ಹಳೆ ನೋಟು ರದ್ದಿನಿಂದಾಗಿ ಅಪಘಾತ ಸಂತ್ರಸ್ತ ಸಾವು
ಬೆಂಗಳೂರು, ನವೆಂಬರ್ 13: ಹಳೆಯ 500ರೂ. ಮುಖಬೆಲೆಯ ನೋಟುಗಳ ಚಲಾವಣೆ ರದ್ದುಮಾಡಿರುವುದರಿಂದ ಸೂಕ್ತ ಸಮಯಕ್ಕೆ ರಕ್ತ ಸಿಗದೆ ಅಪಘಾತ ಸಂತ್ರಸ್ತನೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ನೆಲಮಂಗಲ ಬಳಿಯ ದೊಡ್ಡಗುಟ್ಟೆ ಗ್ರಾಮದ ನಿವಾಸಿ ರಾಜು ಎಂಬುವವರು ರಸ್ತೆ ದಾಟುವಾಗ ಅಪಘಾತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನೂ ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಬುಧವಾರ ರಾತ್ರಿ ದಾಖಲಿಸಲಾಗಿತ್ತು. ತೀವ್ರ ರಕ್ತಸ್ರಾವವಾಗಿದ್ದ ಅವರಿಗೆ ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ಗುರುವಾರ ಸಾವನ್ನಪ್ಪಿದ್ದಾರೆ.
ತುರ್ತಾಗಿ ಅವರಿಗೆ ರಕ್ತದ ಅವಶ್ಯಕತೆ ಇದೆ ಎಂದು ರಕ್ತಕ್ಕಾಗಿ ಬ್ಲಡ್ ಬ್ಯಾಂಕ್ ಗಳಲ್ಲಿ ರಾಜು ಸಂಬಂಧಿಕರು ವಿಚಾರಿಸಿದ್ದಾರೆ. ಆದರೆ ಹಳೆಯ 500ರೂ. ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ.
"ರಾಜು ಅವರಿಗೆ AB+ ಗುಂಪಿನ ರಕ್ತವನ್ನು ಪೂರೈಸಬೇಕಿತ್ತು ಇದರಿಂದಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಹೋಗಿ ರಕ್ತಕ್ಕಾಗಿ ಕೇಳಿಕೊಂಡಿದ್ದೆವು. ಆದರೆ ಅವರು ಹಳೆ ನೋಟು ಬೇಡ ಹೊಸ 100ರೂ. ನೋಟುಗಳನ್ನು ಮಾತ್ರ ಸ್ವೀಕರಿಸುವುದಾಗಿ ಹೇಳಿದ್ದಾರೆ.
ನಾವು ಡ್ರೈವಿಂಗ್ ಲೈಸೆನ್ಸ್ ಮತ್ತು ಇತರೆ ದಾಖಲೆಗಳನ್ನು ನೀಡಿ ರಕ್ತ ನೀಡುವಂತೆ ಕೇಳಿಕೊಂಡಿದ್ದೆವು. ಆದರೆ ಎರಡು ದಿನ ಅಲೆದರೂ ನಮಗೆ ಅದೇ ಗ್ರೂಪಿನ ರಕ್ತ ಸಿಗಲಿಲ್ಲ" ಎಂದು ರಾಜು ಪತ್ನಿ ಸೌಮ್ಯ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಚಾಮರಾಜಪೇಟೆ ಹಾಗೂ ವಸಂತ ನಗರದ ಕೆಲವು ರಕ್ತ ನಿಧಿಗಳಲ್ಲಿ ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ ನಮಗೆ ಆ ಗುಂಪಿನ ರಕ್ತ ಸಿಗಲಿಲ್ಲ.
ರಾತ್ರಿ ಕೂಡ ರಕ್ತ ನೀಡುವವರು ನಮಗೆ ಯಾರೂ ಸಿಗಲಿಲ್ಲ. ಮರುದಿನ ಹಳೇ ನೋಟುಗಳ ಸಮಸ್ಯೆ ಎದುರಾಯಿತು" ಎಂದು ರಾಜು ಪತ್ನಿ ಸೌಮ್ಯ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಮಯ್ಯ ಆಸ್ಪತ್ರೆಯ ರಕ್ತನಿದಿ ಮುಖ್ಯಸ್ಧ ಡಾ.ವಿ ನಂದಕೀಶೋರ್ " ಅವರು AB+ ರಕ್ತಕ್ಕಾಗಿ ಕೇಳಿಕೊಂಡಿದ್ದು ನಿಜ. ಆ ಗುಂಪಿನ ರಕ್ತ ಸಿಗುವುದು ತುಂಬಾ ಅಪರೂಪ.
ಒಂದು ಬಾರಿ ರಕ್ತ ನೀಡಿದ ಮೇಲೆ ಅದು ರೋಗಿಯ ದೇಹದಲ್ಲಿ ಯಾವುದಾದರೂ ಅಡ್ಡ ಪರಿಣಾಮ ಬೀರುತ್ತದೆಯೇ ಎಂದು ನಾವು ಗಮನಿಸುತ್ತೇವೆ. ನಂತರ ಅಗತ್ಯ ಪ್ರಮಾಣದ ರಕ್ತ ಪೂರೈಸುತ್ತೇವೆ.
ನಾವು ರಕ್ತವನ್ನೂ ಸಹ ಮಾನವೀಯತೆ ದೃಷ್ಟಿಯಿಂದ ಪೂರೈಸಿದ್ದೇವೆ. ರಕ್ತಕ್ಕಾಗಿ 2.400ರೂ ಹಣ ಅವರು ನಮಗೆ ಕೊಡಬೇಕಿತ್ತು. ಆದರೆ ನಾವು ಹಣ ಪಡೆದುಕೊಂಡಿಲ್ಲ. ಎಂದು ಹೇಳಿದ್ದಾರೆ.