ಬೆಂಗಳೂರಲ್ಲಿ ಆಸಿಡ್ ದಾಳಿ; 106 ದಿನದ ಬಳಿಕ ಯುವತಿ ಡಿಸ್ಚಾರ್ಚ್
ಬೆಂಗಳೂರು, ಆಗಸ್ಟ್ 12; ಏಪ್ರಿಲ್ 28 ರಂದು ಎಂದಿನಂತೆ ಮುತ್ತೂಟ್ ಫಿನ್ ಫೈನಾನ್ಸ್ಗೆ ಸಂತ್ರಸ್ಥೆ ಕೆಲಸಕ್ಕೆ ಹೋಗುತ್ತಿದ್ದಳು. ಈ ವೇಳೆ ಹಿಂಬಾಲಿಸಿಕೊಂಡು ಬಂದ ಕಿರಾತಕ ನಾಗೇಶ್ ಏಕಾಏಕಿ ಆಸಿಡ್ ಎರಚಿ ಎಸ್ಕೇಪ್ ಆಗಿಬಿಟ್ಟಿದ್ದ. ಆಸಿಡ್ ದಾಳಿಯಿಂದ ತೀವ್ರ ತೊಂದರೆಯನ್ನು ಅನುಭವಿಸಿದ ಸಂತ್ರಸ್ಥೆ ಸಾವು ಬದುಕಿನ ನಡುವಿನ ಹೋರಾಟದಲ್ಲಿ ಗೆದ್ದು ಮನೆಯನ್ನು ತಲುಪಿದ್ದಾಳೆ.
ತಾನು ಪ್ರೀತಿಸುತ್ತಿದ್ದೇನೆ ನೀನು ನನ್ನನ್ನು ಪ್ರೀತಿಸ ಬೇಕು ಎಂದು ಪ್ರೀತ್ಸೆ ಪ್ರೀತ್ಸೆ ಎಂದು ಪ್ರಾಣ ತಿನ್ನುತ್ತಿದ್ದ ನಾಗೇಶ್ ಸಂತ್ರಸ್ಥ ಯುವತಿ ಮೇಲೆ ಆಸಿಡ್ ದಾಳಿ ಮಾಡಿದ್ದ. ಬಳಿಕ ತಮಿಳುನಾಡಿನ ಸೇಲಂಗೆ ಎಸ್ಕೇಪ್ ಆಗಿದ್ದ. ಸ್ವಾಮಿಜೀ ವೇಷವನ್ನು ತೊಟ್ಟು ಅಡಗಿದ್ದವನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿ ಕರೆತದಿದ್ದರು. ಆರೋಪಿಯ ವಿರುದ್ದ ಚಾರ್ಜ್ ಶೀಟ್ ಅನ್ನು ಸಹ ಸಲ್ಲಿಕೆ ಮಾಡಲಾಗಿದೆ.
ಬೆಂಗಳೂರು ಆಸಿಡ್ ದಾಳಿ; ಆಗಸ್ಟ್ 10ಕ್ಕೆ ಚಾರ್ಜ್ಶೀಟ್ ಸಲ್ಲಿಕೆ
106 ದಿನ ಬಳಿಕ ಆಸ್ಪತ್ರೆಯಿಂದ ಮನೆಗೆ ಬಂದ ಯುವತಿ
ಏಪ್ರಿಲ್ 28 ನೇ ತಾರೀಖು ಯುವತಿಗೆ ಕರಾಳ ದಿನ. ಚೆನ್ನಾಗಿ ಓದಿ, ಜೀವನ ರೂಪಿಕೊಳ್ಳಲು ಕಷ್ಟ ಪಡುತಿದ್ದ ಯುವತಿ ಕಂಡಂತ ಕನಸುಗಳು ಅಪಾರ. ಆದರೆ ಆ ಒಬ್ಬ ಕಿರಾತಕನಿಂದ 106 ದಿನಗಳ ಕಾಲ ಆಸ್ಪತ್ರೆಯಲ್ಲಿ ನರಕಯಾತನೆ ಅನುಭವಿಸಿ ಕೊನೆಗೂ ತನ್ನ ಮನೆಗೆ ವಾಪಸ್ಸಾಗಿದ್ದಾಳೆ.
ಮೊದಲಿಗೆ "ತನಗೆ ಧೈರ್ಯ ತುಂಬಿ ಚಿಕಿತ್ಸೆ ಕೊಟ್ಟ ವೈದ್ಯರಿಗೆ ಹಾಗೂ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾಳೆ. ಇನ್ನು ತನ್ನ ಇಂದಿನ ಈ ಸ್ಥಿತಿಗೆ ಕಾರಣವಾಗಿರುವ ಆರೋಪಿ ನಾಗೇಶನಿಗೆ ಕಠಿಣ ಶಿಕ್ಷೆ ಆಗಬೇಕು. ನನ್ನ ಮುಂದೆಯೇ ಆರೋಪಿಗೂ ಆ್ಯಸಿಡ್ ಹಾಕಬೇಕು, ನಂತರ ನೇಣಿಗೆ ಹಾಕಬೇಕು. ಅವನೂ ನನ್ನಂತೆ ನರಳುವುದನ್ನು ನೋಡಬೇಕು. ಅದಕ್ಕಾಗಿಯೇ ನಾನು ಇಷ್ಟು ಬೇಗ ಗುಣಮುಖಳಾಗಿ ಮನೆಗೆ ಮರಳಿದ್ದೇನೆ" ಎಂದು ಸಂತ್ರಸ್ಥ ಯುವತಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
3 ತಿಂಗಳ ನಂತರ ಮತ್ತೆ ಕೆಲವು ಶಸ್ತ್ರ ಚಿಕಿತ್ಸೆ
ಆಗಸ್ಟ್ 11 ರ ರಾತ್ರಿ ವೈದ್ಯರು ಯುವತಿಯನ್ನು ಡಿಸ್ಚಾರ್ಜ್ ಮಾಡಿದ್ದಾರೆ. ಮನೆಗೆ ಮರಳಿದ ಯುವತಿ ಕುಟುಂಬದವರನ್ನು ನೋಡಿ ಖುಷಿಯಲ್ಲಿದ್ದಾಳೆ. ಇನ್ನು ಯುವತಿಗೆ 28 ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಇನ್ನು 3 ತಿಂಗಳ ನಂತರ ಮತ್ತೆ ಕೆಲವು ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ.
