ಹಲ್ಲೆ ಪ್ರಕರಣ: ಮೈತ್ರಿಯಾಗೆ ರಿಲೀಫ್ ಬೆಳಗ್ಗೆ ಜೈಲು, ಸಂಜೆಗೆ ಬೇಲು
ಬೆಂಗಳೂರು, ಮೇ 13: ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಳಗ್ಗೆ ಜೈಲುಶಿಕ್ಷೆಗೊಳಗಾಗಿದ್ದ ನಟಿ ಮೈತ್ರಿಯಾ ಗೌಡ ಅವರು ಸಂಜೆ ವೇಳೆಗೆ ಜಾಮೀನು ಪಡೆದು ಮನೆಗೆ ತೆರಳಿದ್ದಾರೆ.
2011ರ ಮೇ 20ರಂದು ನಡೆದ ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ (5ನೇ ಎಸಿಎಂಎಂ ) ಕೋರ್ಟ್ ಶುಕ್ರವಾರ ಬೆಳಗ್ಗೆ ಮೈತ್ರಿಯಾ ಗೌಡ ಅವರಿಗೆ 2 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಮೈತ್ರಿಯಾ ಅವರ ತಂಗಿ ಸುಪ್ರಿಯಾ, ಸಂಬಂಧಿಕರಾದ ರೂಪಾ ಹಾಗೂ ರೇಖಾಗೆ ಕೋರ್ಟ್ ತಲಾ 1 ವರ್ಷ ಜೈಲುಶಿಕ್ಷೆ ವಿಧಿಸಿ ಆದೇಶ ನೀಡಿತ್ತು.[ಹೊಸ ಬಾಳಿನ ಹೊಸಿಲಲ್ಲಿರುವ ಕಾರ್ತಿಕ್ ಗೌಡಗೆ ರಿಲೀಫ್]
2011ರಲ್ಲಿ ಟ್ರಾಫಿಕ್ ಪೊಲೀಸ್ ಮೇಲೆ ನಟಿ ಮೈತ್ರಿಯಾ ಗೌಡ ಹಾಗೂ ಮನೆಯವರು ಕಾರಿನಲ್ಲಿ ಬರುತ್ತಿದ್ದ ವೇಳೆ ಮೊಬೈಲ್ ನಲ್ಲಿ ಸಂಭಾಷಣೆ ನಡೆಸುತ್ತಿದ್ದರು. ಆಗ ಬಸವೇಶ್ವರ ನಗರ ಸಂಚಾರಿ ಠಾಣೆ ಮುಖ್ಯ ಪೇದೆ ಶಿವಕುಮಾರ್ ಅವರು ಕಾರನ್ನು ನಿಲ್ಲಿಸಿ, ಮೊಬೈಲ್ ಫೋನ್ ನಲ್ಲಿ ಮಾತನಾಡಿಕೊಂಡು ಕಾರು ಚಲಾಯಿಸದಂತೆ ಆಕ್ಷೇಪಿಸಿದ್ದರು.
ಈ ಸಂದರ್ಭದಲ್ಲಿ ಮುಖ್ಯಪೇದೆ ಶಿವಕುಮಾರ್ ಮೇಲೆ ಮೈತ್ರಿಯಾ ಗೌಡ ಹಲ್ಲೆ ನಡೆಸಿದ್ದರು.ಈ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.