ಬೆಡ್ ಬ್ಲಾಕಿಂಗ್ ದಂಧೆ ಹೊರ ಬಂದ ನಂತರವೂ ಐಸಿಯು ಬೆಡ್ ಸಿಗುತ್ತಿಲ್ಲ ಯಾಕೆ?
ಬೆಂಗಳೂರು, ಮೇ. 05: "ಬೆಡ್ ಬ್ಲಾಕಿಂಗ್ ದಂಧೆಯಿಂದ ಜನರಿಗೆ ಬೆಡ್ ಗಳು ಸಿಗುತ್ತಿಲ್ಲ, ನಾಲ್ಕು ಸಾವಿರ ಬೆಡ್ಗಳು ಖಾಲಿ ಇವೆ ! ನಾಳೆಯಿಂದ ನೋಡಿ ಒಬ್ಬರೂ ಬೆಡ್ ಇಲ್ಲ ಅಂತ ಪರದಾಡಲ್ಲ.ನಾಲ್ಕು ದಿನದಿಂದ ಇನ್ವೆಸ್ಟಿಗೇಷನ್ ಮಾಡಿ ಈ ದಂಧೆ ಬಯಲಿಗೆ ಎಳೆದಿದ್ದೇನೆ ಅಂತ "ಸೌತ್ ಕೋವಿಡ್ ವಾರ್ ರೂಮ್ ಮೇಲೆ" ದಾಳಿ ನಡೆಸಿದ ಬಳಿಕ ಸಂಸದ ತೇಜಸ್ವಿ ಸೂರ್ಯ ಹೇಳಿದ್ದರು. ಸೀಟ್ ಬ್ಲಾಕಿಂಗ್ ದಂಧೆಯಿಂದ ಬಯಲಿಗೆ ಬಂದ ಬಿಬಿಎಂಪಿ ಬೆಡ್ಗಳು ಒಂದೇ ದಿನದಲ್ಲಿ ತುಂಬಿ ಹೋದವೇ ಎನ್ನುವ ಪ್ರಶ್ನೆ ಎದುರಾಗಿದೆ.
Recommended Video
ಕೊರೊನಾ ಬೆಡ್ ಬ್ಲಾಕಿಂಗ್ ದಂಧೆ: ಬೆಡ್ ಬ್ಲಾಕಿಂಗ್ ಮಾಡ್ತಿದ್ದ ಇಬ್ಬರು ಬಂಧನ
ಬೆಳಗ್ಗೆ 8 ಗಂಟೆಯಿಂದ ರೋಗಿಯೊಬ್ಬರು ಬಿಬಿಎಂಪಿಯಿಂದ ಬೆಡ್ ಪಡೆಯಲು ಬಿಬಿಎಂಪಿ ಎಲ್ಲಾ ವಲಯದ ವಾರ್ ರೂಮ್ ಕಾಲ್ಸೆಂಟರ್ಗಳಿಗೆ ಕರೆ ಮಾಡಿದ್ದಾರೆ. ವಿಪರ್ಯಾಸ ಅಂದರೆ ಸಂಜೆ ಐದು ಗಂಟೆ ವರೆಗೂ ಪ್ರಯತ್ನಿಸಿದರೂ ಒಂದೇ ಒಂದು ಐಸಿಯು ಬೆಡ್ ಪಡೆಯಲಾಗಿಲ್ಲ. ಇದು ಒಬ್ಬರ ಕಥೆ. ಇನ್ನು ಐಸಿಯು ಬೆಡ್ಗಾಗಿ ಬಿಬಿಎಂಪಿ ಕೋವಿಡ್ ಕಾಲ್ಸೆಂಟರ್ಗಳಿಗೆ ಅದೆಷ್ಟು ಸಾವಿರ ಮಂದಿ ಕರೆ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಬೆಡ್ ಮಾತ್ರ ಸಿಕ್ಕಿಲ್ಲ ಅಂತಲೇ ಹೇಳಬಹುದು. ಇನ್ನು ಬೆಡ್ ಕೇಳಿಕೊಂಡು ತೇಜಸ್ವಿ ಸೂರ್ಯ ದಾಳಿ ಮಾಡಿದ ದಕ್ಷಿಣ ಕೋವಿಡ್ ವಾರ್ ರೂಮ್ ಕಾಲ್ಸೆಂಟರ್ಗೆ ಕರೆ ಮಾಡಿದರೆ ಅವರು ಹೇಳಿರುವ ಉತ್ತರ ಕೇಳಿ ಗಾಬರಿ ಆಯಿತು.
