ಏರೋ ಇಂಡಿಯಾ ದೆಸೆಯಿಂದ 300ಕ್ಕೂ ಅಧಿಕ ಮಾಂಸದಂಗಡಿ ಬಂದ್
ಬೆಂಗಳೂರು, ಫೆಬ್ರವರಿ 19: ಯಲಹಂಕ ವಾಯುನೆಲೆ ಸುತ್ತಮುತ್ತಲ ಪ್ರದೇಶಗಳ 300ಕ್ಕೂ ಹೆಚ್ಚು ಮಾಂಸ ಮಾರಾಟ ಅಂಗಡಿಗಳನ್ನು ಮುಚ್ಚಲು ಬಿಬಿಎಂಪಿ ಆದೇಶಿಸಿದೆ. ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ವೇಳೆಯಲ್ಲಿ ಅನಾಹುತ ತಪ್ಪಿಸಲು ಪ್ರತಿ ಬಾರಿಯಂತೆ ಈ ಕ್ರಮ ಅನಿವಾರ್ಯವಾಗಿದೆ. ಫೆಬ್ರವರಿ 20 ರಿಂದದ 24ರ ತನಕ ಉಕ್ಕಿನ ಹಕ್ಕಿಗಳ ಕಲರವಕ್ಕೆ ಯಲಹಂಕ ಸಜ್ಜಾಗಿದೆ.
ಏರ್ ಶೋ ವೇಳೆ ಹಕ್ಕಿಗಳ ಡಿಕ್ಕಿ ಹೊಡೆತದಿಂದ ಅನಾಹುತ ಸಂಭವಿಸಬಾರದು ಎಂಬ ಮುನ್ನಚ್ಚೆರಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಫೆಬ್ರವರಿ 20 ರಿಂದ ಫೆಬ್ರವರಿ 24 ರತನಕ ಏರೋ ಇಂಡಿಯಾ ಮುಗಿಯುವವರೆಗೂ ಮಾಂಸದ ಅಂಗಡಿಗಳನ್ನು ತೆರೆಯಬಾರದು. ಐದು ದಿನಗಳ ಪ್ರದರ್ಶನ ವೇಳೆ ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಕೇವಲ ಸಸ್ಯಾಹಾರಿ ಊಟ- ಉಪಾಹಾರವನ್ನಷ್ಟೇ ಸಿದ್ಧಪಡಿಸುವಂತೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಹೇಳಿದೆ.
ಏರ್ ಶೋ : ಡಿಕ್ಕಿ ಹೊಡೆದು ಮನೆ ಮೇಲೆ ಬಿದ್ದ ಸೂರ್ಯಕಿರಣ್ ವಿಮಾನ
"ಈ ಭಾಗದಲ್ಲಿ 316 ಮಾಂಸದ ಅಂಗಡಿಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳನ್ನು ಮುಚ್ಚುವ ಜತೆಗೆ ಈ ವಲಯದ ಎಲ್ಲ 11 ವಾರ್ಡ್ಗಳಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಈ ಅವಧಿಯಲ್ಲಿ ಕೇವಲ ಸಸ್ಯಾಹಾರಿ ಊಟ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಇದನ್ನು ಉಲ್ಲಂಘಿಸುವವರಿಗೆ 2 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು" ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರು ಹೇಳಿದ್ದಾರೆ.
ಚಿತ್ರಗಳು : ಸೂರ್ಯ ಕಿರಣ್ ವಿಮಾನಗಳ ಡಿಕ್ಕಿ, ಪೈಲೆಟ್ ಸಾವು
20 ದಿನಗಳ ಕಾಲ ಬಂದ್?: ಐದು ದಿನಗಳ ವಿಮಾನ ಹಾರಾಟ, ಪ್ರದರ್ಶನಕ್ಕಾಗಿ 20 ದಿನಗಳ ಕಾಲ ಮೀನು ಮಾಸದಂಗಡಿ ಬಂದ್ ಮಾಡುವುದು ಎಷ್ಟು ಸರಿ ಎಂದು ಸ್ಥಳೀಯರಾದ ಕಾಳಪ್ಪ ಪ್ರಶ್ನಿಸಿದ್ದಾರೆ. ಅಂಗಡಿ ಮಾಲೀಕರು ತಮಗಾಗುವ ನಷ್ಟವನ್ನು ಭರಿಸುವವರು ಯಾರು ಎಂದು ಕೇಳುತ್ತಿದ್ದಾರೆ. ಮಟನ್, ಚಿಕನ್, ಫಿಶ್ ಆನ್ ಲೈನ್ ನಲ್ಲಿ ಅರ್ಡರ್ ಮಾಡಿ ತರಿಸಿಕೊಂಡು ತಿನ್ನುವವರಿದ್ದಾರೆ. ಆದರೆ, ಮಾಸದಂಗಡಿ ನೆಚ್ಚಿಕೊಂಡವರಿಗೆ ಉಪವಾಸ ಅನಿವಾರ್ಯವಾಗಿದೆ.