ಬಿಎಸ್ವೈ ಸ್ಪರ್ಧಿಸೋಲ್ಲ; ಶೋಭಾ ಕರಂದ್ಲಾಜೆ ಕಥೆಯೇನು?
ಬೆಂಗಳೂರು, ಜ.15: ನರೇಂದ್ರ ಮೋದಿಯನ್ನು ಪ್ರಧಾನಿಯಾಗುವ ಸದುದ್ದೇಶದಿಂದ ಬಿಜೆಪಿ ಮರಳಿ, ಬಿಜೆಪಿಗೆ ಮರಳಿದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅಖಂಡ ತನು-ಮನ-ಧನದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಂಕಣಬದ್ಧರಾಗಿದ್ದಾರೆ.
ಆದರೆ ಈ ಮಧ್ಯೆ ಬಿಜೆಪಿಯ ಮಾಜಿ ಸಚಿವೆ, ಯಡಿಯೂರಪ್ಪನವರ ಆಪ್ತರಾದ ಶೋಭಾ ಕರಂದ್ಲಾಜೆ ಅವರ ಕಥೆಯೇನು? ಯಡಿಯೂರಪ್ಪ ಅವರ ಹಾದಿಯಲ್ಲೇ ಸಾಗುವ ಶೋಭಾ ಸಹ ಚುನಾವಣಾ ಕಣದಿಂದ ಹಿಂದೆಸರಿಯುತ್ತಾರಾ? ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ದುಡಿಯುತ್ತಾರಾ? ಎಂಬ ಪ್ರಶ್ನೆಗಳು ಕಾಡತೊಡಗಿವೆ.
ಈ ಮಧ್ಯೆ, ಬಿಎಸ್ವೈ ಕೆಜೆಪಿ ಸ್ಥಾಪಿಸಿ ತಮ್ಮಿಂದ ವಿಮುಖರಾಗುತ್ತಿದ್ದಂತೆ ಪಕ್ಷದ ಹಿರಿಯ ನಾಯಕರಿಗೂ ಸಹಜವಾಗಿ ಶೋಭಾ ಸಹ ಅಪಥ್ಯವಾಗಿದ್ದರು. ಆದರೆ ಈಗ ಕಾಲ ಬದಲಾಗಿದೆ. ಶೋಭಾ ಕಣಕ್ಕಿಣಿಯಬೇಕು ಎಂಬ ಒತ್ತಾಯ/ ಒತ್ತಾಸೆ ಅದೇ ನಾಯಕರ ಕಡೆಯಿಂದ ಕೇಳಿಬರುತ್ತಿದೆ.
ಹಾಗಾದರೆ ಶೋಭಾ ಎಲ್ಲಿ!?: ಅಂದರೆ ಒಕ್ಕಲಿಗ ಸಮುದಾಯದ ಶೋಭಾ ಅವರು ಎಲ್ಲಿಯಾದರೂ ಸ್ಪರ್ಧಿಸಲಿ ನಮ್ಮದೇನೂ ಅಭ್ಯಂತರವಿಲ್ಲ ಎಂದು ಉಡುಪಿ-ಚಿಕ್ಕಮಗಳೂರು, ಮೈಸೂರು-ಕೊಡಗು, ಬೆಂಗಳೂರು, ತುಮಕೂರು ಕ್ಷೇತ್ರದ ಬಿಜೆಪಿ ನಾಯಕರು ಘಂಟಾಘೋಷವಾಗಿ ಹೇಳಿದ್ದಾರೆ.
ತಾವಿಬ್ಬರೂ ಸ್ಪರ್ಧಿಸೋಲ್ಲ- ಯಡಿಯೂರಪ್ಪ ಶೋಭಾ: ಆದರೆ ಪರಿಸ್ಥಿತಿ ಹೀಗಿರುವಾಗ ಖುದ್ದು ಶೋಭಾ ಅವರು ಯಡಿಯೂರಪ್ಪನವರಂತೆ ತಾವೂ ಸ್ಪರ್ಧಿಸೋಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪ ಸಹ ಇದನ್ನೇ ಸ್ಪಷ್ಟಪಡಿಸಿದ್ದು, ತಾವೂ ಮತ್ತು ಶೋಭಾ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸೋಲ್ಲ ಎಂದಿದ್ದಾರೆ.
ಇದೇ ವೇಳೆ, ಕಳೆದೊಂದು ವರ್ಷದ ತಮ್ಮ ಹಾದಿಯನ್ನು ಹಿಂದಿರುಗಿ ನೋಡಿರುವ ಶೋಭಾ ಅವರು ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಉದ್ಧಾರವಾಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರಂತೆ. ತಮಿಳುನಾಡು, ಆಂಧ್ರ ಮತ್ತು ಉತ್ತರ ಪ್ರದೇಶಗಳಲ್ಲಿ ಪ್ರಾದೇಶಿಕ ಪಕ್ಷಗಳು ನೆಲೆಗಾಣುತ್ತವೆ. ಆದರೆ ಕರ್ನಾಟಕದಲ್ಲಿ ಅಲ್ಲ ಎಂಬುದನ್ನು ಮನಗಾಣಿದ್ದಾರಂತೆ.
ಇದೀಗ ಒಂದುಗೂಡಿರುವ ಬಿಜೆಪಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸೀಟುಗಳಿಗೆ ಮೋಸವಿಲ್ಲದಂತೆ ಗೆಲುವು ಸಾಧಿಸಲಿದೆ ಎಂದು ವರ್ಚಸ್ವೀ ನಾಯಕಿ ಶೋಭಾ ಕರಂದ್ಲಾಜೆ ಅವರು ತಿಳಿಸಿದ್ದಾರೆ.