ಎಸಿಬಿ ದಾಳಿಯಲ್ಲಿ ಎಎಸ್ಐ ದಯಾನಂದಸ್ವಾಮಿ 6 ಕೋಟಿ ಮೌಲ್ಯದ ಮನೆ ಪತ್ತೆ!
ಬೆಂಗಳೂರು, ಜೂ. 15: ಉಪ ಪೊಲೀಸ್ ಆಯುಕ್ತರ ಹೆಸರಿನಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಸಂಬಂಧ ಕೊಡಿಗೇಹಳ್ಳಿ ಎಎಸ್ಐ ದಯಾನಂದ್ ಗೆ ಸೇರಿದ ಆರು ಕೋಟಿ ರೂಪಾಯಿ ಮೌಲ್ಯದ ಮನೆ ಎಸಿಬಿ ದಾಳಿಯಲ್ಲಿ ಬೆಳಕಿಗೆ ಬಂದಿದೆ. ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಸಂಬಂಧ ಬೆಂಗಳೂರು ನಗರ ಘಟಕದ ಎಸಿಬಿ ಅಧಿಕಾರಿಗಳು ದನಾಯಂದ್ ಸ್ವಾಮಿ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಉದ್ಯಮಿಯೊಬ್ಬರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹತ್ತು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ದಯಾನಂದ್ ಐದು ಲಕ್ಷ ರೂ. ಲಂಚವನ್ನು ಸ್ವೀಕರಿಸಿದ್ದರು. ಡಿಸಿಪಿ ಹೆಸರಿನಲ್ಲಿ ಲಂಚ ಕೇಳಿದ್ದ ದಯಾನಂದ್ ಸ್ವೀಕರಿಸುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದವು. ಈ ಕುರಿತು ಉದ್ಯಮಿ ದೂರು ನೀಡಿದ ಬೆನ್ನಲ್ಲೇ ಪ್ರಾಥಮಿಕ ತನಿಖೆ ನಡೆಸಿದ್ದ ಅಧಿಕಾರಿಗಳು ದಯಾನಂದ ಸ್ವಾಮಿಯನ್ನು ಅಮಾನತು ಮಾಡಲಾಗಿತ್ತು. ಪ್ರಕರಣದ ತನಿಖೆಯನ್ನು ಎಸಿಬಿ ಬೆಂಗಳೂರು ಘಟಕಕ್ಕೆ ವರ್ಗಾವಣೆ ಮಾಡಲಾಗಿತ್ತು.
ಪ್ರಾಥಮಿಕ ಮಾಹಿತಿ ಆಧರಿಸಿದ ಎಸಿಬಿ ಅಧಿಕಾರಿಗಳು ಯಲಹಂಕ ನ್ಯೂಟೌನ್ ನಲ್ಲಿರುವ ದಯಾನಂದ ಸ್ವಾಮಿ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಆರು ಕೋಟಿ ರೂಪಾಯಿ ಮೌಲ್ಯದಲ್ಲಿ ಕಟ್ಟಿದ್ದ ಮನೆ ನೋಡಿ ಎಸಿಬಿ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದು, ಇನ್ನು ಎಎಸ್ಐ ಸಂಪಾದಿಸಿರುವ ಇತರೆ ಆಸ್ತಿ ಪತ್ರ, ವಹಿವಾಟು ಜಾಲಾಡುತ್ತಿದ್ದಾರೆ. ದಾಳಿಯನ್ನು ಖಚಿತ ಪಡಿಸಿರುವ ಬೆಂಗಳೂರು ಎಸಿಬಿ ಘಟಕದ ಅಧಿಕಾರಿಗಳು ಅಕ್ರಮ ಆಸ್ತಿ ಕುರಿತು ಇನ್ನೂ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
Recommended Video
"ಭ್ರಷ್ಟಾಚಾರ ಪ್ರಕರಣ ದಾಖಲಾದ ಬೆನ್ನಲ್ಲಿ ಪ್ರಾಥಮಿಕ ತನಿಖೆ ನಡೆಸಿದಾಗ ಅಕ್ರಮ ಆಸ್ತಿ ಗಳಿಕೆ ಮಾಡಿರುವುದು ಬೆಳಕಿಗೆ ಬಂತು. ಈ ಹಿನ್ನೆಲೆಯಲ್ಲಿ ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಮಾಡಿರುವ ಪ್ರಕರಣ ದಾಖಲಿಸಿ ಮನೆಯನ್ನು ಶೋಧ ನಡೆಸಲಾಗುತ್ತಿದೆ. ಅಕ್ರಮ ಆಸ್ತಿ ಗಳಿಕೆ ಸಂಬಂಧ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ" ಎಸಿಬಿ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.