ಜಯನಗರ ಮೆಟ್ರೋ ನಿಲ್ದಾಣಕ್ಕೆ ಎಚ್.ಎಸ್ ದೊರೆಸ್ವಾಮಿ ಹೆಸರನ್ನಿಡಲು ಆಗ್ರಹ
ಬೆಂಗಳೂರು, ಮೇ 29: ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ. ಎಚ್.ಎಸ್ ದೊರೆಸ್ವಾಮಿಯವರ ಪ್ರತಿಮೆ ಸ್ಥಾಪನೆ ಹಾಗೂ ಜಯನಗರ ಮೆಟ್ರೋ ನಿಲ್ದಾಣಕ್ಕೆ ಅವರ ಹೆಸರನ್ನಿಡಲು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆಗ್ರಹಿಸಿದ್ದಾರೆ.
ರಾಜ್ಯ ಎಚ್.ಎಸ್ ದೊರೆಸ್ವಾಮಿಯವರ ನಿಧನದಿಂದ ಶೋಕತಪ್ತವಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ದೇಶದ ಸೇವೆ ಮಾಡಿದ ಶ್ರೀಯುತರು ತಮ್ಮ ಜೀವಮಾನವಿಡೀ ಆಳುವ ಸರಕಾರಗಳನ್ನು ಎಚ್ಚರಿಸುತ್ತಾ, ನೊಂದವರ, ಬಡವರ ನೋವಿನ ದನಿಯಾಗುತ್ತಾ ಜೀವಿಸಿದ ಮಹಾನ್ ಚೇತನ. ಸರಕಾರ ಇವರ ಪ್ರತಿಮೆಯನ್ನು ಫ್ರೀಡಂ ಪಾರ್ಕ್ನಲ್ಲಿ ಸ್ಥಾಪಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಒತ್ತಾಯಿಸಿದೆ.
ಎಚ್.ಎಸ್ ದೊರೆಸ್ವಾಮಿಯವರು ಸ್ವಾತಂತ್ರ್ಯ ನಂತರವೂ ತಮ್ಮ ಹೋರಾಟವನ್ನು ನಿಲ್ಲಿಸದೆ ತಮ್ಮ ಕೊನೆಯ ಉಸಿರಿನ ತನಕ ಹೋರಾಟವನ್ನೇ ಬದುಕಾಗಿ ಮಾಡಿಕೊಂಡವರು. ರಾಜ್ಯದ ಆಡಳಿತ ಹಳಿತಪ್ಪಿದಾಗ ಅಧಿಕಾರದಲ್ಲಿ ಇದ್ದ ಎಲ್ಲಾ ಪಕ್ಷಗಳನ್ನೂ ಪ್ರಶ್ನಿಸಿದವರು. ಇವರ ಶತಮಾನದ ಬದುಕು ನಮಗೆಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಪೃಥ್ವಿ ರೆಡ್ಡಿ ತಿಳಿಸಿದ್ದಾರೆ.
Recommended Video
ಇವರ ಜೀವನ ಮತ್ತು ಹೋರಾಟವನ್ನು ಜೀವಂತವಾಗಿಡಲು ಮತ್ತು ಮುಂದಿನ ಪೀಳಿಗೆಗೆ ಪ್ರೇರಣೆಯಾಗಿಸಲು ಸರಕಾರ ತಮ್ಮ ಹೋರಾಟದ ಬದುಕಿನ ಬಹುಕಾಲವನ್ನು ಕಳೆದ ಫ್ರೀಡಂ ಪಾರ್ಕ್ನಲ್ಲಿ ಅವರ ಪ್ರತಿಮೆ ಸ್ಥಾಪಿಸಬೇಕು. ಜಯನಗರ ಮೆಟ್ರೋ ನಿಲ್ದಾಣಕ್ಕೆ ಅವರ ಹೆಸರಿಡಬೇಕು. ಅಲ್ಲದೇ ರಾಜ್ಯದ ಸರ್ವೋನ್ನತ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು. ಈ ಮೂಲಕ ಶುಶಾಸನ, ಅಭಿವೃದ್ದಿಯ ಕನಸು ಹೊತ್ತು ಬದುಕಿದ, ಸ್ವಾತಂತ್ರ ಹೋರಾಟದ ಕೊಂಡಿಯಾಗಿದ್ದ ದೊರೆಸ್ವಾಮಿಯವರ ಹೆಸರನ್ನು ಅಜರಾಮರವಾಗಿಸಬೇಕು ಎಂದು ಪೃಥ್ವಿ ರೆಡ್ಡಿ ಹೇಳಿದ್ದಾರೆ.