ಸರ್ವೆ ಮಾಡಲು 70 ಲಕ್ಷ ರೂ.ಲಂಚ ಸ್ವೀಕಾರ : ಎಡಿಎಲ್ ಅರ್ ಸೇರಿ ನಾಲ್ವರು ಅಧಿಕಾರಿಗಳ ಮೇಲೆ ಎಸಿಬಿ ದಾಳಿ
ಬೆಂಗಳೂರು, ಆ. 26: ನ್ಯಾಯಾಲಯದ ಆದೇಶದಂತೆ ಜಮೀನನ್ನು ಸರ್ವೆ ಮಾಡಿ ಗಡಿ ಗುರುತು ಮಾಡಲು 70 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಭೂ ದಾಖಲೆಗಳ ಇಲಾಖೆಯ ಹೆಚ್ಚುವರಿ ನಿರ್ದೇಶಕ ಸೇರಿ ನಾಲ್ವರು ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ. ಬಂಧಿತ ನಾಲ್ವರು ಆರೋಪಿಗಳ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ 20 ಲಕ್ಷ ರೂ. ನಗದು ಹಾಗೂ 70 ಲಕ್ಷ ರೂ. ಮೌಲ್ಯದ ಚೆಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಸರ್ವೆ ಹಾಗೂ ಭೂ ದಾಖಲೆಗಳ ಇಲಾಖೆಯ ಹೆಚ್ಚುವರಿ ನಿರ್ದೇಶಕ (ಎಡಿಎಲ್ ಆರ್ ) ಆನಂದ್ ಕುಮಾರ್, ಹೊರ ಗುತ್ತಿಗೆ ನೌಕರ ರಮೇಶ್, ಉಪ ನಿರ್ದೇಶಕಿ ಕುಸುಮಲತಾ, ಸರ್ವೆಯರ್ ಶ್ರೀನಿವಾಸ್ ಆಚಾರ್ ಎಸಿಬಿ ದಾಳಿಗೆ ಒಳಗಾದವರು. 25 ಲಕ್ಷ ರೂ. ಲಂಚ ಸ್ವೀಕರಿಸಿದ ದೂರಿನ ಸಂಬಂಧ ಎಡಿಎಲ್ ಆರ್ ಆನಂದ ಕುಮಾರ್ ಮತ್ತು ಹೊರ ಗುತ್ತಿಗೆ ನೌಕರ ರಮೇಶ್ ಬಂಧನಕ್ಕೆ ಒಳಗಾಗಿದ್ದಾರೆ. ಇವರ ವಿರುದ್ಧ ಲಂಚ ಸ್ವೀಕಾರ ಅರೋಪದಡಿ ಪ್ರಕರಣ ದಾಖಲಿಸಲಾಗಿದೆ. ಆನಂದ್ ಕುಮಾರ್ ಮತ್ತು ಕುಸುಮಲತಾ ಹಾಗೂ ಶ್ರೀನಿವಾಸ ಅವರ ಮನೆ ಶೋಧ ನಡೆಸಿದ್ದು ತನಿಖೆ ಮುಂದುವರೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನಾಗದಾಸನಪುರ ಗ್ರಾಮದ ನಿವಾಸಿಯೊಬ್ಬರಿಗೆ ಸೇರಿದ ಜಮೀನು ವಿವಾದಕ್ಕೆ ಒಳಗಾಗಿತ್ತು. ಬೆಂಗಳೂರು ಉತ್ತರ ತಾಲೂಕಿನ ಕುದುರೆಗೆರೆ ಗ್ರಾಮದಲ್ಲಿದ್ದ ಜಮೀನನ್ನು ಸರ್ವೆ ಮಾಡಿ ಗಡಿ ಗುರುತು ಮಾಡಿಕೊಡುವಂತೆ ನಾಗದಾಸನಪುರ ನಿವಾಸಿ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದ್ದ ಹೈಕೋರ್ಟ್ ಅರ್ಜಿದಾರರ ಜಮೀನು ಸರ್ವೆ ಮಾಡಿ ಗಡಿ ಗುರುತು ಮಾಡಲು ಭೂ ದಾಖಲೆಗಳ ಹೆಚ್ಚುವರಿ ನಿರ್ದೇಕರಿಗೆ ನಿರ್ದೇಶನ ನೀಡಿತ್ತು.
