ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಉಪೇಂದ್ರ ತೆರೆದಿಟ್ಟ ಕ್ರಿಯೇಟಿವಿಟಿ ರಹಸ್ಯ
ಬೆಂಗಳೂರು, ಸೆಪ್ಟೆಂಬರ್ 24: "ನಮ್ಮಲ್ಲಿ ಏನಾದರೂ ಕ್ರಿಯೇಟಿವಿಟಿ ಅಂತ ಇದ್ದರೆ ಅದು ಪುಸ್ತಕಗಳ ಓದಿನಿಂದ ಬಂದಿರೋದು. ನಾನು ಜೋಗಿ ಅವರ ದೊಡ್ಡ ಅಭಿಮಾನಿ. ಅವರು ಇದೇ ರೀತಿ ಇನ್ನಷ್ಟು- ಮತ್ತಷ್ಟು ಪುಸ್ತಕಗಳನ್ನು ಬರೆಯಲಿ" ಎಂದು ನಟ- ನಿರ್ದೇಶಕ ಉಪೇಂದ್ರ ಹೇಳಿದರು.
ಇಂದಿನ ವ್ಯವಸ್ಥೆ ಬದಲಾವಣೆಗೆ ಹೊಸಬರೇ ಬೇಕು, ಉಪೇಂದ್ರ ಸಂದರ್ಶನ
ಇಲ್ಲಿನ ಬಿ.ಪಿ.ವಾಡಿಯಾ ರಸ್ತೆಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಭಾನುವಾರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಚಂದಮಾಮ ಓದುವಾಗ ಅಲ್ಲಿ ಕಥೆಗಳಲ್ಲಿ ಬರುತ್ತಿದ್ದ ಕಾಡು, ಮರ, ಅಲ್ಲೊಂದು ಮನೆ ಇಂಥ ವಿವರಣೆಗಳಿಂದ ನಮ್ಮ ಊಹಾ ಶಕ್ತಿ ಮತ್ತಷ್ಟು ಹೆಚ್ಚಾಗುತ್ತಿತ್ತು ಎಂದರು.
ಪುಸ್ತಕದ ಮುಂದೆ ತಲೆತಗ್ಗಿಸಿದರೆ ಅದು ತಲೆ ಎತ್ತುವಂತೆ ಮಾಡುತ್ತದೆ. ಅದೇ ಮೊಬೈಲ್ ಗೆ ತಲೆ ತಗ್ಗಿಸಿದರೆ ಎಂದೂ ತಲೆ ಎತ್ತದಂತೆ ಮಾಡುತ್ತದೆ ಎಂಬ ವಾಟ್ಸ್ ಅಪ್ ಸಂದೇಶವೊಂದರ ಉದಾಹರಣೆ ಕೂಡ ಅವರು ನೀಡಿದರು.
ಇದಕ್ಕೂ ಮುನ್ನ, ಜೋಗಿಯವರು ಬರೆದ 'ಉಳಿದ ವಿವರಗಳು ಲಭ್ಯವಿಲ್ಲ' ಕಥಾ ಸಂಕಲನ, ಡಾ. ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ 'ಹಿಜಾಬ್' ಹಾಗೂ ಗೋಪಾಲಕೃಷ್ಣ ಕುಂಟನಿ ಅವರ ಕಥಾಸಂಕಲನ 'ಅಪ್ಪನ ನೀಲಿಕಣ್ಣು' ಬಿಡುಗಡೆ ಮಾಡಿದರು.
ಆ ನಂತರ ಲಕ್ಷ್ಮೀಶ್ ತೋಳ್ಪಾಡಿ ಅವರು 'ಉಪಸಂಹಾರ' ಉಪನ್ಯಾಸ ನೀಡಿದರು. ಚಿತ್ರ ನಿರ್ದೇಶಕರಾದ ಬಿ.ಎಸ್.ಲಿಂಗದೇವರು, ಟಿ.ಎನ್.ಸೀತಾರಾಂ, ಲೇಖಕರಾದ ಜೋಗಿ, ಡಾ. ಗುರುಪ್ರಸಾದ್ ಕಾಗಿನೆಲೆ, ಗೋಪಾಲಕೃಷ್ಣ ಕುಂಟನಿ, ಲೇಖಕರು ಹಾಗೂ ವಿಮರ್ಶಕರೂ ಆದ ಕೆ.ಸತ್ಯನಾರಾಯಣ, ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಮತ್ತಿತತರಿದ್ದರು.