ಮನೆ ಮೇಲಿಂದ ಜಿಗಿದು ಆತ್ಮಹತ್ಯೆ : ಪ್ರಕರಣ ಸಿಐಡಿ ತನಿಖೆಗೆ
ಬೆಂಗಳೂರು, ಫೆಬ್ರವರಿ 27: ಮನೆ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಸಿದ್ದಲಿಂಗಸ್ವಾಮಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.
ಬಿಡಿಎ ನಿವೇಶನದಲ್ಲಿ ಕಾರ್ನರ್ ಸೈಟ್ ಕೊಡಿಸುವುದಾಗಿ 13 ಲಕ್ಷ ರೂ. ವಂಚನೆ ಮಾಡಿದ ಸಂಬಂಧ ಸಿದ್ಧಲಿಂಗಸ್ವಾಮಿ ವಿರುದ್ಧ ದೂರು ದಾಖಲಾಗಿತ್ತು. ಸಿದ್ದಲಿಂಗಸ್ವಾಮಿಯನ್ನು ವಶಕ್ಕೆ ಪಡೆದ ಹನುಮಂತನಗರ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ದಾಖಲೆಗಳು ಮನೆಯಲ್ಲಿಟ್ಟಿರುವುದಾಗಿ ಸಿದ್ದಲಿಂಗಸ್ವಾಮಿ ಹೇಳಿಕೆ ನೀಡಿದ್ದರು. ಈ ವೇಳೆ ಸಿದ್ದಲಿಂಗಸ್ವಾಮಿಯನ್ನು ಮನೆಗೆ ಕರೆದುಕೊಂಡು ಹೋದಾಗ ಎರಡನೇ ಮಹಡಿಯಿಂದ ಜಿಗಿದು ಬಿದ್ದಿದ್ದರು. ಈ ವೇಳೆ ತಲೆಗೆ ತೀವ್ರತರ ಪೆಟ್ಟಾಗಿತ್ತು. ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆ ಸಿದ್ದಲಿಂಗ ಸ್ವಾಮಿ ಸಾವನ್ನಪ್ಪಿದ್ದರು. ಸಿದ್ದಲಿಂಗ ಸ್ವಾಮಿ ಮೇಲಿಂದ ಜಿಗಿದು ಆತ್ಮಹತ್ಯೆಗೆ ಮಾಡಿಕೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Recommended Video
ಈ ಕುರಿತು ಸಿದ್ದಲಿಂಗಸ್ವಾಮಿ ಪತ್ನಿ ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಿದ ಹಿನ್ನೆಲೆಯಲ್ಲಿ ವಿದ್ಯಾರಣ್ಯಪುರ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸರ ವಶದಲ್ಲಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡ ಆರೋಪ ಸಂಬಂಧ ಪ್ರಕರಣವನ್ನು ಸಿಐಡಿ ಪೊಲೀಸರಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಶುಕ್ರವಾರ ಪೊಲೀಸರ ವಿಚಾರಣೆ ವೇಳೆ ಸಿದ್ದಲಿಂಗಸ್ವಾಮಿ ಮರ್ಯಾದೆಗೆ ಅಂಜಿ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777