ಐದು ಲಕ್ಷ ರೂ. ಲಂಚ: ಬೆಂಗಳೂರು ಜಿಲ್ಲಾಧಿಕಾರಿ ಜೆ. ಮಂಜುನಾಥ್ ಗೆ ಸಂಕಷ್ಟ
ಬೆಂಗಳೂರು, ಜೂ. 30: ಜಮೀನು ವ್ಯಾಜ್ಯ ಇತ್ಯರ್ಥ ಪಡಿಸಲು ವ್ಯಕ್ತಿಯಿಂದ 5 ಲಕ್ಷ ರೂ. ಲಂಚ ಪಡೆದ ಪ್ರಕರಣ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಮಂಜುನಾಥ್ಗೆ ಉರುಳಾಗಿ ಪರಿಣಮಿಸಿದೆ. ಆರೋಪ ಸಾಬೀತಾದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಬಂಧನದ ಭೀತಿ ಎದುರಾಗಲಿದೆ.
ಐದು ಲಕ್ಷ ರೂ. ಲಂಚ ಸ್ವೀಕಾರ ಪ್ರಕರಣದಲ್ಲಿ ಜೆ. ಮಂಜುನಾಥ್ ಅವರನ್ನು ಮೂರನೇ ಆರೋಪಿಯನ್ನಾಗಿ ಮಾಡುವಂತೆ ಕೋರಿ ಬೆಂಗಳೂರು ಎಸಿಬಿ ಪೊಲೀಸರು ಭ್ರಷ್ಟಾಚಾರ ಪ್ರಕರಣ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ವರದಿಗೆ ಸಮ್ಮತಿಸಿರುವ ವಿಶೇಷ ನ್ಯಾಯಾಲಯ ಜಿಲ್ಲಾಧಿಕಾರಿ ಮಂಜುನಾಥ್ ವಿಚಾರಣೆಗೆ ಹಸಿರು ನಿಶಾನೆ ತೋರಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರನ್ನು ಮಂಗಳವಾರ ಎಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಎಸಿಬಿ ಮೂಲಗಳಿಂದ ತಿಳಿದು ಬಂದಿದೆ.
ಎಸಿಬಿ ದಾಳಿ: ಕಂತೆ ಕಂತೆ ಹಣ ಗಂಟು! ಚಿನ್ನಾಭರಣದ ಸಂಪತ್ತು!
ಇದಕ್ಕಿಂತಲೂ ಮೊದಲೇ ಲಂಚ ಪ್ರಕರಣದಲ್ಲಿ ತನ್ನ ವಿಚಾರಣೆಗೆ ತಡೆ ಕೋರಿ ಜೆ. ಮಂಜುನಾಥ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಂಜುನಾಥ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಭಾಗವಾಗಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದು ಮಾಡಿ ಪ್ರತ್ಯೇಕ ಭ್ರಷ್ಟಾಚಾರ ನಿಗ್ರಹದಳವನ್ನು ರಚಿಸಿ ಆರು ವರ್ಷದ ಬಳಿಕ ಲಂಚ ಪ್ರಕರಣದಲ್ಲಿ ಒಬ್ಬ ಐಎಎಸ್ ಅಧಿಕಾರಿ ವಿಚಾರಣೆ ಎದುರಿಸುವಂತಾಗಿದೆ.
ಲಂಚ ಪ್ರಕರಣದಲ್ಲಿ ಜಸ್ಟ್ ಮಿಸ್ ಆಗಿದ್ದ ಡಿಸಿ:
ಆನೇಕಲ್ ತಾಲೂಕಿನ ಕೂಡ್ಲು ಗ್ರಾಮದಲ್ಲಿ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಇತ್ತು. ಈ ಪ್ರಕರಣದ ಪೂರ್ಣ ವಿಚಾರಣೆ ನಡೆಸಿದ್ದ ಜಿಲ್ಲಾಧಿಕಾರಿ ಜೆ. ಮಂಜುನಾಥ್ ತೀರ್ಪು ಪ್ರಕಟ ಮಾಡಿರಲಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ್ದ ಅರ್ಜಿದಾರ ಆಜಂಪಾಷಾ ಅವರಿಗೆ ಅಧೀನ ಸಿಬ್ಬಂದಿ ಮಹೇಶ್ ಅವರನ್ನು ಕಾಣಲು ಸೂಚಿಸಲಾಗಿತ್ತು. ಮಹೇಶ್ ಅವರನ್ನು ಭೇಟಿ ಮಾಡಿದಾಗ, "ನಿನ್ನ ಪರ ಅನುಕೂಲಕರ ತೀರ್ಪು ನೀಡಲು 5 ಲಕ್ಷ ರೂ. ಲಂಚ ನೀಡುವಂತೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವ್ಯವಸ್ಥಾಪಕ ಮಹೇಶ್ ಹಾಗೂ ನ್ಯಾಯಾಲಯ ವಿಭಾಗದ ಚೇತನ್ ಕುಮಾರ್ ಬೇಡಿಕೆ ಇಟ್ಟಿದ್ದರು.
