ಯಾಪ್ತಿಯಲ್ಲಿ ಡೆಂಗ್ಯೂ ಹಾಗೂ ಚಿಕುನ್ ಗುನ್ಯಾ ಪೀಡಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿಲ್ಲ. ಈ ಎರಡೂ ಕಾಯಿಲೆಗಳು ನಿಯಂತ್ರಣದಲ್ಲಿವೆ.
ಆದರೆ, ವಾಸ್ತವ ಏನು, ಸರ್ಕಾರ ಹಾಗೂ ಆರೋಗ್ಯ ಇಲಾಖೆಯು ಏನು ಹೇಳುತ್ತದೆ, ಜ್ವರ ಸೋಂಕು ತಾಗದಂತೆ ನಾಗರಿಕರು ಕೈಗೊಳ್ಳಬಹುದಾದ ಮುನ್ನಚ್ಚರಿಕೆ ಕ್ರಮಗಳೇನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿ ನಿಮಗಾಗಿ.
ಅತಿ ಜ್ವರ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ ಎಂದ ಖಾಸಗಿ ವೈದ್ಯರು
ಬಿಬಿಎಂಪಿ ವೈದ್ಯಾಧಿಕಾರಿಗಳ ಈ ಹೇಳಿಕೆಯನ್ನು ಖಾಸಗಿ ವೈದ್ಯರು ನಿರಾಕರಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಅತಿ ಜ್ವರದಿಂದ ದಾಖಲಾಗುತ್ತಿರುವ ವ್ಯಕ್ತಿಗಳ ಸಂಖ್ಯೆ ಗಣನೀಯವಾಗಿ ಏರಿದೆ. ಇದು ವೈರಲ್ ಫೀವರ್ ಎಂದು ಗೊತ್ತಾದ ಕೂಡಲೇ ಡೆಂಗ್ಯೂ ಖಾತ್ರಿಯಾಗದಿದ್ದರೂ ಕೂಡಲೇ ಜನರು ಆಸ್ಪತ್ರೆಗೆ ಬಂದು ಸೇರಿಕೊಳ್ಳುತ್ತಿದ್ದಾರೆ.
ಕರ್ನಾಟಕದಲ್ಲಿ ಸಾವಿನ ಕಹಳೆ ಊದಿದ ಡೆಂಗ್ಯೂ: ಮುಂಜಾಗ್ರತೆ ಏನು?
ಖಾಗಿ ಆಸ್ಪತ್ರೆಗಳಲ್ಲಿ ಹೆಚ್ಚೆಚ್ಚು ಸೋಂಕು ಪೀಡಿತರು
ವೈರಲ್ ಜ್ವರದ ಬಗ್ಗೆ ಮಾಹಿತಿ ನೀಡಿರುವ ವಿಕ್ರಮ್ ಆಸ್ಪತ್ರೆಯ ವೈದ್ಯರು ಡಾ. ರಮಣ ರಾವ್, ''ಹೆಚ್ಚೆಚ್ಚು ಜನರು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವುದರಿಂದ ಹಲವಾರು ಆಸ್ಪತ್ರೆಗಳು ತಮ್ಮ ಸಾಮರ್ಥ್ಯಕ್ಕೂ ಮೀರಿದ ಸೌಕರ್ಯಗಳನ್ನು ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಖಾಸಗಿ ಆಸ್ಪತ್ರೆಗಳು ತಮ್ಮ ಕೈಲಾದ ಸೇವೆ ನೀಡುತ್ತಿವೆ. ಆದರೆ, ಈವರೆಗೆ ದಾಖಲಾಗಿರುವ ಜ್ವರ ಪೀಡಿತರಲ್ಲಿ ಅನೇಕರು ಡೆಂಗ್ಯೂ , ಚಿಕುನ್ ಗುನ್ಯಾದಿಂದ ಮುಕ್ತರಾಗಿದ್ದಾರೆಂಬುದೇ ಸಮಾಧಾನಕರ ಸಂಗತಿ'' ಎಂದಿದ್ದಾರೆ.
ವೈದ್ಯಕೀಯ ಸಲಹೆ ಅನುಸರಿಸುವುದು ಮುಖ್ಯ
ಡಾ. ರಮಣ ರಾವ್ ಅವರು ಹೇಳುವ ಪ್ರಕಾರ, ಸಾಮಾನ್ಯವಾಗಿ ಮಳೆಗಾಲದಲ್ಲಿ ಬರುವ ಸೋಂಕು ಈ ವೈರಲ್ ಜ್ವರ. ಆದರೆ, ಇದಕ್ಕೆ ಭಯಪಡುವ ಅಗತ್ಯವಿಲ್ಲ. ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಲಭಿಸಿದರೆ, ಸರಿಯಾದ ವೈದ್ಯಕೀಯ ತಿಳುವಳಿಕೆ ಅನುಸರಿಸಿದರೆ ಸೋಂಕಿನಿಂದ ಬೇಗ ಮುಕ್ತಿ ಸಿಗುತ್ತದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲ?
