ಬಿಎಂಟಿಸಿ ಮಹಿಳಾ ಕಂಡಕ್ಟರ್ ಮೇಲೆ ಆಸಿಡ್ ದಾಳಿ ಮಾಡಿದ್ದು ಸಂಬಂಧಿಕರೇ
ಬೆಂಗಳೂರು, ಡಿಸೆಂಬರ್ 22: ಬಿಎಂಟಿಸಿ ಬಸ್ ಮಹಿಳಾ ಕಂಡಕ್ಟರ್ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದು ಆಕೆಯ ಸಂಬಂಧಿಕರೇ ಎನ್ನುವ ಮಾಹಿತಿ ಲಭ್ಯವಾಗಿದೆ.
ಆಕೆಯ ಭಾಮೈದ ಹಾಗೂ ಆತನ ಸ್ನೇಹಿತನನ್ನು ಬಂಧಿಸುವಲ್ಲಿ ಉತ್ತರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.ಬಿಎಂಟಿಸಿ ಡ್ರೈವರ್ ಕಂ ಕಂಡಕ್ಟರ್ ಆಗಿದ್ದ ಗಾಯಿತ್ರಿನಗರದ ಅರುಣ್ ನಾಯಕ್ ಹಾಗೂ ಆತನ ಸ್ನೇಹಿತ ನಾಗಸಂದ್ರದ ಕುಮಾರ್ ನಾಯಕ್ ಬಂಧಿತ ಆರೋಪಿಗಳಾಗಿದ್ದಾರೆ.
ಬಿಎಂಟಿಸಿ ಮಹಿಳಾ ಕಂಡಕ್ಟರ್ ಮೇಲೆ ಆಸಿಡ್ ದಾಳಿ
ಡಿಸೆಂಬರ್ 19ರಂದು ಮುಂಜಾನೆ 5.30ರ ವೇಳೆ ಬಿಎಂಟಿಸಿ ಕಂಡಕ್ಟರ್ ಇಂದಿರಾಬಾಯಿ ಅವರು ಕೆಲಸಕ್ಕೆ ಹೋಗಲು ಬಾಗಲಗುಂಟೆಯ ಬಸ್ ನಿಲ್ದಾಣಕ್ಕೆ ಮನೆಯಿಂದ ಎಂದಿನಂತೆ ನಡೆದುಕೊಂಡು ಬಂದಿದ್ದರು. ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಆ್ಯಸಿಡ್ ಎರಚಿ ಪರಾರಿಯಾಗಿದ್ದರು.
ಮುಖ, ಕುತ್ತಿಗೆ, ಕೈಗಳಿಗೆ ಸುಟ್ಟ ಗಾಯಗಳಾಗಿದ್ದ ಇಂದಿರಾ ಬಾಯಿ ಅವರನ್ನು ಸ್ಥಳೀಯ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದುಕೊಂಡ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸಂಬಂಧ ದಾಖಲಿಸಿಕೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಾಗಲಗುಂಟೆ ಪೊಲೀಸರು ವಿಶೇಷ ತಂಡವನ್ನು ಸಚಿಸಿ ಪ್ರಕರಣವನ್ನು ಬೇಧಿಸಿದ್ದಾರೆ.