ಕಣ್ಣಿಗೂ ಸ್ವಲ್ಪ ಗಾಯವಾಗಿದ್ದು, ದೃಷ್ಟಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲವಂತೆ. ಇನ್ನು ಕಳೆದ ಮೂರು ತಿಂಗಳಿನಿಂದ ಯುವತಿಯ ಆರೈಕೆಯಲ್ಲೇ ಸಮಯ ದೂಡುತ್ತಿರುವ ಪೋಷಕರಿಗೆ ಈಗ ಮಗಳ ಭವಿಷ್ಯದ್ದೇ ಚಿಂತೆಯಾಗಿದೆ. ನನಗೆ ಬಂದ ಸ್ಥಿತಿ ಬೇರೆ ಯಾರಿಗೂ ಬರಬಾರದು ಅಂತ ನೋವಿನಲ್ಲೇ ಮಾತನಾಡಿದ್ದಾಳೆ . ಸದ್ಯ ಯುವತಿ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡಿದೆ.
ಸಂಬಂಧಿಕರ ಮದುವೆಗೆ ಹೋಗಲಾಗಲಿಲ್ಲ
ಆಸಿಡ್ ದಾಳಿಯಿಂದ ಕೇವಲ ನನಗೆ ಮಾತ್ರವಲ್ಲ ತನ್ನ ಕುಟುಂಬದವರೂ ನೋವನ್ನು ಅನುಭವಿಸುತ್ತಿದ್ದಾರೆ. ನನ್ನ ಸಂಬಂಧಿಯೊಬ್ಬರ ಮದುವೆಗೆ ಹೋಗಲು ಸಿದ್ದತೆ ಮಾಡಿಕೊಂಡಿದ್ದೆವು. ಹೊಸ ಬಟ್ಟೆಯನ್ನು ಖರೀದಿಸಿ ಅದಕ್ಕೆ ಮ್ಯಾಚಿಂಗ್ ಬೇಕಾದದನ್ನು ಸಹ ತೆಗೆದುಕೊಂಡಿದ್ದೆ. ಆದರೆ ಆಸಿಡ್ ದಾಳಿಯಿಂದ ಎಲ್ಲಿಗೂ ಹೋಗಲು ಸಾಧ್ಯವಾಗಲಿಲ್ಲ ಎಂದು ತನ್ನ ನೋವನ್ನು ಯುವತಿ ತೋಡಿಕೊಂಡಿದ್ದಾಳೆ.
ಪ್ರೀತಿಸುತ್ತೇನೆ ಎಂದಾಗ ಅವರ ದೊಡ್ಡಮ್ಮನಿಗೂ ಹೇಳಿದ್ದೆ
ಆರೋಪಿ ನಾಗೇಶ್ ಬಗ್ಗೆ ಸಾಕಷ್ಟು ಆಕ್ರೋಶಗೊಂಡಿರುವ ಸಂತ್ರಸ್ತೆ ಆರೋಪಿಗೆ ನೇಣು ಹಾಕಹಬೇಕೆಂದು ಪದೇ ಪದೇ ಹೇಳಿದ್ದಾಳೆ. ಇದರ ಜೊತೆಗೆ ಆತನನ್ನು ನಾನು ಅಣ್ಣಾ ಎಂದು ಕರೆಯುತ್ತಿದ್ದೆ. ಪ್ರೀತಿಸಲು ಪೀಡಿಸಿದಾಗ ಅವರ ದೊಡ್ಡಮ್ಮನಿಗೂ ಈ ವಿಚಾರವನ್ನು ತಿಳಿಸಿದ್ದೆ ಎಂದು ಸಂತ್ರಸ್ತ ಯುವತಿ ಹೇಳಿದ್ದಾಳೆ.
ಇನ್ನು ಸರ್ಕಾರ ಸಂತ್ರಸ್ತ ಯುವತಿಗೆ ನೆರವಾಗಬೇಕಿದೆ. ಇದರ ಜೊತೆಗೆ ಆಸಿಡ್ ಹಾಕುವವರ ವಿರುದ್ದ ಕ್ರಮಕ್ಕೆ ಹೊಸ ಕಾಯ್ದೆತರಬೇಕಿದೆ, ಇಲ್ಲವಾದರೆ ಹೆಣ್ಣುಮಕ್ಕಳನ್ನು ಇಂಥ ಕಿರಾತಕರಿಂದ ಕಾಪಾಡೋದು ಸುಲಭದ ಮಾತಲ್ಲ.