ಕತ್ರಿಗುಪ್ಪೆಯಲ್ಲಿ ಭೀಕರ ಅಪಘಾತ: ಸಿಸಿಟಿವಿಯಲ್ಲಿ ಸೆರೆಯಾಯ್ತು ಪಾದಚಾರಿಗಳಿಗೆ ಕಾರು ಗುದ್ದಿದ್ದ ದೃಶ್ಯ
ಬೆಂಗಳೂರು, ಮೇ20: ಬೆಂಗಳೂರಿನ ಕತ್ರಿಗುಪ್ಪೆ ಜಂಕ್ಷನ್ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗಳಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಕಾರಿನ ಡಿಕ್ಕಿಯ ರಭಸಕ್ಕೆ ಒರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಸಹಾಯಕ ನಿರ್ದೇಶಕ ಮುಕೇಶ್ ಎಂಬ ಚಾಲಕನ ಅಜಾಗರೂಕ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಕಿರುತೆರೆಯಲ್ಲಿ ಸಹಾಯಕ ನಿರ್ದೇಶನ ಮಾಡುತ್ತಿದ್ದ ಮುಕೇಶ್ ಎಂಬಾತ ಬೆಳಗ್ಗೆ ಕೆಲಸವನ್ನು ಮುಗಿಸಿ ಮನೆಗೆ ಹೊರಟ್ಟಿದ್ದ. ಈ ವೇಳೆ ಕಾರು ವಿಪರೀತ ವೇಗದಲ್ಲಿ ಕತ್ರಿಗುಪ್ಪೆ ಜಂಕ್ಷನ್ ಗೆ ಬಂದಿದೆ ಕಾರು ಬರುವುದನ್ನು ಗಮನಿಸದ ಪಾದಚಾರಿಗಳು ರಸ್ತೆಯಲ್ಲಿ ಹೋಗುವಾಗ ಕಾರು ಬಂದ ವೇಗದಲ್ಲೇ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಾಲ್ವರು ದಿಕ್ಕಾಪಾಲಾಗಿ ಬಿದ್ದಿದ್ದಾರೆ. ಕಾರು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಎರಡು ದ್ವಿಚಕ್ರವಾಹನಗಳಿಗೆ ಮತ್ತು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ.
ಚಾಲಕ ಮುಕೇಶ್ ಶಿವಮೊಗ್ಗ ಮೂಲದವನಾಗಿದ್ದು ಕನ್ನಡ ಸಿನಿಮಾ ಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾನೆ. ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ರವರ ಜೊತೆಗೆ ಕೆಲಸ ಮಾಡ್ತಿದ್ದ ಈತ 'ನಾನು ಮತ್ತು ಗುಂಡ' ಸಿನಿಮಾದಲ್ಲಿ ಕೆಲಸಮಾಡಿದ್ದಾರೆ. ಬೆಳಗ್ಗೆ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಹಾಗು ಮುಕೇಶ್ ಇಬ್ಬರು ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ದಿಕ್ಕಾಪಾಲಾಗಿ ಬಿದ್ದ ಗಾಯಾಳುಗಳು
ಕತ್ರಿಗುಪ್ಪೆ ಜಂಕ್ಷನ್ ಬಳಿಯಲ್ಲಿ ನಡೆದ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿಯನ್ನು ಗಮನಿಸಿದಾಗ ಪಾದಚಾರಿಗಳು ಮಾತನಾಡುತ್ತಾ ಸಾಗುತ್ತಿದ್ದು ಕಾರು ಏಕಾಏಕಿ ವೇಗವಾಗಿ ಬಂದ ಕಾರಣ ಅಪಘಾತವಾಗಿದೆ. ಕಾರು ಬರುವ ವೇಗದಲ್ಲಿ ಪಾದಚಾರಿಗಳು ತಪ್ಪಿಸಿಕೊಳ್ಳಲು ಸಾಧ್ಯವೇ ಆಗದಷ್ಟು ಭೀಕರವಾಗಿ ಅಪಘಾತ ಸಂಭವಿಸಿದೆ.
