ಹೈಡ್ರಾಮಾದ ಬಳಿಕ ಬಿಜೆಪಿ ಶಾಸಕರ ರೆಸಾರ್ಟ್ ರಾಜಕೀಯಕ್ಕೆ ತೆರೆ
ಬೆಂಗಳೂರು, ಜುಲೈ 24: ಎಚ್ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಂತೆಯೇ ರಮಡಾ ರೆಸಾರ್ಟ್ನಲ್ಲಿ ತಂಗಿದ್ದ ಬಿಜೆಪಿ ಶಾಸಕರು ಜಾಗ ಖಾಲಿ ಮಾಡಿದ್ದಾರೆ.
ಕಳೆದ ಸುಮಾರು 20 ದಿನಗಳಿಂದ ಕರ್ನಾಟಕ ರಾಜಕೀಯ ಅಲ್ಲೋಲಕಲ್ಲೋಲವಾಗಿದೆ. ಅಂತೂ ಈಗ ಒಂದು ನೆಲೆ ಸಿಕ್ಕಂತಾಗಿದೆ. ಅತೃಪ್ತ ಶಾಸಕರ ರಾಜೀನಾಮೆ, ಕುಮಾರ ಸ್ವಾಮಿ ರಾಜೀನಾಮೆ, ವಿಶ್ವಾಸಮತ ಹೀಗೆ ದಿನಂಪ್ರತಿ ಬೆಳವಣಿಗೆಗಳು ನಡೆಯುತ್ತಲೇ ಇದ್ದವು.
Live Updates ರಾಜ್ಯ ರಾಜಕಾರಣದಲ್ಲಿ ಇಂದೇನು ಆಗಲಿದೆ?
ರಾಜ್ಯ ರಾಜಕೀಯ ಬೆಳವಣಿಗೆಗಳು ದೇಶದೆಲ್ಲೆಡೆ ಚರ್ಚೆಯಾಗುತ್ತಿದ್ದು, ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ರಿಲ್ಯಾಕ್ಸ್ ಆಗಿ ವಾರದ ಹಿಂದೆ ಕ್ರಿಕೆಟ್ ಆಡುತ್ತಿದ್ದರು. ಈ ವಾರ ಅದೇ ಹೊತ್ತಿಗೆ ರಾಜ್ಯವನ್ನಾಳಲು ಸಿದ್ಧವಾಗಿದ್ದಾರೆ.
ಕಾಂಗ್ರೆಸ್ ಜೆಡಿಎಸ್ ನಾಯಕರು ರಿವರ್ಸ್ ಆಪರೇಷನ್ ಮಾಡುವ ಭೀತಿಯಿದ ಬಿಜೆಪಿ ಶಾಸಕರು ರಮಡಾ ರೆಸಾರ್ಟ್ನಲ್ಲಿ ತಂಗಿದ್ದರು.
ಈ ಮೂಲಕ 16 ದಿನಗಳಿಂದ ಶಾಸಕರಿಂದ ತುಂಬಿ ತುಳುಕುತ್ತಿದ್ದ ರಮಡಾ ರೆಸಾರ್ಟ್ ಇದೀಗ ಖಾಲಿಯಾಗಿದೆ. ಶಾಸಕರು ವಿಧಾನಸೌಧದಿಂದ ಮಂಗಳವಾರ ರಾತ್ರಿ ನೇರವಾಗಿ ರಮಡಾ ರೆಸಾರ್ಟಿಗೆ ಆಗಮಿಸಿದ್ದರು. ಬಳಿಕ ಬೆಂಗಳೂರಿನ ಸುತ್ತಮುತ್ತಲಿನ ಶಾಸಕರು ಮನೆಗೆ ತೆರಳಿದ್ದಾರೆ. ಉಳಿದ ಕೆಲ ಶಾಸಕರು ಶಾಸಕರ ಭವನದ ತಮ್ಮ ಕೊಠಡಿಗಳಿಗೆ ಹಾಗೂ ಹೋಟೆಲ್ ಗಳಿಗೆ ತೆರಳಿದ್ದಾರೆ.
ಉತ್ತರ ಕರ್ನಾಟಕ ಮೂಲದ ಕೆಲ ಶಾಸಕರು ಬೆಂಗಳೂರು ಶಾಸಕರ ನಿವಾಸಗಳಿಗೆ ತೆರಳಿದ್ದಾರೆ. ರಮಡಾ ರೆಸಾರ್ಟ್ ಹಾಗೂ ಸಾಯಿಲೀಲಾ ಹೋಟೆಲಿನಲ್ಲಿ ವಾಸ್ತವ್ಯವಿದ್ದ ಎಲ್ಲಾ ಶಾಸಕರು ನಿನ್ನೆ ತಡರಾತ್ರಿಯೇ ರೂಂ ಖಾಲಿ ಮಾಡಿದ್ದಾರೆ.
ಸದ್ಯ ರಮಡಾ ರೆಸಾರ್ಟ್ ಹಾಗೂ ಸಾಯಿಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಯಾವ ಬಿಜೆಪಿ ಶಾಸಕರು ಇಲ್ಲ. ತಡರಾತ್ರಿ ಆದ್ದರಿಂದ ಶಾಸಕರುಗಳು ತಂಗಿದ್ದ ರೂಂಗಳಲ್ಲಿ ಅವರ ಬೆಂಬಲಿಗರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಹೈಡ್ರಾಮಾದ ಬಳಿಕ ಬಿಜೆಪಿ ರೆಸಾರ್ಟ್ ರಾಜಕೀಯಕ್ಕೆ ತೆರೆ ಬಿದ್ದಂತಾಗಿದೆ.