ಡಿಸೆಂಬರ್ 31ರಿಂದ 'ಅದಮ್ಯ ಚೇತನಾ ಸೇವಾ ಉತ್ಸವ'
ಬೆಂಗಳೂರು, ಡಿಸೆಂಬರ್, 29: ಅದಮ್ಯ ಚೇತನ ಸಂಸ್ಥೆಯು ಡಿಸೆಂಬರ್ 31 ರಿಂದ ಜನವರಿ 3ರವರೆಗೆ 'ಹಸಿರು ಭಾರತ' ಎಂಬ ಶೀರ್ಷಿಕೆ ಅಡಿಯಲ್ಲಿ 'ಅದಮ್ಯ ಚೇತನ ಸೇವಾ ಉತ್ಸವ-2016' ಸಮಾರಂಭವನ್ನು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದೆ.
ಅದಮ್ಯ ಚೇತನ ಸೇವಾ ಉತ್ಸವದ ಪ್ರಮುಖ ಉದ್ದೇಶ ಸೇವಾ ಚಟುವಟಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ. ನಾಲ್ಕು ದಿನ ಉತ್ಸವಕ್ಕೆ ಬರುವವರಿಗೆ 'ಒಬ್ಬರಿಗೆ ಒಂದು ಮರ' ಯೋಜನೆ ಅಡಿ ನಗರದಲ್ಲಿ ಒಂದು ಕೋಟಿ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಉದ್ಘಾಟಿಸಲಿದ್ದಾರೆ ಎಂದು ಅದಮ್ಯ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ತಿಳಿಸಿದ್ದಾರೆ.[ಬೆಳ್ಳಂದೂರು ಕೆರೆ ಸ್ವಚ್ಛ ಮಾಡಲು ಎಷ್ಟು ವರ್ಷ ಬೇಕು?]
ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿದೆ?
* ಡಿಸೆಂಬರ್ 31 : ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾಚಡೇಕರ್ ಅವರಿಂದ ಬೆಳಿಗ್ಗೆ 11 ಕ್ಕೆ ಅದಮ್ಯ ಚೇತನ ಸೇವಾ ಉತ್ಸವ ಉದ್ಘಾಟನೆ
* ಜನವರಿ 01 : 8 ಸಾವಿರಕ್ಕೂ ಹೆಚ್ಚು ಜನರು ಸಂಜೆ 4ಕ್ಕೆ ಏಕಕಾಲಕ್ಕೆ ವಂದೇ ಮಾತರಂ ಗೀತೆ ಹಾಡಲಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ರಾಜ್ಯಪಾಲ ವಜುಬಾಯಿ ವಾಲಾ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಆಗಮಿಸಲಿದ್ದಾರೆ.
* ಜನವರಿ 02 : ಆರೋಗ್ಯ ಸಂಜೀವಿನಿ ಕಾರ್ಯಕ್ರಮ ಸಂಜೆ 4ಕ್ಕೆ ನಡೆಯಲಿದ್ದು, ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ, ಮಂತ್ರಾಲಯದ ಸುಭುದೇಂದ್ರ ತೀರ್ಥ ಸ್ವಾಮೀಜಿ ಭಾಗವಹಿಸಲಿದ್ದಾರೆ. ಬಂದವರಿಗೆ ಒಂದು ಔಷಧಿ ಸಸ್ಯ ಕೊಡಲಾಗುವುದು.[ಮೃತ ಪ್ರಾಣಿಗಳ ಆತ್ಮಕ್ಕೆ ಮುಕ್ತಿ ಕಾಣಿಸುವ ಬಂಧುವೇ ಉದಯಗಟ್ಟಿ]
* ಜನವರಿ 03 : ಸಂಜೆ 4ಕ್ಕೆ ಸಮಾರೋಪ ಸಮಾರಂಭ. ಈ ಸಂದರ್ಭದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ, ರಾಸಾಯನಿಕ ಗೊಬ್ಬರ ಸಚಿವ ಅನಂತಕುಮಾರ್ ಭಾಗವಹಿಸಲಿದ್ದಾರೆ.
* ವಸ್ತು ಪ್ರದರ್ಶನ : ಭಾರತೀಯ ಪರಂಪರೆಯ ಹಸಿರು ಸಂವೇದನೆ ಬಿಂಬಿಸುವ 'ಹಸಿರು ಭಾರತ' ಮತ್ತು ವೈಮಾನಿಕ, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದ ಸಾಧನೆ ಬಿಂಬಿಸುವ ಕಲಾಂ-ಸಲಾಂ ಎಂಬ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.