ಕನ್ನಡ ಸಿನಿ ನಟರ ಡ್ರಗ್ಸ್ ಚಟ ಬಯಲು ಮಾಡಿತೇ ಈ ಅಪಘಾತ ಪ್ರಕರಣ?
Recommended Video
ಬೆಂಗಳೂರು, ಸೆಪ್ಟೆಂಬರ್ 28: ಬೆಂಗಳೂರಿನ ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿ ಒಂದು ಐಶಾರಾಮಿ ಕಾರು ಹಾಗೂ ಇತರ ವಾಹನಗಳ ನಡುವೆ ಸಂಭವಿಸಿರುವ ಅಪಘಾತ ಕನ್ನಡ ಚಿತ್ರರಂಗದ ಇಬ್ಬರು ನಟರು ಡ್ರಗ್ಸ್ ಜಾಲದಲ್ಲಿ ಸಿಲುಕಿರುವುದನ್ನು ಬೆರಳು ಮಾಡಿ ತೋರಿಸಿದೆ.
ಡ್ರಗ್ಸ್ ಸೇವಿಸಿ ಅಡ್ಡಾದಿಡ್ಡಿಯಾಗಿ ಕಾರೊಂದನ್ನು ಓಡಿಸಿಕೊಂಡು ಬಂದ ಉದ್ಯಮಿಯ ಮೊಮ್ಮಗನೊಬ್ಬ ಸೌತ್ ಎಂಡ್ ಸರ್ಕಲ್ ನಲ್ಲಿ ಬೇರೆ ಕಾರುಗಳಿಗೆ ಗುದ್ದಿದ ಪರಿಣಾಮ ಈ ಅಪಘಾತ ಉಂಟಾಗಿದೆ. ಅಪಘಾತ ಮಾಡಿದ ಕಾರಿನಲ್ಲಿ ಉದ್ಯಮಿಯೊಬ್ಬ ಮೊಮ್ಮಗ ಹಾಗೂ ಆತನ ಜತೆಗೆ ಇಬ್ಬರು ಸ್ಟಾರ್ ನಟರೂ ಇದ್ದಿದ್ದನ್ನು ಸ್ಥಳೀಯರು ನೋಡಿದ್ದಾರೆ. ಉದ್ಯಮಿಯ ಮೊಮ್ಮಗ ಹಾಗೂ ಆ ನಟರು ಡ್ರಗ್ಸ್ ಸೇವಿಸಿದ್ದನ್ನು ಸ್ಥಳೀಯರು ಗಮನಿಸಿದ್ದು, ಅವರ ಕಾರಿನಲ್ಲಿ ಗಾಂಜಾ ಪೊಟ್ಟಣಗಳು ಇದ್ದಿದ್ದನ್ನು ಸ್ಥಳೀಯರು ಗಮನಿಸಿದ್ದಾಗಿ ಕೆಲ ಮೂಲಗಳು ಹೇಳಲಾಗಿದೆ.
ಏನಿದು ಅಪಘಾತ?: ಸೆ. 27ರ ಮದ್ಯರಾತ್ರಿ ಕಾರೊಂದು ವೇಗವಾಗಿ ಬಂದು ನಿಯಂತ್ರಣ ತಪ್ಪಿ, ಫುಟ್ ಪಾತ್ ನಲ್ಲಿದ್ದ ರಸ್ತೆಗಳ ಮಾಹಿತಿ ಬೋರ್ಡ್ ಗೆ ಅಪ್ಪಳಿಸಿ ಅಪಘಾತವಾಗಿದೆ. ಮೂಲಗಳ ಪ್ರಕಾರ, ಈ ಕಾರಿನಲ್ಲಿ ಉದ್ಯಮಿಯ ಮೊಮ್ಮಗ ಹಾಗೂ ಇಬ್ಬರು ಕನ್ನಡ ಚಿತ್ರ ನಟರು ಇದ್ದರೆಂದು ಹೇಳಲಾಗಿದೆ.
ಈ ಮೂವರೂ ಅಳತೆ ಮೀರಿ ಕುಡಿದಿದ್ದಲ್ಲದೆ, ಮಾದಕ ವಸ್ತುಗಳನ್ನೂ ಸೇವಿಸಿದ್ದರೆಂದು ಹೇಳಲಾಗಿದ್ದು, ಆ ಮತ್ತಿನಲ್ಲೇ ಕಾರು ಚಲಾಯಿಸಿಕೊಂಡು ಬಂದಿದ್ದ ಉದ್ಯಮಿಯ ಮೊಮ್ಮಗ ಅಡ್ಡಾದಿಡ್ಡಿ ಕಾರು ಓಡಿಸಿಕೊಂಡು ಬಂದು ಸೌತ್ ಎಂಡ್ ಸರ್ಕಲ್ ನಲ್ಲಿ (ಇದರ ಮತ್ತೊಂದು ಹೆಸರು ತೀ.ನಂ.ಶ್ರೀ ವೃತ್ತ) ಸುಮಾರು ನಾಲ್ಕಾರು ಕಾರುಗಳಿಗೆ ಗುದ್ದಿದ್ದಾನೆ ಎನ್ನಲಾಗಿದೆ.
ಈ ಅಪಘಾತದಲ್ಲಿ ಒಂದು ಓಮ್ನಿ ಕಾರು ಪಲ್ಟಿಯಾಗಿದೆ. ಅದರಲ್ಲಿದ್ದವರು ಗಂಭೀರವಾಗಿ ಗಾಯಗೊಂಡವರು ಸಾಗರ್ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಅಪಘಾತಕ್ಕೊಳಗಾದ ಮತ್ತಿತರ ಕಾರು, ಜೀಪುಗಳಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಅಪಘಾತಕ್ಕೆ ಸಾಕ್ಷಿಯಾದ ಜನರು, ಉದ್ಯಮಿಯ ಮೊಮ್ಮಗ ಹಾಗೂ ಆ ಸಿನಿಮಾ ನಟರನ್ನು ಥಳಿಸಲು ಮುಂದಾದಾಗ, ಆ ಮೂವರೂ ಪರಾರಿ ಆಗಿದ್ದಾರೆಂದು ಹೇಳಲಾಗಿದೆ.
ಮಾದಕ ದ್ರವ್ಯಗಳ ಜಾಲದಲ್ಲಿ ಇತ್ತೀಚೆಗಷ್ಟೇ ತೆಲುಗು ಚಿತ್ರರಂಗದ ಘಟಾನುಘಟಿಗಳ ಹೆಸರು ಕೇಳಿಬಂದ ಬೆನ್ನಲ್ಲೇ ಇದೀಗ ಕನ್ನಡದ ಕೆಲವಾರು ಸಿನಿಮಾ ಸ್ಟಾರ್ ಗಳೂ ಇಂಥ ಕೆಟ್ಟ ಸಂಪ್ರದಾಯಕ್ಕೆ ಒಳಗಾಗಿರುವ ಬಗ್ಗೆ ಹಲವಾರು ಸಂಶಯಗಳು ಎದ್ದಿವೆ.