ಒಮ್ಮೊಮ್ಮೆ ಹೀಗೂ ಆಗುತ್ತೆ; ಬೈಕ್ ಹಾಗೂ ಗಾಳಿಪಟದ ನಡುವೆ ನಡೆಯಿತು ಅಪಘಾತ!
ಬೆಂಗಳೂರು, ಫೆಬ್ರವರಿ 10: ಅಪಘಾತಗಳಲ್ಲಿ ಬೈಕ್ ಅಪಘಾತ ಸರ್ವೇ ಸಾಮಾನ್ಯವಾದದ್ದಾಗಿದೆ. ರಸ್ತೆಯಲ್ಲಿ ಬೈಕ್ ಹಾಗೂ ವಾಹನ ಡಿಕ್ಕಿ, ಬೈಕ್ ಹಾಗೂ ಪ್ರಾಣಿ ನಡುವೆ ಡಿಕ್ಕಿ ಎನ್ನುವುದನ್ನು ಕೇಳಿದ್ದೇವೆ. ಆದರೆ, ಬೆಂಗಳೂರಿನಲ್ಲಿ ವಿಲಕ್ಷಣ ಬೈಕ್ ಅಪಘಾತವೊಂದು ನಡೆದಿದೆ.
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ, ಗಾಳಿಪಟದ ದಾರ (ಮಾಂಜಾ) ಹೆಲ್ಮೆಟ್ಗೆ ಸುತ್ತಿಕೊಂಡಿದ್ದರಿಂದಾಗಿ ಬೈಕ್ ಒಂದು ಉರುಳಿ ಬಿದ್ದು ಸವಾರ ಗಾಯಗೊಂಡಿರುವ ಘಟನೆ ನಡೆದಿದೆ. ಒಂದು ರೀತಿಯಲ್ಲಿ ಬೈಕ್ ಹಾಗೂ ಗಾಳಿಪಟದ ನಡುವೆ ಅಪಘಾತ ಸಂಭವಿಸಿದೆ.
ಬೆಂಗಳೂರಲ್ಲಿ ದುಬಾರಿ ಲ್ಯಾಂಬೋರ್ಗಿನಿ ಕಾರಿನಿಂದ ಸರಣಿ ಅಪಘಾತ
ಗಾಳಿಪಟದ ದಾರದಿಂದ ಬಿದ್ದು ಅಪಘಾತಗೊಂಡಿರುವ ಸವಾರನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಕುರಿತು ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಆದರೆ, ಸವಾರನ ಪತ್ನಿ ಫೇಸ್ಬುಕ್ನಲ್ಲಿ ಮಾಂಜಾ ಬಳಸಿ ಗಾಳಿಪಟ ಹಾರಿಸುವವರ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ನಡೆದ ಘಟನೆ ಏನು?
ಫೆ 7 ರಂದು ರಾತ್ರಿ 10 ಗಂಟೆ ಸುಮಾರು ಬನ್ನೇರುಘಟ್ಟ ಸಮೀಪ ಅಕ್ಷಯನಗರದ ಸ್ಟಾರ್ ಬಜಾರ್ ಬಳಿ ಖಾಸಗಿ ಕಂಪೆನಿ ಉದ್ಯೋಗಿ ಸುರ್ಜಿತ್ ಬ್ಯಾನರ್ಜಿ ಎನ್ನುವರು ಕೆಲಸ ಮುಗಿಸಿ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ದುತ್ತನೆ ಎದುರಾದ ಗಾಳಿಪಟದ ದಾರ ಸುರ್ಜಿತ್ ಅವರ ಬೈಕ್ಗೆ ಅಡ್ಡವಾಗಿದೆ. ಇದರಿಂದ ದಾರ ಸುರ್ಜಿತ್ ಅವರ ಹೆಲ್ಮೆಟ್ಗೆ ವೇಗವಾಗಿ ನುಗ್ಗಿ ಸುತ್ತಿಕೊಂಡಿದೆ. ಇದರಿಂದ ಬೈಕ್ ನಿಯಂತ್ರಣ ಕಳೆದುಕೊಂಡು ಸುರ್ಜಿತ್ ರಸ್ತೆ ಬದಿ ಹೋಗಿ ಬಿದ್ದಿದ್ದಾರೆ. ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಫೇಸ್ಬುಕ್ನಲ್ಲಿ ಅಳಲು ತೋಡಿಕೊಂಡ ಸುರ್ಜಿತ್ ಪತ್ನಿ
