ಮಹಿಷಿ ವರದಿಗಾಗಿ ಮಾರ್ಚ್ 4 ಕ್ಕೆ ವಿಧಾನಸೌಧ ಬಂದ್ ಅಂತೆ!
ಬೆಂಗಳೂರು, ಫೆಬ್ರವರಿ 13: ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲು ನೀಡಬೇಕು ಎಂದು ಹೇಳುವ 'ಡಾ ಸರೋಜಿನಿ ಮಹಿಷಿ ವರದಿ' ಮತ್ತೆ ಮುನ್ನೆಲೆಗೆ ಬಂದಿದೆ.
ವರದಿ ಜಾರಿ ಮಾಡುವಂತೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಕಳೆದ ೩ ತಿಂಗಳಿನಿಂದ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸರೋಜಿ ಮಹಿಷಿ ವರದಿಗೆ ಕನ್ನಡಿಗರು ಇಷ್ಟು ಪರಿ ಪರಿಯಾಗಿ ಕೇಳಿಕೊಂಡರೂ ವರದಿ ಜಾರಿಗೆ ಸರ್ಕಾರಗಳು ಮನಸ್ಸು ಮಾಡುತ್ತಿಲ್ಲ.
ಮತ್ತೆ ಕರ್ನಾಟಕ ಬಂದ್; ಮಹಿಷಿ ವರದಿ ಬಗ್ಗೆ ನಿಮಗೆಷ್ಟು ಗೊತ್ತು?
ಇದರಿಂದ ಕೆರಳಿರುವ ಕನ್ನಡ ಸಂಘಟನೆಗಳು ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಧರಣಿ ಸತ್ಯಾಗ್ರಹ ಮಾಡಿದರೆ ನಡೆಯುವುದಿಲ್ಲ ಎಂದು ಗುರುವಾರ ಕರ್ನಾಟಕ ಒಂದು ದಿನ ಬಂದ್ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿವೆ. ಇದಕ್ಕೆ ಕಾರ್ಮಿಕರು, ಆಟೋ, ಕ್ಯಾಬ್ ಡ್ರೈವರ್ಗಳು, ನೂರಾರು ಸಂಘಟನೆಗಳು ಬೆಂಬಲ ಸೂಚಿವೆ.
Karnataka Bandh LIVE: ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಿದ ಹೋರಾಟಗಾರರು
ಆದರೆ ಕನ್ನಡಪರ ಹೋರಾಟದಲ್ಲಿ ಸದಾ ಮುಂದೆ ಇರುವ ವಾಟಾಳ್ ನಾಗರಾಜ್ ಅವರು ಈ ಬಂದ್ಗೆ ಬೆಂಬಲ ಸೂಚಿಸಿಲ್ಲ. ಈ ಹಿನ್ನೆಲೆಯಲ್ಲಿ ಸರೋಜಿನಿ ಮಹಿಷಿ ಯಾರು? ಅವರು ನೀಡಿದ ವರದಿ ಬಗ್ಗೆ ಮಾಜಿ ಶಾಸಕ ಹಾಗೂ ಕನ್ನಡ ಹೋರಾಟಗಾರ ಒನ್ ಇಂಡಿಯಾದೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಹೋರಾಟ ಇವತ್ತಿನದಲ್ಲ
'ಕರ್ನಾಟಕದಲ್ಲಿ ಕನ್ನಡಿಗರೇ ದುಸ್ಥಿತಿಯಲ್ಲಿ ಬದುಕುವ ಪರಿಸ್ಥಿತಿ ಬಂದೊದಗಿದೆ ನೋಡಿ. ಇಂತಹ ಪರಿಸ್ಥಿತಿ ನೋಡಿ ತೀವ್ರ ದುಃಖವಾಗುತ್ತಿದೆ. ಸರೋಜಿನಿ ಮಹಿಷಿ ವರದಿ ಜಾರಿ ಮಾಡಬೇಕು ಎಂಬುದು ಇವತ್ತಿನ ಹೋರಾಟ ಅಲ್ಲ. ವರದಿ ಬಂದು 30 ವರ್ಷ ಆಯಿತು. ಇನ್ನೂ ಹೋರಾಟ ಮಾಡುತ್ತಲೇ ಇದ್ದೇವೆ'.
ಸರ್ಕಾರಗಳು ಇಚ್ಛಾಶಕ್ತಿ ತೋರಿಸುತ್ತಿಲ್ಲ
'ಸಂಸತ್ನಲ್ಲಿ ಕನ್ನಡಿಗರ ಅಪ್ಪಟ ಧ್ವನಿಯಾಗಿದ್ದವರು ಸರೋಜಿನಿ ಮಹಿಷಿ. ಅವರು ಕೊಟ್ಟ ವರದಿ ಕನ್ನಡಿಗರ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿತ್ತು. ಆದರೆ ಅಂದಿನಿಂದ ಇಂದಿನವರೆಗೂ ಯಾವುದೇ ಸರ್ಕಾರಗಳು ಆ ವರದಿಯನ್ನು ಜಾರಿಗೊಳಿಸಲು ಇಚ್ಛಾಶಕ್ತಿ ತೋರಿಸದಿರುವುದು ಆಕ್ರೋಶ ತರಿಸುತ್ತದೆ'.
ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ಬೆಂಬಲವಿಲ್ಲ: ಕಾರಣವೇನು?
