ಬಾಡಿಗೆದಾರರ ವಿವರ ಸಂಗ್ರಹ ಪೊಲೀಸ್ ಕಣ್ಗಾವಲು ಯೋಜನೆಗೆ ತೀವ್ರ ವಿರೋಧ
ಬೆಂಗಳೂರು, ಜು. 07: ಅಪರಾಧ ತಡೆಯುವ ನಿಟ್ಟಿನಲ್ಲಿ ಬಾಡಿಗೆ ಮನೆ ವಾಸಿಗಳ ವಿವರ ದಾಖಲಿಸುವ ಬೆಂಗಳೂರು ಪೊಲೀಸರ 'ಪೋಲೀಸ್ App' ಕನಸಿನ ಯೋಜನೆಗೆ ಭಾರೀ ಜನ ವಿರೋಧ ವ್ಯಕ್ತವಾಗಿದೆ. ಕೆಲವು ಸಾಮಾಜಿಕ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯಕ್ಕೆ ಧಕ್ಕೆ ಜತೆಗೆ ಖಾಸಗಿತನಕ್ಕೆ ತೊಂದರೆಯಾಗಿದೆ ಎಂಬ ಮಾತು ಕೇಳಿ ಬರುತ್ತಿವೆ. ಇದರ ನಡುವೆ ಬೆಂಗಳೂರಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಬಾಡಿಗೆ ಮನೆ ವಾಸಿಗಳ ವಿವರಗಳನ್ನು Appನಲ್ಲಿ ಮನೆ ಮಾಲೀಕರು ನಮೂದಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಿದ್ದಾರೆ. ಪೊಲೀಸರ ಈ ಕ್ರಮದ ವಿರುದ್ಧ ಆರಂಭದಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ಇದೀಗ ಸಾಮಾಜಿಕ ಕಾರ್ಯಕರ್ತರು ಕೂಡ ಪೊಲೀಸರ ಯೋಜನೆ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಪೊಲೀಸರು ಸಜ್ಜು: ರಾಮಮೂರ್ತಿನಗರದಲ್ಲಿ ಬಾಂಗ್ಲಾದೇಶಿ ಯುವತಿಯ ಮೇಲೆ ಗ್ಯಾಂಗ್ ರೇಪ್ ಆಗಿತ್ತು. ಈ ಪ್ರಕರಣದಿಂದ ಬೆಂಗಳೂರು ಮರ್ಯಾದೆ ರಾಷ್ಟ್ರ ಮಟ್ಟದಲ್ಲಿ ಹರಾಜಾಗಿತ್ತು. ಪ್ರಕರಣದ ತನಿಖೆ ವೇಳೆ ಬಾಂಗ್ಲಾದೇಶಿಯರು ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದರು. ಅವರು ನೆಲೆಸಿದ್ದ ಮನೆ ಬಾಡಿಗೆ ಪಡೆದಿದ್ದರು. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ ಎಂಬ ಸಂಗತ ಹೊರ ಬಿದ್ದಿತ್ತು. ಇನ್ನು ಇತ್ತೀಚೆಗೆ ದಾಖಲಾದ ಡ್ರಗ್ ಜಾಲ ಪ್ರಕರಣದ ಆರೋಪಿಗಳು ಕೂಡ ಹೊರ ರಾಜ್ಯ ಹಾಗೂ ದೇಶಗಳಿಗೆ ಸೇರಿದ್ದು, ಅಕ್ರಮವಾಗಿ ಬೆಂಗಳೂರಿನಲ್ಲಿ ವಾಸವಾಗಿರುವ ಸಂಗತಿ ಬಯಲಿಗೆ ಬಂದಿತ್ತು. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆಲೋಚಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅಧಿಕಾರಿಗಳ ಜತೆ ಚರ್ಚಿಸಿ ಮಹತ್ವದ ಯೋಜನೆ ಘೋಷಣೆ ಮಾಡಿದರು.
ಬೆಂಗಳೂರಿನಲ್ಲಿ ನೆಲೆಸಿರುವ ವಿದೇಶಿಯರ ಹಾಗೂ ಹೊರ ರಾಜ್ಯದ ನಿವಾಸಿಗಳ ವಿವರ ಸಂಗ್ರಹಿಸುವ "ಡಾಟಾ ಸಂಗ್ರಹ ಆಪ್" ತಯಾರಿಸುವ ಕಾರ್ಯದಲ್ಲಿ ಬೆಂಗಳೂರು ಪೊಲೀಸರು ತೊಡಗಿಸಿಕೊಂಡಿದ್ದಾರೆ. ಯಾವುದೇ ಮನೆ ಬಾಡಿಗೆ ಪಡೆಯುವರು ಮೊದಲು ಬಾಡಿಗೆದಾರರ ವಿವರಗಳನ್ನು ನಮೂದಿಸಬೇಕು. ಮನೆ ಮಾಲೀಕರೇ ಈ ವಿವರಗಳನ್ನು ನಮೂದಿಸಬೇಕು. ಇದರಿಂದ ಯಾವ ಮನೆಯಲ್ಲಿ ಯಾರಿದ್ದಾರೆ ಎಂಬ ವಿವರ ಸಿಗಲಿದೆ. ಅಪರಾಧ ಕೃತ್ಯಗಳು ಕಡಿಮೆಯಾಗದೆ. ಆರೋಪಿಗಳನ್ನು ಸುಲಭವವಾಗಿ ಪತ್ತೆ ಮಾಡಬಹುದು. ಆಪ್ನಲ್ಲಿ ಆಧಾರ್ ಕಾರ್ಡ್, ಪಾಸ್ ಪೋರ್ಟ್ ವಿವರ ಇರುವ ಕಾರಣ ಯಾವುದೇ ವ್ಯಕ್ತಿ ಬಾಡಿಗೆ ಮನೆಯಲ್ಲಿದ್ದುಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು ಕಷ್ಟವಾಗಲಿದೆ. ಮಾಡಿದರೂ ಅವರ ವಿವರ ಪೊಲೀಸರಿಗೆ ಸಿಗಲಿದೆ. ಹೀಗೆ ಮನೆ ಮಾಲೀಕರು ತಮ್ಮ ಮನೆಯ ಬಾಡಿಗೆ ಕೊಡುವ ಆರಂಭದಲ್ಲಿಯೇ ಬಾಡಿಗೆದಾರರನ ಆಧಾರ್, ಪ್ಯಾನ್, ಪಾಸ್ಪೋರ್ಟ್ ವಿವರ ನಮೂದಿಸಬೇಕು.
