ಮೈಸೂರು ವಕೀಲರ ಸಹಕಾರ ಸೊಸೈಟಿ ಕ್ರಮಕ್ಕೆ ಹೈಕೋರ್ಟ್ ಕೆಂಡಾಮಂಡಲ
ಬೆಂಗಳೂರು, ಮಾರ್ಚ್ 17: ಸಾಮಾನ್ಯವಾಗಿ ಬಾಂಬ್ ಸ್ಫೋಟ, ಉಗ್ರಗಾಮಿ ಚಟುವಟಿಕೆ ಪ್ರಕರಣದಲ್ಲಿ ಆರೋಪಿ ಪರ ವಕಾಲತು ವಹಿಸದಂತೆ ವಕೀಲರ ಸಂಘಗಳು ತೀರ್ಮಾನ ತೆಗೆದುಕೊಳ್ಳುತ್ತವೆ. ಈ ಹಿಂದೆ ಅನೇಕ ಪ್ರಕರಣಗಳಲ್ಲಿ ಎಷ್ಟೋ ಆರೋಪಿಗಳಿಗೆ ವಕೀಲರೇ ಪ್ರತಿನಿಧಿಸದ ಪ್ರಕರಣಗಳು ಇವೆ.
"ಸ್ವತಂತ್ರ್ಯ ಕಾಶ್ಮೀರ " ಕೂಗು ಸಂಬಂಧ ಹೋರಾಟದಲ್ಲಿ ಮೈಸೂರು ವಿಶ್ವ ವಿದ್ಯಾಲಯದಲ್ಲಿ ನಡೆದ ಹೋರಾಟದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ನಳಿನಿ ಬಾಲಕುಮಾರ್ ಪರ ವಕಲಾತು ಹಾಕದಂತೆ ಮೈಸೂರು ವಕೀಲರ ವಿವಿದೋದ್ದೇಶ ಸಹಕಾರ ಸೊಸೈಟಿ ಸುತ್ತೋಲೆ ಹೊರಡಿಸಿತ್ತು. ಸೊಸೈಟಿಯ ಈ ನಿರ್ಧಾರವನ್ನು "ಅನ್ ಪ್ರೊಫೆಷನಲ್ " ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ" ಫ್ರೀ ಕಾಶ್ಮೀರ್ " ಘೋಷವಾಕ್ಯದಡಿ ಕಳೆದ ವರ್ಷ ವಿದ್ಯಾರ್ಥಿಗಳು ಮೈಸೂರು ವಿಶ್ವ ವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಹೋರಾಟ ಪ್ರತಿನಿಧಿಸಿದ್ದ ನಳಿನಿ ಬಾಲಕುಮಾರ್ ವಿರುದ್ಧ ದೇಶದ್ರೋಹ ಆರೋಪ ಹೊರಿಸಿತ್ತು. ನಳಿನಿ ಬಾಲಕುಮಾರ್ ಅವರ ಪರ ವಕಾಲತು ಹಾಕದಂತೆ ಮೈಸೂರು ವಕೀಲರ ಸಂಘ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ನಳಿನಿ ಪರ ಯಾವ ವಕೀಲರು ವಕಾಲತು ಹಾಕಿರಲಿಲ್ಲ. ವಕೀಲರ ಸಂಘದ ಈ ಸುತ್ತೋಲೆಯನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು.
ಪ್ರಕರಣವನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ನೇತೃತ್ವದ ವಿಭಾಗೀಯ ಪೀಠ, ಒಬ್ಬ ಆರೋಪಿಗೆ ವಕಾಲತು ಹಾಕದಂತೆ ವಕೀಲರ ಸಂಘ ಸುತ್ತೋಲೆ ಹೊರಡಿಸಿರುವುದು ಅನ್ ಪ್ರೊಫೆಷನಲ್ ಅಲ್ಲದೇ ಮತ್ತೇನು ? ಈ ರೀತೀಯ ಆದೇಶ ಹೊರಡಿಸಿದ ಮೈಸೂರು ವಕೀಲರ ಸಂಘದ ವಿರುದ್ಧ ಕರ್ನಾಟಕ ಬಾರ್ ಕೌನ್ಸಿಲ್ ಯಾಕೆ ಕ್ರಮ ಜರುಗಿಸಬಾರದು ಎಂದು ಕಿಡಿಕಾರಿದೆ.
ವಕೀಲಿಕೆ ಭಾಗವಾಗಿ ಇಂತಹ ವೃತ್ತಿದ್ರೋಹ ಆದೇಶ ಮಾಡುವುದು ಸರಿಯೇ ? ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ದೇಶದ್ರೋಹ ಆರೋಪ ಹೊತ್ತ ಆರೋಪಿಯನ್ನು ಪ್ರತಿನಿಧಿಸುವುದು ವಕೀಲಿಕೆ ವೃತ್ತಿಧರ್ಮ. ಈ ಸುತ್ತೋಲೆ ಹೊರಡಿಸಿರುವುದು ವಕೀಲರು ಅಲ್ಲವೇ ? ಇಂತಹ ವಕೀಲರ ವಿರುದ್ಧ ಕರ್ನಾಟಕ ರಾಜ್ಯ ಬಾರ್ ಕೌಲ್ಸಿಲ್ ಕ್ರಮ ಜರುಗಿಸಬೇಕು. ಇವು ವಕೀಲರ ಸಮುದಾಯದ ಸೊಸೈಟಿಗಳೇ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಪ್ರಶ್ನೆ ಮಾಡಿದ್ದಾರೆ. ಈ ಕುರಿತು ಮೈಸೂರು ನಗರ ವಕೀಲರ ಸಹಕಾರ ಸಂಘಕ್ಕೆ ನೋಟಿಸ್ ನೀಡಲಾಗಿದೆಯೇ? ಯಾಕೆ ಅವರಿಗೆ ನೋಟಿಸ್ ನೀಡಬಾರದು ಎಂದು ನ್ಯಾಯಪೀಠ ಪ್ರಶ್ನೆ ಮಾಡಿತು.
Recommended Video
ನ್ಯಾಯಾಲಯದ ಆದೇಶದಂತೆ ನೋಟಿಸ್ ನೀಡಲಾಗುವುದು ಎಂದು ಬಾರ್ ಕೌನ್ಸಿಲ್ ನ್ಯಾಯಪೀಠಕ್ಕೆ ಹೇಳಿತು. ಇದೇ ವೇಳೆ ಮೈಸೂರು ವಕೀಲರ ಸಹಕಾರ ಸಂಘದಲ್ಲಿ ಅಂತಹ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂಬುದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಮೈಸೂರು ಜಿಲ್ಲಾ ವಕೀಲರ ಅಸೋಸಿಯೇಷನ್ ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿತು. ಇದಕ್ಕೂ ಮುನ್ನ ದೂರುದಾರ ಪರ ವಾದ ಮಂಡಿಸಿದ ವಕೀಲರಾದ ರಮೇಶ್ ನಾಯಕ್, ಒಬ್ಬ ಆರೋಪಿ ಪರ ವಕಾಲತು ಹಾಕದಂತೆ ಸುತ್ತೋಲೆ ಹೊರಡಿಸಿರುವ ಬಗ್ಗೆ ಕರ್ನಾಟಕ ಬಾರ್ ಕೌನ್ಸಿಲ್ ಮೌನವಾಗಿರುವದು ತುಂಬಾ ಅಪಾಯಕಾರಿ ಬೆಳವಣಿಗೆ ಎಂದು ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆಯನ್ನು ಏ. 20 ಕ್ಕೆ ಮುಂದೂಡಲಾಗಿದೆ.