ಈ ಘಟನೆ ಬಗ್ಗೆ ಫೇಸ್ಬುಕ್ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುರ್ಜಿತ್ ಪತ್ನಿ ಸ್ವಾಗತಾ ಬ್ಯಾನರ್ಜಿ, ಹೆಲ್ಮೆಟ್ಗೆ ಸುತ್ತಿಕೊಂಡಿದ್ದ ಗಾಳಿಪಟದ ದಾರ ಕುತ್ತಿಗೆಗೆ ಸುತ್ತಿಕೊಂಡಿದ್ದರೆ ನನ್ನ ಪತಿಯ ಜೀವವೇ ಹೋಗುತ್ತಿತ್ತು. ಈ ಘಟನೆಗೆ ಯಾರು ಹೊಣೆ? ಎಂದು ಪೋಸ್ಟ್ ಹಾಕಿದ್ದಾರೆ. ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಗಾಳಿಪಟದ ದಾರ ಹರಡಿಕೊಂಡಿತ್ತು. ಪತಿ ಕೆಲಸ ಮುಗಿಸಿ ಬರುವಾಗ ಮಾಂಜಾ ಪತಿಯ ಹೆಲ್ಮೆಟ್ಗೆ ಸುತ್ತಿಕೊಂಡಿತ್ತು. ಕಣ್ಣಿನ ಸಮೀಪದಲ್ಲೇ ದಾರವಿತ್ತು. ಸ್ವಲ್ಪದರಲ್ಲೇ ದಾರ ಕಣ್ಣನ್ನೇ ಕೊರೆಯುವ ಸ್ಥಿತಿಯಲ್ಲಿತ್ತು. ಅಷ್ಟರಲ್ಲೇ ನಿಯಂತ್ರಣ ತಪ್ಪಿ ಬೈಕ್ ರಸ್ತೆಯಲ್ಲೇ ಉರುಳಿಬಿದ್ದಿತ್ತು ಎಂದು ಬರೆದುಕೊಂಡಿದ್ದಾರೆ.
ಸೇತುವೆ ಮೇಲಿಂದ ನದಿಗೆ ಬಿದ್ದ ಟ್ರ್ಯಾಕ್ಟರ್; ಏಳು ರೈತರ ಸಾವು
ಪೊಲೀಸರಿಗೆ ಒತ್ತಾಯ
ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪತಿಗಾದ ತೊಂದರೆ ಯಾರಿಗಾದರೂ ಆಗಿ ಜೀವ ಹೋದರೆ ಯಾರು ಹೊಣೆ? ದಯವಿಟ್ಟು ನಗರವಾಸಿಗಳಿಗೆ ಸುರಕ್ಷಿತ ನಗರ ನಿರ್ಮಿಸಿ. ಘಟನೆ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಕತ್ತನ್ನು ಸೀಳುವ ಸಂಭವವಿತ್ತು
ಗಾಳಿಪಟ ಹಾರಿಸಲು ಬಳಸುವ ದಾರಕ್ಕೆ ಮಾಂಜಾ ಎನ್ನಲಾಗುತ್ತದೆ. ಗಾಳಿಪಟ ಹಾರಿಸುವಾಗ ಈ ಮಾಂಜಾ ಕತ್ತರಿಸಿ ಬಿದ್ದು ಪಕ್ಷಿಗಳಿಗೆ ಕಂಟಕವಾಗುತ್ತದೆ. ಇದರ ಬಳಕೆಗೆ ನಿಷೇಧವಿದ್ದರೂ ಇದನ್ನು ಬಳಸಲಾಗುತ್ತಿದೆ. ಅವತ್ತು ಸುರ್ಜಿತ್ ಅವರು ಹೆಲ್ಮೆಟ್ ಹಾಕದಿದ್ದರೆ ಗಾಳಿಪಟ ಮಾಂಜಾ ಸುರ್ಜಿತ್ ಅವರ ಕತ್ತನ್ನು ಸೀಳುವ ಸಂಭವವಿತ್ತು ಎಂದು ವೈದ್ಯರೇ ಹೇಳಿದ್ದಾರೆ.
ಭಯಾನಕ ಮಾಂಜಾ!
ಅಲ್ಲದೇ ಈ ಮಾಂಜಾಗಳು ಬರೀ ಪಕ್ಷಿಗಳಿಗಲ್ಲದೇ ಮನುಷ್ಯರನ್ನು ಕೊಂದಿರುವ ಉದಾಹರಣೆ ಸಾಕಷ್ಟು ಇವೆ. ಚೀನಾ ಮಾಂಜಾಗಳು ಹೆಚ್ಚು ಮಾರಕವಾಗಿದ್ದು, ಎಗ್ಗಿಲ್ಲದೇ ಬಳಸಲಾಗುತ್ತಿದೆ. 2015 ರಲ್ಲಿ ದೆಹಲಿಯಲ್ಲಿ ಯುವಕನೊಬ್ಬ ಬೈಕ್ನಲ್ಲಿ ಹೋಗುವಾಗ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ ಮೃತಪಟ್ಟಿದ್ದ. 2019 ರಲ್ಲಿ ಚೆನ್ನೈನಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಮಗು ಮೃತಪಟ್ಟಿತ್ತು. ಮಾಂಜಾದಿಂದಾಗಿ ಲೆಕ್ಕವಿರದಷ್ಟು ಪಕ್ಷಿಗಳು ಮೃತಪಟ್ಟಿವೆ.