ಜಿಲ್ಲಾಧಿಕಾರಿ ಭೇಟಿ, ಅವರ ಸೂಚನೆ, ಲಂಚಕ್ಕೆ ಬೇಡಿಕೆ ಇಟ್ಟ ಮಹೇಶ್ ಕುಮಾರ್ ಹಾಗೂ ಚೇತನ್ ಕುಮಾರ್ ಅವರ ಸಂಭಾಷಣೆಯನ್ನು ರೆಕಾರ್ಡ್ ಮಡಿದ್ದ ಆಜಂಪಾಷಾ, ಈ ಕುರಿತು ಎಸಿಬಿಗೆ ದೂರು ನೀಡಿದ್ದರು. ಮೇ. 21 ರಂದು ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಮಹೇಶ್ ಮತ್ತು ಚೇತನ್ ಕುಮಾರ್ ನನ್ನು ಲಂಚ ಸ್ವೀಕಾರ ವೇಳೆ ಬಂಧಿಸಿದ್ದರು. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರನ್ನು ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.
ದೂರಿನಲ್ಲಿ ಉಲ್ಲೇಖ:
ನನ್ನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ್ದೆ. ಅವರ ಸೂಚನೆ ಮೇರೆಗೆ ಮಹೇಶ್ ಮತ್ತು ಚೇತನ್ ಕುಮಾರ್ ಅವರನ್ನು ಸಂಪರ್ಕಿಸಿದೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅವರು ನನ್ನ ಬಳಿ ಐದು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರುದಾರ ಆಜಂಪಾಷಾ ಎಸಿಬಿಗೆ ನೀಡಿದ್ದ ದೂರಿನಲ್ಲಿ ಉಲ್ಲೇಖಿಸಿದ್ದರು. ಇದಕ್ಕೆ ಸಂಬಂಧಿಸಿದ ಮೊಬೈಲ್ ರೆಕಾರ್ಡಿಂಗ್ ಗಳನ್ನು ಎಸಿಬಿ ಪೊಲೀಸರಿಗೆ ಸಲ್ಲಿಸಿದ್ದರು.
ಪ್ರಕರಣದ ತನಿಖೆ ವೇಳೆ ದೂರುದಾರರಿಗೆ ಸಂಬಂಧಿಸಿದ ಯಾವುದೇ ಕಡತಗಳು ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿರುವ ಅರೋಪಿಗಳ ಬಳಿ ಇಲ್ಲ. ಈ ಕಡತ ಜಿಲ್ಲಾಧಿಕಾರಿಗಳ ಬಳಿಯಿದೆ. ಈ ಭೂ ವ್ಯಾಜ್ಯ ಸಂಬಂಧ ವಿಚಾರಣೆಯನ್ನು ಜಿಲ್ಲಾಧಿಕಾರಿಗಳು ಮಾರ್ಚ್ 30, 2022 ಕ್ಕೆ ಪೂರ್ಣಗೊಳಿಸಿದ್ದಾರೆ. ಅದಾದ ಬಳಿಕ ತೀರ್ಪೂ ಪ್ರಕಟಿಸಿಲ್ಲ. ತೀರ್ಪು ಪ್ರಕಟಿಸದೇ ವಿಳಂಬ ಮಾಡಲಿಕ್ಕೆ ತನಿಖೆ ವೇಳೆ ಸಕಾರಣವೂ ಸಿಕ್ಕಿಲ್ಲ. ಹೀಗಾಗಿ ಜೆ. ಮಂಜುನಾಥ್ ಅವರನ್ನು ಮೂರನೇ ಆರೋಪಿಯನ್ನಾಗಿ ಮಾಡಲು ಅನುಮತಿ ಕೊಡಿ ಎಂದು ಎಸಿಬಿ ಪೊಲೀಸರು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಮನವಿ ಮಾಡಿದ್ದರು. ನ್ಯಾಯಾಲಯದ ಅನುಮತಿ ಹಿನ್ನೆಲೆಯಲ್ಲಿ ಇದೀಗ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.
Recommended Video