ಅವರ ಹೆಸರು ದೇವರಾಜು. ವಯಸ್ಸು 63 ವರ್ಷ, ಎಸ್ಆರ್ಎಫ್ ಐಡಿ ಸಂಖ್ಯೆ 2952510940121, BU ನಂಬರ್ - BU-598813, ಕಳೆದ ಒಂದು ದಿನದಿಂದ ಐಸಿಯು ಬೆಡ್ಗಾಗಿ ಅಲೆಯುತ್ತಿದ್ದಾರೆ. ಇಂದು ಬೆಳಗ್ಗೆ ಎಂಟು ಗಂಟೆಯಿಂದಲೇ ಬಿಬಿಎಂಪಿ ಕಾಲ್ಸೆಂಟರ್ಗೆ ಕರೆ ಮಾಡಿ ಹೈರಾಣ ಆಗಿದ್ದಾರೆ. ನಿನ್ನೆಯಷ್ಟೇ ಬೆಡ್ ಬ್ಲಾಕಿಂಗ್ ಹಗರಣ ಬೆಳಕಿಗೆ ತಂದ ಸಂಸದ ತೇಜಸ್ವಿ ಸೂರ್ಯ ಅವರು ಪ್ರತಿನಿಧಿಸುವ ದಕ್ಷಿಣ ವಿಭಾಗದ ಬಿಬಿಎಂಪಿ ವಾರ್ ರೂಮ್ಗೆ ಕರೆ ಮಾಡಿ ಪರಿ ಪರಿ ಬೇಡಿಕೊಂಡರೂ ಒಂದು ಐಸಿಯು ಬೆಡ್ ಗಿಟ್ಟಲಿಲ್ಲ. ಈಗಾಗಲೇ ಸಾಮಾನ್ಯ ಆಸ್ಪತ್ರೆಯಲ್ಲಿ ಖಾಸಗಿ ಚಿಕಿತ್ಸೆ ಪಡೆಯುತ್ತಿರುವ ದೇವರಾಜ್ ಅವರಿಗೆ ಐಸಿಯು ಬೆಡ್ ಬೇಕಿದೆ ಒದಗಿಸಿ ಕೊಡಿ ಎಂದರೆ, ನೀವು 108 ಗೆ ಕರೆ ಮಾಡಿ. ಅವರಿಗೆ ಎಮೆರ್ಜೆನ್ಸಿ ಅಂತ ಹೇಳಿ. ಪೋರ್ಟಲ್ನಲ್ಲಿ ತೋರಿಸುತ್ತಿಲ್ಲ ಎಂದು ಉಡಾಫೆ ಉತ್ತರ ನೀಡಿದರು.
ಇನ್ನು ನಿನ್ನೆಯಷ್ಟೇ ಸಂಸದರು ಬ್ಲಾಕ್ ಸೀಟ್ ಹೊರಗೆ ಎಳೆದರಲ್ಲಪ್ಪಾ, ಒಂದು ಬೆಡ್ ಕೊಡಿ ಎಂದರೆ, ನಿಮಗೆ ಯಾರು ಐಸಿಯು ಬೆಡ್ ಇದೆ ಅಂತ ಅವರಿಗೆ ಹೇಳಿ ಬೆಡ್ ತೆಗೆದುಕೊಳ್ಳಿ. ನಮ್ಮ ಪೋರ್ಟಲ್ನಲ್ಲಿ ಬೆಡ್ ಇಲ್ಲ. ನಾವೇನು ಮಾಡೋಕೆ ಆಗಲ್ಲ ಎಂದು ಉತ್ತರಿಸಿ ಕರೆ ಕಡಿತಗೊಳಿಸಿದ್ದಾರೆ. ಒಂದು ದಿನ ಪರದಾಡಿದರೂ ಒಂದು ಬೆಡ್ ಸಿಕ್ಕಿಲ್ಲ. ಇದು ಒಬ್ಬರ ಕಥೆ. ಇನ್ನು ಇದೇ ರೀತಿ ಅದೆಷ್ಟು ಮಂದಿ ಕರೆ ಮಾಡಿದರೋ ಗೊತ್ತಿಲ್ಲ. ಸೀಟ್ ಬ್ಲಾಕ್ ದಂಧೆಯಿಂದ ಖಾಲಿಯಾದ ಹಾಸಿಗೆಗಳು ಒಂದೇ ದಿನದಲ್ಲಿ ತುಂಬಿ ಹೋದವೇ ? ಅಷ್ಟು ಮಂದಿಗೆ ಒಂದೇ ದಿನ ಬಿಯು ನಂಬರ್ ಹೇಗೆ ಸಿಕ್ಕಿತು ? ಬೆಂಗಳೂರಿನಲ್ಲಿ ಕೋವಿಡ್ ರೋಗಿಗಳಿಗೆ ಬೆಡ್ ಸಿಗುತ್ತಿಲ್ಲ. ಪರಿಸ್ಥಿತಿ ಘೋರವಾಗಿದೆ ಎಂಬ ವಾಸ್ತವದ ಮೇಲೆ ಹಗರಣ ನೆಪ ಇಟ್ಟು ತಪ್ಪಿಸಿಕೊಳ್ಳುವ ಪ್ರಯತ್ನವೇ ಎಂಬ ಅನುಮಾನ ಮೂಡಿಸಿದೆ.