ನಟ ದರ್ಶನ್ ಕೇಸ್ನಲ್ಲಿ ಅರುಣಾಕುಮಾರಿ ಪರ ನಿಂತರೇ ಇಂದ್ರಜಿತ್ ಲಂಕೇಶ್ ?
ಬೆಂಗಳೂರು, ಜು. 15: ನಟ ದರ್ಶನ್ ಹೆಸರಿನಲ್ಲಿ ಸಾಲ ಪಡೆಯುವ ದಾಖಲೆ ಸೃಷ್ಟಿಸಿದ ಪ್ರಕರಣದಲ್ಲಿ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಒಂದಾಗುವ ಮೂಲಕ ಪ್ರಕರಣ ಸುಖಾಂತ್ಯಗೊಂಡಿತ್ತು. ಅರುಣಾಕುಮಾರಿ ತಪ್ಪಿತಸ್ಥೆ ಎಂದೇ ಬಿಂಬಿತವಾಗಿತ್ತು. ಇದೀಗ ಈ ಪ್ರಕರಣದಲ್ಲಿ ಅರುಣಾಕುಮಾರಿ ಮೇಲೆ ಒತ್ತಡ ಹಾಕಲಾಗುತ್ತಿದೆ. ಪ್ರಭಾವಿ ವ್ಯಕ್ತಿಗಳು, ಸೆಲಿಬ್ರಿಟಿ ಪ್ರಕರಣದಲ್ಲಿ ಕ್ರಮ ಜರುಗಿಸುವಲ್ಲಿ ಮೈಸೂರು ಪೊಲೀಸರು ವಿಫಲರಾಗಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದಾರೆ. ಈ ಮೂಲಕ ಅರುಣಾಕುಮಾರಿ ಪರ ಧ್ವನಿಗೂಡಿಸಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿರನ್ನು ಭೇಟಿ ಮಾಡಿ ಮೈಸೂರಿಗೆ ದಕ್ಷ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸುವಂತೆ ಮನವಿ ಮಾಡುವುದಾಗಿ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಾದಕ ವ್ಯಸನಕ್ಕೆ ಯುವಕ - ಯುವತಿಯರು ಬಲಿಯಾಗುತ್ತಿದ್ದಾರೆ. ಸೆಲಿಬ್ರಿಟಿ - ಉದ್ಯಮಿಗಳ ಪ್ರಕರಣದಲ್ಲಿ ಅರುಣಾಕುಮಾರಿ ಎಂಬ ಮಹಿಳೆ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಇದರಿಂದ ಪೊಲೀಸ್ ವ್ಯವಸ್ಥೆ ಮೇಲೆ ಜನರ ನಂಬಿಕೆ ಕಳೆದು ಹೋಗುವಂತಾಗಿದೆ. ಈ ಕೂಡಲೇ ಮೈಸೂರಿಗೆ ದಕ್ಷ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ. ಈ ಮೂಲಕ ನಟ ದರ್ಶನ್ " ಲೋನ್ ದಾಖಲೆ " ಪ್ರಕರಣದಲ್ಲಿ ಅರುಣಾಕುಮಾರಿ ಪರ ಪರೋಕ್ಷವಾಗಿ ಧ್ವನಿಯೆತ್ತಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇಂದ್ರಜಿತ್ ಲಂಕೇಶ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸುತ್ತೇನೆ. ಪ್ರಭಾವಿ ವ್ಯಕ್ತಿಗಳ ಪ್ರಕರಣಗಳಲ್ಲಿ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಸಿಗುತ್ತಿಲ್ಲ. ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತಿದೆ. ದಕ್ಷ ಪೊಲೀಸ್ ಅಧಿಕಾರಿಗಳನ್ನು ನೇಮಿಸಿ ಜನಸಾಮಾನ್ಯರಿಗೆ ನ್ಯಾಯ ಸಿಗುವಂತೆ ಕ್ರಮ ಜರುಗಿಸಿ ಎಂದು ಕೋರುತ್ತೇನೆ ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ಇತ್ತೀಚೆಗೆ ಮಾದಕ ವಸ್ತು ಮಾರಾಟ ಜಾಲ ಹೆಚ್ಚಾಗಿದೆ. ಈ ಜಾಲದಲ್ಲಿ ಸಿಲುಕಿ ಯುವಕ ಯುವತಿಯರು ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮೈಸೂರು ಪೊಲೀಸರು ಗಮನ ಹರಿಸಿದ್ದು ಸ್ವಾಗತಾರ್ಹ. ಆದರೆ ಉದ್ಯಮಿ, ಪ್ರಭಾವಿ ವ್ಯಕ್ತಿಗಳು, ಸೆಲಿಬ್ರಿಟಿ ದೌರ್ಜನ್ಯ ಪ್ರಕರಣದಲ್ಲಿ ಯಾವುದೇ ಕ್ರಮ ಜರುಗಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳಲ್ಲಿ ಜನಸಮಾನ್ಯರಿಗೆ ಅನ್ಯಾಯವಾಗುತ್ತಿದೆ. ಪ್ರಭಾವಿಗಳ ಎದುರು ಸಾಮಾನ್ಯರ ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ. ಸಿಡಿ ಲೇಡಿಯ ವಿಚಾರದಲ್ಲೂ ಸಂತ್ರಸ್ತ ಯುವತಿ ಮೇಲೆ ಒತ್ತಡ ಹಾಕಿದರು. ಅರುಣಾಕುಮಾರಿ ವಿಚಾರದಲ್ಲೂ ಇದೇ ಮುಂದುವರೆದಿದೆ. ಪರಿಸ್ಥಿತಿ ಹೀಗೆ ಆದರೆ, ವ್ಯವಸ್ಥೆಯ ಮೇಲೆ ಜನರ ನಂಬಿಕೆ ಕಳೆದು ಹೋಗುತ್ತದೆ. ತಪ್ಪಿಸ್ಥರು ಎಷ್ಟೇ ಪ್ರಭಾವಿಗಳಾದರೂ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Recommended Video
ಮೈಸೂರಿನ ಸ್ಟಾರ್ ಹೋಟೆಲ್ ನಲ್ಲಿ ದಲಿತರ ಮೇಲೆ ಹಲ್ಲೆ ಆಗಿದೆ. ಲೋನ್ ಹಗರಣವನ್ನು ಸಮರ್ಥವಾಗಿ ತನಿಖೆ ನಡೆಸಬೇಕು. ನೊಂದವರಿಗೆ ನ್ಯಾಯ ಸಿಗಬೇಕು. ಈ ಎರಡೂ ಪ್ರಕರಣದಲ್ಲಿ ತುರ್ತು ಕ್ರಮ ಜರುಗಿಸಬೇಕು. ಜನ ಸಾಮಾನ್ಯರಿಗೆ ಹಾಗೂ ಶೋಷಿತರಿಗೆ ನ್ಯಾಯ ಕೊಡುವ ದಕ್ಷ ಅಧಿಕಾರಿಗಳನ್ನು ಮೈಸೂರಿಗೆ ನಿಯೋಜನೆ ಮಾಡುವಂತೆ ಮನವಿ ಮಾಡುವ ಬಗ್ಗೆ ಇಂದ್ರಜಿತ್ ಪ್ರಸ್ತಾಪಿಸಿದ್ದಾರೆ.