ವಿಕ್ಟೋರಿಯಾ ಆಸ್ಪತ್ರೆಯಿಂದ ಶಶಿಕಲಾ ನಟರಾಜನ್ ಬಿಡುಗಡೆ, ಮುಂದೇನು?
ಬೆಂಗಳೂರು, ಜನವರಿ 31: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅವಧಿ ಪೂರೈಸಿರುವ ಎಡಿಎಂಕೆ ನಾಯಕಿ ವಿಕೆ ಶಶಿಕಲಾ ನಟರಾಜನ್ ಅವರನ್ನು ಇಂದು ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಗಂತ ಜೆ ಜಯಲಲಿತಾ ಜೊತೆಗೆ ಸಹ ಆರೋಪಿ ಎನಿಸಿ, ನಂತರ ಆರೋಪ ಸಾಬೀತಾಗಿದ್ದರಿಂದ ಅಪರಾಧಿಯಾಗಿ ಶಶಿಕಲಾ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಲ್ಕು ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದರು. ಜನವರಿ 27, 2021ರಂದು ಅವರ ಶಿಕ್ಷೆ ಅವಧಿ ಪೂರ್ಣಗೊಂಡಿತ್ತು. ಆದರೆ, ಕೊವಿಡ್ 19 ಪೀಡಿತರಾಗಿದ್ದ ಶಶಿಕಲಾ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಸದ್ಯ ಬೆಂಗಳೂರಿನಲ್ಲಿ ಆಪ್ತರ ಮನೆಯಲ್ಲೇ ನೆಲೆಸಲಿರುವ ಶಶಿಕಲಾ ನಂತರ ಚೆನ್ನೈಗೆ ತೆರಳಲಿದ್ದಾರೆ. ಜ್ಯೋತಿಷಿಗಳು ಅಮಾವಾಸ್ಯೆ ನಂತರ ಐದು ದಿನಾಂಕಗಳನ್ನು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
2014ರ ಸೆಪ್ಟೆಂಬರ್ ನಲ್ಲಿ ಸ್ಪೆಷಲ್ ಟ್ರಯಲ್ ಕೋರ್ಟ್ ನ್ಯಾ. ಜಾನ್ ಮೈಕೇಲ್ ಕನ್ಹಾ ಐಪಿಸಿ ಸೆಕ್ಷನ್ 109ರಡಿ ಜೆ ಜಯಲಲಿತಾ, ಶಶಿಕಲಾ, ಸುಧಾಕರನ್, ಇಳವರಸಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರು. ಶಶಿಕಲಾ ದತ್ತು ಪುತ್ರ ವಿಎನ್ ಸುಧಾಕರನ್, ಜೆ ಇಳವರಸಿ ಹಾಗೂ ಶಿಶಿಕಲಾ ಅವರಿಗೆ 2017ರ ಫೆಬ್ರವರಿ 15ರಂದು ಜೈಲುಶಿಕ್ಷೆ ಪ್ರಕಟವಾಗಿತ್ತು. ಈಗ 10 ಕೋಟಿ ರು ದಂಡ ಪಾವತಿಸಿದ್ದರು. ಸನ್ನಡತೆ ಆಧಾರದ ಮೇಲೆ ಅವಧಿಗೂ ಮುನ್ನ ಬಿಡುಗಡೆ ಬಯಸಿದ್ದರು.
ಶಶಿಕಲಾಗೆ ಮತ್ತೆ ಆಘಾತ, 2000 ಕೋಟಿ ರು ಮೌಲ್ಯದ ಆಸ್ತಿ ಜಪ್ತಿ
ಆದರೆ, ಪೂರ್ವನಿಗದಿಯಂತೆ ಜನವರಿ 27ರಂದೇ ಬಿಡುಗಡೆ ಮಾಡಲಾಗಿದೆ. ಈ ನಡುವೆ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿದ್ದ ಶಶಿಕಲಾ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಸೂಕ್ತ ಚಿಕಿತ್ಸೆ ಬಳಿಕ ಭಾನುವಾರ(ಜ.31) ರಂದು ಆಸ್ಪತ್ರೆಯಿಂದ ಹೊರ ಬಂದಿದ್ದಾರೆ.