ಫುಟ್ಪಾತ್ ಮೇಲೆ ನಿಂತಿದ್ದ ಒಂದು ಕಾರು ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ
ಬೆಳಗ್ಗೆ 7.20ಗಂಟೆ ಸಮಯದಲ್ಲಿ ಕಾರ್ ನಂಬರ್ KA-51-MK5416ರ ಚಾಲಕ ಮುಕೇಶ್ ಎಂಬಾತನು ವಾಹನವನ್ನು ಕತ್ತರಿಗುಪ್ಪೆ ಜಂಕ್ಷನ್ ಕಡೆಯಿಂದ ಇಟ್ಟಮಡು ಜಂಕ್ಷನ್ ಕಡೆಗೆ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದ. ಈ ವೇಳೆ ಉದ್ಭವ ಆಸ್ಪತ್ರೆ ಬಳಿ ಇರುವ ಚಂದನ್ ಮೋಟಾರ್ ದ್ವಿಚಕ್ರ ವಾಹನ ಷೋರೂಂ ಬಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಚಿನ್, ಶಿವರಾಜು, ಸುರೇಶ್ ಮತ್ತು ಶೈಲೇಂದ್ರ ಎಂಬ 4ಜನ ಪಾದಚಾರಿಗಳಿಗೆ ಡಿಕ್ಕಿಮಾಡಿ, ಫುಟ್ಪಾತ್ ಮೇಲೆ ನಿಂತಿದ್ದ ಒಂದು ಕಾರು ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆೆದಿದೆ. ವಾಹನಗಳು ಜಂಖಗೊಂಡಿದ್ದು, ಅಪಘಾತಕ್ಕೀಡಾದ ಪಾದಚಾರಿ ಗಾಯಾಳು 28 ವರ್ಷದ ಸುರೇಶ್ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಉಳಿದ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.
ವಾಂಕಿಂಗ್ ಗೆ ತೆರಳಿದ್ದ ವಿದ್ಯಾರ್ಥಿ ಆಸ್ಪತ್ರೆ ಪಾಲು
ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ ಸಚಿನ್, ಶಿವರಾಜು, ಸುರೇಶ್ ಎಂಬುವವರು ಒಟ್ಟಿಗೆ ನಡೆದುಕೊಂಡು ಹೋಗುತ್ತಿದ್ದರು. ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಶೈಲೇಂದ್ರ ವಾಕಿಂಗ್ ಗೆ ಹೋಗಿದ್ದ. ಈ ನಾಲ್ವರು ಒಬ್ಬರ ಹಿಂದೊಬ್ಬರು ಎನ್ನುವಂತೆ ಹೆಜ್ಜೆ ಹಾಕುವ ವೇಳೆಯೇ ಭೀಕರ ಅಪಘಾತವಾಗಿ ಸಂಭವಿಸಿದೆ. ಅಪಘಾತವನ್ನು ನೋಡಿದ ಸ್ಥಳೀಯರು ಕ್ಷಣಕಾಲ ದಂಗಾಗಿಹೋಗಿದ್ದಾರೆ. ಇನ್ನು ಕೆಲವು ವಾಹನ ಚಾಲಕರು ಬಿದ್ದಿರುವ ಗಾಯಾಳುಗಳಿಗೆ ಸಹಾಯವನ್ನು ಮಾಡದೇ ನೋಡುತ್ತಾ ಮುಂದೆ ಸಾಗಿದ್ದಾರೆ.
ಸಹಾಯಕ ನಿರ್ದೇಶಕ ಮುಕೇಶ್ ಬಂಧನ
ಬೆಂಗಳೂರಿನ ಕತ್ರಿಗುಪ್ಪೆ ಬಳಿಯಲ್ಲಿ ನಡೆದ ಭೀಕರ ಅಪಘಾತಕ್ಕೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪೊಲೀಸರು ಪರಿಶೀಲನೆಯನ್ನು ನಡೆಸಿದ್ದಾರೆ. ಪಶ್ಚಿಮ ಸಂಚಾರಿ ವಿಭಾಗದ ಡಿಸಿಪಿ ಕುಲದೀಪ್ ಜೈನ್ ಮಾತನಾಡಿ "ಬೆಳಗ್ಗೆ ಕಾರೊಂದು ಕತ್ರಿಗುಪ್ಪೆ ಜಂಕ್ಷನ್ ಬಳಿ ನಾಲ್ವರು ಪಾದಾಚಾರಿಗೆಳಿಗೆ ಡಿಕ್ಕಿ ಹೊಡೆದಿದೆ. ಅಲ್ಲದೆ, ಒಂದು ಬೈಕ್ ಹಾಗೂ ಕಾರಿಗೂ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂವರಿಗೆ ಗಾಯವಾಗಿ ಸುರೇಶ್ ಎಂಬಾತ ಮೃತಪಟ್ಟಿದ್ದಾನೆ. ಕಾರು ಚಾಲಕ ಮುಕೇಶ್ ಎಂಬಾತನ ನಿರ್ಲಕ್ಷ್ಯ ಹಾಗೂ ವೇಗದ ಚಾಲನೆಯ ಕಾರಣವಾಗಿದೆ. ಕಾರು ಚಾಲಕ ಮುಕೇಶ್ ಕಿರುತೆರೆಯಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡ್ತಿದ್ದ , ಬೆಳಗ್ಗೆ ಶೂಟಿಂಗ್ ಮುಗಿಸಿಕೊಂಡು ಬರುವಾಗ ಘಟನೆ ನಡೆದಿದೆ. ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಚಾಲಕ ಮುಕೇಶನನ್ನ ವಶಕ್ಕೆ ಪಡೆಯಲಾಗಿದೆ'' ಎಂದು ತಿಳಿಸಿದ್ದಾರೆ.
Recommended Video