ಅದೇನೋ ಸರಿ. ಆದರೆ, ವೈರಲ್ ಜ್ವರ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆ ಸೌಲಭ್ಯ ಸಿಗುವುದೇ ದುರ್ಲಭವಾಗಿದೆ ಎನ್ನುತ್ತಿದೆ ಮತ್ತೊಂದು ಮಾಹಿತಿ. ಖಾಸಗಿ ಆಸ್ಪತ್ರೆಗಳ ಮಾತು ಬಿಡಿ. ಆರ್ಥಿಕವಾಗಿ ದುರ್ಬಲರಾದವರ ಆಶಾಕಿರಣವಾಗಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚೆಚ್ಚಾಗಿ ಬರುತ್ತಿರುವ ಸೋಂಕು ಪೀಡಿತರಿಗೆ ಹಾಸಿಗೆ ಸೌಲಭ್ಯಗಳ ಕೊರತೆ ಹೆಚ್ಚಾಗಿ ಕಾಡುತ್ತಿದೆ ಎನ್ನಲಾಗುತ್ತಿದೆ. ಆದರೆ, ಆರೋಗ್ಯ ಇಲಾಖೆಯು ಈ ವದಂತಿಗಳನ್ನು ತಳ್ಳಿಹಾಕಿದೆ. ಪ್ರತಿಯೊಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಜ್ವರ ಪೀಡಿತರಿಗೆ ಬೇಕಾದ ಸೌಕರ್ಯಗಳಿದ್ದು ಹಾಸಿಗೆಗಳಿಗಾಗಲೀ, ಔಷಧಿಗಳಿಗಾಗಲೀ ಯಾವುದೇ ಕೊರತೆಯಿಲ್ಲ ಎಂದಿದೆ.
ಸರ್ಕಾರದ ಮಾತಿಗೆ ದನಿಗೂಡಿಸಿದ ಬಿಬಿಎಂಪಿ
ಇನ್ನು, ರಕ್ತ ಭಂಡಾರಗಳಲ್ಲಿಯೂ ಹೆಚ್ಚೆಚ್ಚು ರಕ್ತ, ಪ್ಲೇಟ್ ಲೆಟ್ ಗಳ ಬೇಡಿಕೆ ಬರುತ್ತಿದ್ದು, ಅದಕ್ಕೂ ಯಾವುದೇ ಕೊರತೆಯಿಲ್ಲ ಎಂದು ಇಲಾಖೆ ಹೇಳಿದೆ. ಬಿಬಿಎಂಪಿಯೂ ಇದಕ್ಕೆ ದನಿಗೂಡಿಸಿದೆ.
ಸೋಂಕಿಗೆ ಒಳಗಾಗದಂತೆ ಕೆಲವು ಸಲಹೆಗಳು
ಏತನ್ಮಧ್ಯೆ, ಆರೋಗ್ಯ ಇಲಾಖೆಯು ಜ್ವರದ ಸೋಂಕು ತಡೆಗಟ್ಟಲು ಕೆಲವಾರು ಮಾರ್ಗಸೂಚಿಗಳನ್ನು ನೀಡಿದೆ. ಬೆಚ್ಚಗಿನದ್ದಾದ ಮೈತುಂಬಾ ಉಡುಪುಗಳನ್ನು ತೊಡಬೇಕು. ಕಲುಷಿತ, ನಿಂತ ನೀರಿನ ಸೇವನೆಯಿಂದ ದೂರವಿರಬೇಕು. ರಾತ್ರಿ ಮಲಗುವಾಗ ಸೊಳ್ಳೆ ಪರದೆ ಅಥವಾ ಸೊಳ್ಳೆ ನಿಯಂತ್ರಕಗಳನ್ನು ಉಪಯೋಗಿಸಬೇಕು. ನಿಮ್ಮ ಮನೆಯ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛತೆಗೆ ಹೆಚ್ಚಿನ ನೆರವು ಬೇಕಿದ್ದಲ್ಲಿ ಸ್ಥಳೀಯ ಸರ್ಕಾರಗಳ ಸಹಾಯ ಪಡೆದುಕೊಳ್ಳಬೇಕು ಎಂದು ಹೇಳಿದೆ.