ಶಶಿಕಲಾ ವಿ ನಟರಾಜನ್ ಕರೆದೊಯಲು ಬಂದ ಕಾರ್ ಗಳು
ತಮಿಳುನಾಡು ನೋಂದಣಿಯಿರುವ ಲ್ಯಾಂಡ್ ಕ್ರೂಸರ್ ಕಾರುಗಳು TN 09 BX3377, TN09BX 3737 ಕಾರ್ ಗಳು ವಿಕ್ಟೋರಿಯ ಆಸ್ಪತ್ರೆಗೆ ಆಗಮಿಸಿ, ಶಶಿಕಲಾರನ್ನು ಕರೆದೊಯ್ದಿವೆ. ಖಾಸಗಿ ಎಸ್ಕಾರ್ಟ್ ವಾಹನದೊಂದಿಗೆ ಆಸ್ಪತ್ರೆಯಿಂದ ತೆರಳಲಿದ್ದಾರೆ. ಚೆನ್ನೈನ ಆರ್ ಕೆ ನಗರ ಶಾಸಕ ಶಶಿಕಲಾ ನಟರಾಜನ್ ಅಕ್ಕನ ಮಗ ಟಿಟಿವಿ ದಿನಕರನ್ ಅವರನ್ನು ಶಶಿಕಲಾರನ್ನು ಸ್ವಾಗತಿಸಿದರು. ಎಂಟು ಲ್ಯಾಂಡ್ ಕ್ರೂಸರ್ ನಾಲ್ಕು ಬೆಂಜ್ ಹಾಗೂ ನಾಲ್ಕು ಫಾರ್ಚೂನರ್ ಕಾರುಗಳಲ್ಲಿ ಶಶಿಕಲಾ ಗೆ ಎಸ್ಕಾರ್ಟ್ ಮಾಡಿವೆ. ರಸ್ತೆಯ ಎರಡು ಬದಿಗಳಲ್ಲಿ ನಿಂತು ಶಶಿಕಲಾ ಕಾರಿಗೆ ಹೂಮಳೆ ಸುರಿಸಲಾಯಿತು.
ಆನೇಕಲ್ ಸಮೀಪದ ಫಾರ್ಮ್ ಹೌಸ್ನಲ್ಲಿ ಶಶಿಕಲಾ
ವಿಕ್ಟೋರಿಯಾ ಅಸ್ಪತ್ರೆಯಿಂದ ಡಿಸ್ಚಾರ್ಜ್ ಅಗರುವ ವಿ ಕೆ ಶಶಿಕಲಾ ಅವರು ಡಿಸ್ಚಾರ್ಜ್ ಆದ ಬಳಿಕ ಕೆಲ ದಿನಗಳ ಕಾಲ ಬೆಂಗಳೂರಿನಲ್ಲೆ ವಿಶ್ರಾಂತಿ ಪಡೆಯಲಿದ್ದಾರೆ. ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ - ಆನೇಕಲ್ ಸಮೀಪದ ಫಾರ್ಮ್ ಹೌಸ್ನಲ್ಲಿ ಶಶಿಕಲಾ ಹಾಗೂ ಆಪ್ತರು ತಂಗಲಿದ್ದಾರೆ ಎಂದು ತಿಳಿದು ಬಂದಿದೆ.