ನಿರಂತರ ಹೋರಾಟ ಮಾಡುತ್ತಿದ್ದೇನೆ
'ಕರ್ನಾಟಕದ ನೆಲ ಜಲ ಪಡೆದುಕೊಂಡ ಹೊರಗಿನವರು ನಮ್ಮನ್ನೇ ಕಡೆಗಣಿಸುತ್ತಿರುವುದಂತೂ ಸತ್ಯ. ಇದನ್ನು ದೂರ ಮಾಡಲೆಂದು ಮಹಿಷಿ ವರದಿ ಜಾರಿಗೊಳಿಸಿ ಎಂದು ನಾನು ನಿರಂತರ ಹೋರಾಟ ಮಾಡುತ್ತಿದ್ದೇನೆ. ವರದಿ ಬಂದು ಮೂವತ್ತು ವರ್ಷ ಆದರೂ, ನಾನು ಅದಕ್ಕಿಂತ ಮೊದಲೇ ಈ ವಿಷಯದಲ್ಲಿ ಹೋರಾಟ ಮಾಡಿದ್ದೇನೆ. ಸದನದಲ್ಲಿ ದೊಡ್ಡ ಧ್ವನಿ ಎತ್ತಿದ್ದೇನೆ. ಮಹಿಷಿ ವರದಿ ಜಾರಿಯಾಗದಿರಲು ಕೇವಲ ಒಂದು ಸರ್ಕಾರ ಕಾರಣ ಅಲ್ಲ. ಎಲ್ಲ ಸರ್ಕಾರಗಳೂ ಈ ವರದಿಯನ್ನೂ ಮೂಲೆಗುಂಪು ಮಾಡುತ್ತಾ ಬಂದಿವೆ'.
ಮಾರ್ಚ್ 4 ರಂದು ವಿಧಾನಸೌಧ ಬಂದ್ ಮಾಡುತ್ತೇವೆ
'ಇಂದು ಕೆಲವರು ಕರೆ ಕೊಟ್ಟಿರುವ ಬಂದ್ಗೆ ನನ್ನ ಬೆಂಬಲ ಇಲ್ಲ. ಈ ಕುರಿತು ನಾನೇನೂ ಹೇಳುವುದಿಲ್ಲ. ಆದರೆ ಮಹಿಷಿ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ಬರುವ ಮಾರ್ಚ್ 4 ರಂದು ವಿಧಾನಸೌಧ ಬಂದ್ ಮಾಡುತ್ತೇವೆ. ಅಂದು ಯಾವುದೇ ಶಾಸಕರನ್ನು ವಿಧಾನಸೌಧದ ಒಳಗೆ ಬಿಡುವುದಿಲ್ಲ. ಮಹಿಷಿ ವರದಿ ಜಾರಿ ಆಗಲೇಬೇಕು. ಕನ್ನಡಿಗರಿಗೆ ಖಾಸಗಿ ಉದ್ಯೋಗಗಳಲ್ಲಿ ಶೇ 75 ರಷ್ಟು ಮೀಸಲಾತಿ ಸಿಗಬೇಕು'.
ಫೆ. 13ರ ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ?
ವರದಿ ನೀಡಿದ ಸರೋಜಿನಿ ಮಹಿಷಿ
ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಬಲವಾಗಿ ಕೇಳಿ ಬಂದಿದ್ದರಿಂದ. ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ಅಂದಿನ ಸಂಸದೆ ಸರೋಜಿನಿ ಮಹಷಿಯವರಿಗೆ ಸೂಚಿಸಿತು. ಮಹಿಷಿಯವರು ಸತತ ಒಂದು ವರ್ಷ ಕ್ಷೇತ್ರ ಪ್ರವಾಸ, ಅಧ್ಯಯನ ಮಾಡಿ ಸರ್ಕಾರಕ್ಕೆ 1983 ರಲ್ಲಿ ವರದಿ ನೀಡಿದರು. ಅದು ಮಹಿಷಿ ವರದಿ ಎಂದೇ ಖ್ಯಾತವಾಯಿತು. ವರದಿ ಪ್ರಕಾರ ಕರ್ನಾಟಕದಲ್ಲಿ ಖಾಸಗಿ ಸಂಸ್ಥೆಗಳು ಶೇ 25 ಕ್ಕಿಂತ ಹೆಚ್ಚು ಉದ್ಯೋಗಗಳನ್ನು ಕಡ್ಡಾಯವಾಗಿ ಕನ್ನಡಿಗರಿಗೆ ಮೀಸಲು ಇಡಬೇಕು ಎಂದು ವರದಿಯಲ್ಲಿ ಹೇಳಲಾಗಿತ್ತು. 2015 ರಲ್ಲಿ ಸರೋಜಿನಿ ಮಹಿಷಿ ಅವರು ತಮ್ಮ 88 ನೇ ವಯಸ್ಸಿನಲ್ಲಿ ನಿಧನರಾದರು.
ಸರ್ಕಾರಗಳು ಇಚ್ಛಾಶಕ್ತಿ ತೋರಿಸುತ್ತಿಲ್ಲ
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯಬೇಕೆಂಬುದ್ದನ್ನು ಪ್ರತಿಪಾದಿಸುವ ಆ ವರದಿ ಇಂದಿಗೂ ಕೂಡ ಕನ್ನಡ ಮತ್ತು ಕರ್ನಾಟಕಪರ ಹೋರಾಟಗಳಿಗೆ ಆಧಾರವಾಗಿದೆ. ಆದರೆ, ಯಾವ ಸರ್ಕಾರಗಳೂ ಮಹಿಷಿ ವರದಿಯನ್ನು ಜಾರಿ ಮಾಡಲು ಇಚ್ಛಾಶಕ್ತಿ ತೋರಿಸದಿರುವುದು ಕನ್ನಡಿಗರಲ್ಲಿ ತೀವ್ರ ಬೇಸರ ತರಿಸಿರುವುದಂತೂ ಸತ್ಯ.