ಈ ಕುರಿತು ನ್ಯಾಯಾಲಯದ ಆದೇಶದೊಂದಿಗೆ ಎಡಿಎಲ್ಆರ್ ಆನಂದ್ ಕುಮಾರ್ ಹಾಗೂ ಡಿಡಿಎಲ್ಆರ್ ಕುಸುಮಲತಾ ಅವರಿಗೆ ಮನವಿ ನೀಡಲಾಗಿತ್ತು. ನ್ಯಾಯಾಲಯದ ಸೂಚಿಸಿದ ಜಮೀನನ್ನು ಸರ್ವೆ ಮಾಡಿ ಗಡಿ ಗುರುತು ಮಾಡಲು 70 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನಲ್ಲಿ 25 ಲಕ್ಷ ರೂ. ಹಣವನ್ನು ಕೂಡ ಅರ್ಜಿದಾರರು ಆನಂದ್ ಕುಮಾರ್ ಅವರಿಗೆ ನೀಡಿದ್ದರು. ಹೆಚ್ಚುವರಿ ನಲವತ್ತು ಲಕ್ಷ ರೂ. ಹಣ ನೀಡುವಂತೆ ಪೀಡುತ್ತಿದ್ದರು. ಈ ಕುರಿತು ಭೂ ಮಾಲೀಕ ಬೆಂಗಳೂರು ನಗರ ಘಟಕದ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.
ಲಂಚ ಸ್ವೀಕರಿಸಿದ್ದ ಆನಂದ್ ಕುಮಾರ್ ಬಗ್ಗೆ ಸಾಕ್ಷಾಧಾರಗಳ ಸಮೇತ ನೀಡಿದ್ದ ದೂರನ್ನು ಆಧರಿಸಿ ಮಂಗಳವಾರ ರಾತ್ರಿ ಬೆಂಗಳೂರು ನಗರ ಘಟಕದ ಎಸಿಬಿ ಅಧಿಕಾರಿಗಳು ನಾಲ್ವರು ಲಂಚಬಾಕರ ನಿವಾಸಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ದಾಳಿ ವೇಳೆ ಆನಂದ್ ಕುಮಾರ್ ಅವರ ಮನೆಯಲ್ಲಿ 25 ಲಕ್ಷ ರೂ. ನಗದು ಹಣದ ಕಂತೆಗಳು ಸಿಕ್ಕಿದ್ದು ವಿವರ ನೀಡಲು ತಡಪಡಿಸಿದ್ದಾರೆ. ಇದೇ ವೇಳೆ ಇತರರು ನೀಡಿರುವ ಸುಮಾರು 70 ಲಕ್ಷ ರೂ. ಮೌಲ್ಯದ ಚೆಕ್ ಗಳೂ ಸಿಕ್ಕಿದ್ದು, ಹಲವು ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದೇ ವೇಳ ಡಿಡಿಎಲ್ ಆರ್ ಕುಸುಮಲತಾ, ಸರ್ವೆಯರ್ ಶ್ರೀನಿವಾಸ್ ಅವರ ಮನೆ ಮೇಲೂ ದಾಳಿ ನಡೆದಿದ್ದು ಹಲವು ಮಹತ್ವದ ದಾಖಲೆಗಳು ಸಿಕ್ಕಿವೆ.
Recommended Video
ಆನಂದ್ ಕುಮಾರ್ಗೆ ಸಂಕಷ್ಟ: ಮನೆಯಲ್ಲಿ 25 ಲಕ್ಷ ರ. ನಗದು ಹಣ ಹಾಗೂ 75 ಲಕ್ಷ ರೂ. ಮೌಲ್ಯದ ಮೂರು ಚೆಕ್ ಗಳು ಸಿಕ್ಕಿದ ಹಿನ್ನೆಲೆಯಲ್ಲಿ ಎಡಿಎಲ್ ಆರ್ ಆನಂದ್ ಕುಮಾರ್ ಮತ್ತು ಆತನ ಖಾಸಗಿ ಆಪ್ತ ಸಹಾಯಕ ರಮೇಶ್ ನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ. 75 ಲಕ್ಷ ರೂ. ನೀಡಿರುವ ವ್ಯಕ್ತಿಗಳಿಗೆ ನೋಟಿಸ್ ನೀಡಿ ಯಾವ ಕಾರಣಕ್ಕೆ ಹಣ ನೀಡಲಾಗಿದೆ ಎಂಬುದರ ವಿವರ ನೀಡುವಂತೆ ನೋಟಿಸ್ ನೀಡಲು ಸಿದ್ಧತೆ ಎಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇನ್ನು ಆನಂದ್ ಕುಮಾರ್ ಬ್ಯಾಂಕ್ ಖಾತೆ, ಆಸ್ತಿ ವಿವರಗಳನ್ನು ಸಹ ಎಸಿಬಿ ಪೊಲೀಸರು ಕಲೆ ಹಾಕಿದ್ದು, ಲಂಚ ಪ್ರಕರಣದ ಜತೆಗೆ ಅಕ್ರಮ ಅಸ್ತಿ ಗಳಿಕೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.