ಫೆಬ್ರವರಿ 3ರವರೆಗೆ ವಿಶ್ರಾಂತಿ ಪಡೆಯಲಿರುವ ನಂತರ ಜ್ಯೋತಿಷಿಗಳ ಸಲಹೆ ಮೇರೆಗೆ ಶುಭ ದಿನಾಂಕ ಪಡೆದು ಚೆನ್ನೈ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದು ಬರಲಿದೆ. ಈ ನಡುವೆ ಚೆನ್ನೈಗೆ ತೆರಳುವ ಮಾರ್ಗದಲ್ಲಿ ಅದ್ದೂರಿ ಸ್ವಾಗತಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಕೋವಿಡ್ 19 ಇರುವ ಹಿನ್ನಲೆ ಸಂಭ್ರಮಾಚರಣೆ ತಡೆ
ಕೋವಿಡ್ 19 ಇರುವ ಹಿನ್ನಲೆ ಬೆಂಗಳೂರು ಹಾಗೂ ಹೊಸೂರು ರಸ್ತೆಯ ಪ್ರಮುಖ ಸ್ಥಳಗಳಲ್ಲಿ ಸಂಭ್ರಮಾಚರಣೆ ತಡೆ ನೀಡಲಾಗಿದೆ. ಹೀಗಾಗಿ ಹೊಸೂರು ಕಡೆ ದಾಟಿದ ಬಳಿಕ ಹೊಸೂರಿನಿಂದ ಚೆನ್ನೈ ನಡುವಿನ ಮಾರ್ಗಮಧ್ಯ ಶಶಿಕಲಾಗೆ ಭರ್ಜರಿ ಸ್ವಾಗತ ಕೋರಲು ಅಭಿಮಾನಿಗಳು ಕಾದಿದ್ದಾರೆ. ಆದರೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಬಳಿ ಇಂದು ನೂರಾರು ಮಂದಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ನೆರೆದಿದ್ದು ಕಂಡು ಬಂದಿತು. ಕೆ. ಆರ್ ಮಾರುಕಟ್ಟೆಯ ಹೂವಿನ ಅಂಗಡಿಯಿಂದ ವಿಶೇಷವಾಗಿ ಹೆಣೆದ ಹೂಮಾಲೆಯನ್ನು ಶಶಿಕಲಾ ಅವರಿಗೆ ಅರ್ಪಿಸಲಾಯಿತು. ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ವಿಕ್ಟೋರಿಯಾ ಆಸ್ಪತ್ರೆ ಮುಂಭಾಗ ಬಿಗಿ ಭದ್ರತೆ ಒದಗಿಸಲಾಗಿತ್ತು.
Recommended Video
ವಿಕ್ಟೋರಿಯಾ ಆಸ್ಪತ್ರೆ ಸೂಪರಿಡೆಂಟ್ ರಮೇಶ್ ಕೃಷ್ಣ ಹೇಳಿಕೆ
ಶಶಿಕಲಾ ಆರೋಗ್ಯ ಸ್ಥಿರವಾಗಿದ್ದು, ಕೋವಿಡ್ 19 ಗುಣಲಕ್ಷಣಗಳಿಲ್ಲ, ವೈಟಲ್ಸ್ ಎಲ್ಲವೂ ಸರಿಯಾಗಿದೆ, ಆಕ್ಸಿಜನ್ ಇಲ್ಲದೆ ಉಸಿರಾಡುತ್ತಿದ್ದಾರೆ ಸಾಮಾನ್ಯವಾಗಿ ಹತ್ತು ದಿನಗಳ ನಂತರ ಪ್ರೋಟೋಕಾಲ್ ಪ್ರಕಾರ ಯಾವುದೇ ಕೊರೊನಾ ಟೆಸ್ಟ್ ಮಾಡುವ ಆಗತ್ಯವಿಲ್ಲ ಎಂದರು.
ಆರೋಗ್ಯ ಸುಧಾರಣೆ ಆಗಿದ್ದರೂ ಏಳರಿಂದ ಹತ್ತು ದಿನಗಳವರೆಗೆ ಹೊಂ ಐಸೋಲೇಷನ್ ನಲ್ಲಿರಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಶಶಿಕಲಾ ಅವರ ಆಪ್ತೆ ಇಳವರಸಿಗೆ ಇವತ್ತು ಡಿಸ್ಚಾರ್ಜ್ ಮಾಡಲ್ಲ ಆದರೆ ಅವರು ಆರೋಗ್ಯ ವಾಗಿದ್ದಾರೆ ಎಂದು ವಿಕ್ಟೋರಿಯಾ ಆಸ್ಪತ್ರೆ ಸೂಪರಿಡೆಂಟ್ ರಮೇಶ್ ಕೃಷ್ಣ ಹೇಳಿದರು.