ವಿರೋಧ: ಪೊಲೀಸರು ಬಾಡಿಗೆ ಮನೆ ವಿವರದ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಲಿದ್ದಾರೆ. ಇದರಿಂದ ವೈಯಕ್ತಿಕ ವಿವರ ಸೋರಿಕೆಯಾಗುತ್ತದೆ. ಇದರ ಜತೆಗೆ ಸಾರ್ವಜನಿಕರ ಸ್ವಾತಂತ್ರ್ಯಕ್ಕೂ ಧಕ್ಕೆಯಾಗಲಿದೆ. ಪೊಲೀಸರು ಅವರು ಕಾನೂನು ಸುವ್ವಸ್ಥೆ ಕಾಪಾಡಲಿ, ಬಿಟ್ಟು ಸಾರ್ವಜನಿಕರ ವೈಯಕ್ತಿಕ ವಿಚಾರದಲ್ಲಿ ಹಸ್ತಕ್ಷೇಪ ಸರಿಯಲ್ಲ ಎಂದು ಸಾಮಾಜಿಕ ಕಾರ್ಯಕರ್ತ ವಿನಯ್ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ವಿರೋಧ ವ್ಯಕ್ತವಾಗುತ್ತಿದ್ದಂತೆ, ಬೆಂಗಳೂರು ನಗರ ಪೊಲೀಸ್ ಆಯುಕ್ತರು "ಆಪ್" ಜಾರಿ ಕುರಿತು ಸಮರ್ಥನೆ ಮಾಡಿಕೊಂಡಿದ್ದಾರೆ. ಸಾರ್ವಜನಿಕರು ತಮ್ಮ ಮನೆ ಬಾಡಿಗೆದಾರರ ವಿವರವನ್ನು ಪೊಲೀಸರಿಗೆ ನೀಡುವ ನಿಯಮ ಮೊದಲಿನಿಂದಲೂ ಇದೆ. ಆದರೆ ಅದನ್ನು ನಾವು ಈವರೆಗೂ ಬಳಸಿರಲಿಲ್ಲ. ಇದಿಗ ಬಾಂಗ್ಲಾ ಯುವತಿ ಅತ್ಯಾಚಾರ ಪ್ರಕರಣ, ಡ್ರಗ್ ಜಾಲ ಪ್ರಕರಣಗಳ ಹಿನ್ನೆಲೆ ನೋಡಿದಾಗ ಬಹುತೇಕ ಆರೋಪಿಗಳು ಹೊರ ರಾಜ್ಯದವರು. ಅವರ ಪೂರ್ವ ಪರ ಬಗ್ಗೆ ಮನೆ ಮಾಲೀಕರಿಗೆ ಇರಲಿಲ್ಲ. ಹೀಗಾಗಿ ಮನೆ ಮಾಲೀಕರು ಕಡ್ಡಾಯವಾಗಿ ಬಾಡಿಗೆದಾರರ ವಿವರ ಆಪ್ ನಲ್ಲಿ ದಾಖಲಿಸಬೇಕು. ಅತಿ ಶೀಘ್ರದಲ್ಲಿಯೇ ಆಪ್ಗೆ ಚಾಲನೆ ನೀಡಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ ಪಂತ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
Recommended Video
ಸಾಮಾಜಿಕ ಜಾಲ ತಾಣದಲ್ಲಿ ವಿರೋಧ: ಬಾಡಿಗೆದಾರರ ವಿವರ ದಾಖಲಿಸುವ ಪೊಲೀಸರ ಆಪ್ಗೆ ಸಾಮಾಜಿಕ ಜಾಲ ತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಪೊಲೀಸರು ಗಸ್ತು ತಿರುಗುವಾಗಲೂ ರೊಲ್ ಕಾಲ್ ಮಾಡುತ್ತಾರೆ. ಮೊದಲು ರೋಲ್ ಕಾಲ್ ನಿಲ್ಲಿಸಿ, ಅಮೇಲೆ ಬಾಡಿಗೆ ಮನೆ ಮಾಲೀಕರ ವಿವರ ಕೇಳಿ ಎಂದು ಟೀಕೆ ಮಾಡಿದ್ದಾರೆ. ಅಂತೂ ಪೊಲೀಸರ ಆಪ್ ವಿಚಾರ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.