ವಿಬ್ ಗಯಾರ್ ಶಾಲೆ ಮುಂದೆ ಸೋಮವಾರವೂ ಪ್ರತಿಭಟನೆ
ಬೆಂಗಳೂರು, ಜು. 21 : ಬೆಂಗಳೂರಿನ ಹೊರವಲಯದ ಮಾರತ್ ಹಳ್ಳಿಯ ವಿಬ್ ಗಯಾರ್ ಶಾಲೆಯ 1ನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಶಾಲೆಯ ಮುಂದೆ ಸೋಮವಾರ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಬ್ಯಾಡಿಕೇಡ್ ಗಳ ಮೇಲೆ ಹತ್ತಿ ಪ್ರತಿಭಟನಾಕಾರರು ಶಾಲೆಯ ಒಳಗೆ ನುಗ್ಗಲು ಯತ್ನಿಸುತ್ತಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ.
ನೂರಾರು ಕಾರ್ಯಕರ್ತರು ವಿಬ್ ಗಯಾರ್ ಶಾಲೆಯ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸುತ್ತಿದ್ದು, ಅತ್ಯಾಚಾರ ಮಾಡಿದ ಆರೋಪಿಯನ್ನು ಕೇವಲ ಬಂಧಿಸಿದರೆ ಸಾಲದು ಅವರನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು. ಶಾಲೆಯ ಆಡಳಿತ ಮಂಡಳಿ ಬೇಜವಾಬ್ದಾರಿಯಿಂದಾಗಿ ಇಂತಹ ಪ್ರಕರಣ ನಡೆದಿದೆ. ಆದ್ದರಿಂದ ಶಾಲೆಯ ಮುಖ್ಯಸ್ಥರನ್ನು ಬಂಧಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.
6ನೇ ತರಗತಿ ವಿದ್ಯಾರ್ಥಿನಿ ಮೇಲೆ ಶಾಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಲು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಉಮೇಶ ಆರಾಧ್ಯ ನೇತೃತ್ವದ ಸಮಿತಿ ಇಂದು ಶಾಲೆಗೆ ಆಗಮಿಸಿದೆ. ಶಾಲೆಯ ಆಡಳಿತ ಮಂಡಳಿ ಜೊತೆ ಅವರು ಸಭೆ ನಡೆಸುತ್ತಿದ್ದು, ಮಾಹಿತಿ ಸಂಗ್ರಹಣೆ ಮಾಡುತ್ತಿದ್ದಾರೆ. [ಅತ್ಯಾಚಾರ ಆರೋಪಿ ಮುಸ್ತಫಾ ಬಂಧನ]
ಏನು ಕ್ರಮ ತೆಗೆದುಕೊಂಡಿದ್ದೀರಿ? : ವಿಬ್ ಗಯಾರ್ ಶಾಲೆಯಲ್ಲಿ ಮಕ್ಕಳ ಸುರಕ್ಷತೆಗಾಗಿ ಏನು ಕ್ರಮ ತೆಗೆದುಕೊಂಡಿದ್ದೀರಿ? ಎಂದು ಮಾಹಿತಿ ನೀಡುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಆಡಳಿತ ಮಂಡಳಿಯನ್ನು ಪ್ರಶ್ನಿಸುತ್ತಿದ್ದಾರೆ. ಆಡಳಿತ ಮಂಡಳಿ ಸದಸ್ಯರು ಹೊರಗೆ ಬಂದು ಉತ್ತರ ನೀಡುವಂತೆ ಆಗ್ರಹಿಸುತ್ತಿದ್ದಾರೆ. [ವಿಬ್ ಗಯಾರ್ ಮುಂದೆ ಪ್ರತಿಭಟನೆ : ಚಿತ್ರಗಳು ]
ಪ್ರತಿಭಟನೆ ಹಿನ್ನಲೆಯಲ್ಲಿ ಶಾಲೆಯ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ನೂರಾರು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಶಾಲೆಯ ಮುಂಭಾಗದ ಗೇಟ್ ಬಳಿ ಬ್ಯಾರಿಕೇಡ್ ಹಾಕಿರುವ ಪೊಲೀಸರು ಪ್ರತಿಭಟನಾಕಾರರು ಶಾಲೆಯವೊಳಗೆ ಪ್ರವೇಶಿಸದಂತೆ ತಡೆಯುತ್ತಿದ್ದಾರೆ.