ಎಸಿಬಿ ದಾಳಿ: ಜಮೀರ್ ಅಹ್ಮದ್ ಪ್ಲ್ಯಾಟ್ನಲ್ಲಿ 24 ಜೀವಂತ ಮದ್ದು ಗುಂಡು ಪತ್ತೆ
ಬೆಂಗಳೂರು ಜುಲೈ 5: ಇಂದು (ಜುಲೈ 5) ಬೆಳ್ಳಂಬೆಳಗ್ಗೆ ಕರ್ನಾಟಕದ ಭ್ರಷ್ಟಾಚಾರ ನಿಗ್ರಹದಳದ (ಎಸಿಬಿ) ಅಧಿಕಾರಿಗಳು ನ್ಯಾಷನಲ್ ಟ್ರಾವೆಲ್ಸ್ ಮಾಲೀಕ ಆಗಿರುವ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಜಮೀರ್ ಪ್ಲ್ಯಾಟ್ನಲ್ಲಿ 24 ಜೀವಂತ ಮದ್ದು ಗುಂಡುಗಳು ಪತ್ತೆಯಾಗಿವೆ. ಜಮೀರ್ ಪಿಸ್ತೂಲ್ ಪರವಾನಗಿ ಹೊಂದಿದ್ದು ಇದರೊಂದಿಗೆ ಒಂದು Empty bullet case ಪತ್ತೆಯಾಗಿದ್ದು, ಗುಂಡು ಹಾರಿಸಿದರೆ ಮಾತ್ರ ಈ Empty bullet case ಉಳಿಯುತ್ತದೆ. ಹೀಗಾಗಿ ಇದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಬೆಂಗಳೂರಿನ 5 ಪ್ರದೇಶಗಳಲ್ಲಿ 40ಕ್ಕೂ ಅಧಿಕ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದೆ. ದಾಖಲೆಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಸಂಜೆಯ ತನಕ ಪರಿಶೀಲನೆ ಕಾರ್ಯ ನಡೆಯಲಿದೆ ಎಂದು ಅಂದಾಜಿಸಲಾಗಿದೆ. 2021ರ ಆಗಸ್ಟ್ ತಿಂಗಳಿನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ದಾಳಿ ಮಾಡಿದ್ದರು. ಇದರ ವರದಿ ಆಧಾರದ ಮೇಲೆ ಎಸಿಬಿ ಅಕ್ರಮ ಆಸ್ತಿಗಳಿಕೆ ಪ್ರಕರಣ ದಾಖಲು ಮಾಡಿಕೊಂಡಿತ್ತು. ಈ ಪ್ರಕರಣದ ಆಧಾರದ ಮೇಲೆಯೇ ದಾಳಿ ಮಾಡಲಾಗಿದೆ.
ಜಾರಿ ನಿರ್ದೇಶನಾಲಯದ ನಿರ್ದೇಶನದಂತೆ ಅಕ್ರಮ ಆಸ್ತಿಗಳಿಕೆ ಪ್ರಕರಣ ದಾಖಲಿಸಿಕೊಂಡು ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ಶಾಸಕ ಜಮೀರ್ ಮನೆ, ಕಚೇರಿ ಸೇರಿ 5 ಕಡೆಗಳಲ್ಲಿ ದಾಳಿ ನಡೆಸಿ ಶೋಧಕಾರ್ಯ ಮುಂದುವರೆಸಿದ್ದಾರೆ. 5 ವಾಹನಗಳಲ್ಲಿ ಒಬ್ಬರು ಡಿವೈಎಸ್ಪಿ, ಇಬ್ಬರು ಇನ್ಸ್ಪೆಕ್ಟರ್ ನೇತೃತ್ವದಲ್ಲಿ 10ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಪಿಎಸ್ಐ ಹಗರಣದ ಗಮನ ಬೇರೆಡೆ ಸೆಳೆಯಲು ಜಮೀರ್ ಮನೆ ಮೇಲೆ ಎಸಿಬಿ ದಾಳಿ
ಎಸಿಬಿ ಅಧಿಕಾರಿಗಳು ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಮನೆ, ಸಿಲ್ವರ್ ಓಕ್ ಅಪಾರ್ಟ್ಮೆಂಟ್, ಸದಾಶಿವನಗರದ ಗೆಸ್ಟ್ ಹೌಸ್, ಬನಶಂಕರಿಯಲ್ಲಿರುವ ಜಿಕೆ ಅಸೋಸಿಯೇಟ್ಸ್, ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ದಾಳಿ ನಡೆಸಿ, ದಾಖಲೆ ಪರಿಶೀಲಿಸುತ್ತಿದ್ದಾರೆ.
ಜಮೀರ್ ಅಹ್ಮದ್ ಖಾನ್ ಐಷಾರಾಮಿ ಬಂಗಲೆ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ನಡೆದಿತ್ತು. ಬಳಿಕ ಅವರು ನೀಡಿದ ವರದಿ ಆಧರಿಸಿ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲು ಮಾಡಿಕೊಂಡಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತರಾಗಿರುವ ಜಮೀರ್ ಅಹ್ಮದ್ ಖಾನ್ ಮೇಲೆ ಎಸಿಬಿ ದಾಳಿ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗುವ ಸಾಧ್ಯತೆ ಇದೆ.