ಬಿಬಿಎಂಪಿ ನಗರ ಯೋಜನೆ ಅಧಿಕಾರಿ ದೇವೇಂದ್ರಪ್ಪ ಮನೆ ಮೇಲೆ ಎಸಿಬಿ ದಾಳಿ
ಬೆಂಗಳೂರು, ಮಾರ್ಚ್ 02: ಇಪ್ಪತ್ತು ಲಕ್ಷ ರೂ. ಲಂಚ ಸ್ವೀಕರಿಸಿ ಜೈಲು ಸೇರಿರುವ ಬಿಬಿಎಂಪಿ ಬೊಮ್ಮನಹಳ್ಳಿ ನಗರ ಯೋಜನೆ ಸಹಾಯ ನಿರ್ದೇಶಕ ದೇವೇಂದ್ರಪ್ಪ ಮತ್ತು ಆತನ ಬಂಟನ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ.
ಡಿವೈಎಸ್ಪಿ ವಜೀರ್ ಆಲಿಖಾನ್ ನೇತೃತ್ವದ ಅಧಿಕಾರಿಗಳ ತಂಡ ದೇವೇಂದ್ರಪ್ಪನ ಅಮೃತನಗರ ನಿವಾಸದ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಶೋಧ ನಡೆಸುತ್ತಿದೆ. ಇನ್ನು ಡಿವೈಎಸ್ಪಿ ಸುಬ್ರಮಣ್ಯ ನೇತೃತ್ವದ ತಂಡ ದೇವೇಂದ್ರಪ್ಪನ ಆಪ್ತ ಶ್ರೀನಿವಾಸ ಮೂರ್ತಿ ವಾಸವಿರುವ ಹಲಸೂರು ಗುಪ್ತ ಲೇಔಟ್ ನ ಮನೆ ಮೇಲೆ ದಾಳಿ ನಡೆಸಿದ್ದಾರೆ. ಗಾರ್ಡನರ್ ಆಗಿ ಕೆಲಸಕ್ಕೆ ಸೇರಿದ್ದ ಶ್ರೀನಿವಾಸಮೂರ್ತಿ ಪ್ರಥಮ ದರ್ಜೆ ಸಹಾಯಕನಾಗಿದ್ದು, ಹಲಸೂರಿನ ಬಳಿ ಮೂರು ಕೊಠಡಿ ಇರುವ ಪ್ಲಾಟ್ ಸಿಕ್ಕಿದೆ. ಕೆಲವು ದಾಖಲೆ ಬಿಟ್ಟರೆ, ಚಿನ್ನಾಭರಣ ಸಿಕ್ಕಿಲ್ಲ ಎಂದು ಎಸಿಬಿ ಮೂಲಗಳಿಂದ ತಿಳಿದು ಬಂದಿದೆ. ಮೆಯೋ ಹಾಲ್ ಬಳಿ ಇರುವ ಬಿಬಿಎಂಪಿ ನಗರ ಯೋಜನೆ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಶ್ರೀನಿವಾಸ ಮೂರ್ತಿ ಕೆಲಸ ನಿರ್ವಹಿಸುತ್ತಿದ್ದರು.
ಕಳೆದ ಫೆ. 5 ರಂದು ಹುಳಿಮಾವು ಸಮೀಪದ ಸಿಗ್ಮೀಸ್ ಬೆವರೀಜಸ್ ಘಟಕ ತೆಗೆಯಲು ಬೊಮ್ಮನಹಳ್ಳಿ ನಗರ ಯೋಜನೆ ವಿಭಾಗಕ್ಕೆ ಅರ್ಜಿ ಸಲ್ಲಿಸಿ ನಿರಪೇಕ್ಷಣಾ ಪ್ರಮಾಣ ಪತ್ರ ಕೇಳಿದ್ದರು. ಒಸಿ ನೀಡಲಿಕ್ಕೆ 40 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ದೇವೇಂದ್ರಪ್ಪ, 20 ಲಕ್ಷ ರೂ. ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದ. ಖಾಸಗಿ ಹೋಟೆಲ್ ನಲ್ಲಿ ಲಂಚ ಸ್ವೀಕರಿಸುವಾಗ ಎಸಿಬಿ ಪೊಲೀಸರು ಬಂಧಿಸಿದ್ದರು.
Recommended Video
ಬಳಿಕ ಮನೆ ಮೇಲೆ ಶೋಧ ನಡೆಸಿದಾಗ ನಗದು ಏಳು ಲಕ್ಷ ರೂ. ಅಕ್ರಮ ಹಣ ಪತ್ತೆಯಾಗಿತ್ತು. ಮನೆಯಲ್ಲಿ ಬಾರ್ ನ್ನು ಮೀರಿಸುವಷ್ಟು ಮದ್ಯದ ಬಾಟಲು ಸಾಮ್ರಾಜ್ಯ ಹೊರಗೆ ಬಂದಿತ್ತು. ದೇವೇಂದ್ರಪ್ಪ ವಿರುದ್ಧ ಅಬಕಾರಿ ಪೊಲೀಸರು ಕೇಸು ದಾಖಲಿಸಿದ್ದರು. ಇದೀಗ ಅಕ್ರಮ ಆಸ್ತಿ ಗಳಿಕೆ ಸಂಬಂಧ ಮಾಹಿತಿ ಸಂಗ್ರಹಿಸಿರುವ ಎಸಿಬಿ ಪೊಲೀಸರು, ದೇವೇಂದ್ರಪ್ಪ ಮತ್ತು ಆತನ ಬಲಗೈ ಬಂಟ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇದೀಗ ಅಕ್ರಮ ಆಸ್ತಿ ಗಳಿಕೆ ಕುರಿತ ಮತ್ತೊಂದು ಪ್ರಕರಣ ದಾಖಲಾಗಲಿದೆ.