ಪೊಲೀಸ್ ಅಧಿಕಾರಿಯನ್ನು ಮದುವೆಯಾದ ಪ್ರಭಾವಿ ರಾಜಕಾರಣಿ ಪುತ್ರಿ ಐಶ್ವರ್ಯ !
ಬೆಂಗಳೂರು: ಪ್ರಭಾವಿ ರಾಜಕಾರಣಿ ಪುತ್ರಿ ಐಶ್ವರ್ಯ ಅವರ ವಿವಾಹ ಸಿಸಿಬಿಯ ಎಸಿಪಿ ದರ್ಜೆಯ ಪೊಲೀಸ್ ಅಧಿಕಾರಿಯೊಂದಿಗೆ ನೆರವೇರಿದೆ. ಇದೇನಿದು ಮೊನ್ನೆಯಷ್ಟೇ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಅವರ ವಿವಾಹ ನಿಶ್ಚಿತಾರ್ಥ ದಿವಂಗತ ಸಿದ್ಧಾರ್ಥ ಅವರ ಪುತ್ರನೊಂದಿಗೆ ನೆರವೇರಿತ್ತು ! ಇದೇನಿದು ಎಂದು ಗಾಬರಿಯಾಗಬೇಡಿ. ಡಿ.ಕೆ. ಅವರ ಪುತ್ರಿ ಐಶ್ವರ್ಯ ಬೇರೆ. ಪೊಲೀಸ್ ಅಧಿಕಾರಿಯನ್ನು ವರಿಸಿದ ಐಶ್ವರ್ಯ ಬೇರೆ. ಆದರೆ ಈ ಐಶ್ವರ್ಯ ಕೂಡ ಪ್ರಭಾವಿ ರಾಜಕಾರಣಿಯ ಪುತ್ರಿಯೇ.
ತುಮಕೂರು ಗ್ರಾಮಾಂತರ ಜಿಲ್ಲೆಯ ಮಾಜಿ ಶಾಸಕ ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯ ಹಾಗೂ ಸಿಸಿಬಿಯಲ್ಲಿ ಎಸಿಪಿಯಾಗಿರುವ ಮಧುಗಿರಿ ಮೂಲದ ಕೆ.ಸಿ. ಗೌತಮ್ ಅವರ ವಿವಾಹ ಶುಕ್ರವಾರವಷ್ಟೇ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ನಡೆದಿದೆ ! ಎಂಬಿಎ, ಯುಎಸ್ ನಲ್ಲಿ ಎಂಎಸ್ ಮುಗಿಸಿದ್ದ ಐಶ್ವರ್ಯ ಹಾಗೂ ಕೆಎಎಸ್ ಮಾಡಿ ಪೊಲೀಸ್ ಉಪಾ ಅಧೀಕ್ಷಕರಾಗಿರುವ ಗೌತಮ್ ಅವರ ವಿವಾಹಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಭಾಗಿಯಾಗಿ ನವ ದಂಪತಿಗಳನ್ನು ಆಶೀರ್ವದಿಸಿದರು.
ಡ್ರಗ್ ಕೇಸ್ ನಲ್ಲಿ ದೂರುದಾರ: ಚಿಕ್ಕಬಳ್ಳಾಪುರದಲ್ಲಿ ಪ್ರೊಬೇಷನರಿ ಸೇವೆ ಮುಗಿಸಿದ್ದ ಗೌತಮ್ ಕೆ.ಸಿ. ಅವರು ಭಟ್ಕಳ ಡಿವೈಎಸ್ಪಿಯಾಗಿದ್ದರು. ಇದಾದ ಬಳಿಕ ಸಿಸಿಬಿಯ ಎಸಿಪಿಯಾಗಿ ವರ್ಗಾವಣೆಯಾಗಿದ್ದರು. ನಟಿ ಸಂಜನಾ ಗಲ್ರಾಣಿ, ರಾಗಿಣಿ ದ್ವಿವೇದಿ ಸೇರಿದಂತೆ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಡ್ರಗ್ ಪ್ರಕರಣದಲ್ಲಿ ಕೆ.ಸಿ. ಗೌತಮ್ ದೂರುದಾರರು. ಗೌತಮ್ ಅವರು ನೀಡಿದ ದೂರಿನ ಆಧಾರದ ಮೇಲೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಅದೇ ಪ್ರಕರಣದ ಜಾಡು ಹಿಡಿದು ಸಿಸಿಬಿ ಪೊಲೀಸರು ನಟಿ ಸಂಜನಾ, ರಾಗಿಣಿ ದ್ವಿವೇದಿ ಮತ್ತಿತರ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದರು. ಇದೇ ಗೌತಮ್ ಅವರೇ ಮಾಜಿ ಶಾಸಕ ಸುರೇಶ್ ಗೌಡ ಅವರ ಪುತ್ರಿಯನ್ನು ಮದುವೆಯಾದವರು.
Recommended Video
ಡಿ.ಕೆ. ಶಿವಕುಮಾರ್ ಅವರ ಪುತ್ರಿ ಹೆಸರು ಕೂಡ ಐಶ್ವರ್ಯ. ಕಾಫಿ ಡೇ ಸಂಸ್ಥಾಪಕ ದಿ. ಸಿದ್ಧಾರ್ಥ ಅವರ ಪುತ್ರ ಅಮಥ್ರ್ಯ ಹಾಗೂ ಡಿಕೆಶಿ ಪುತ್ರಿ ಐಶ್ವರ್ಯ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಕೆಲ ದಿನಗಳ ಹಿಂದಷ್ಟೇ ನಡೆದಿತ್ತು.