ಪೈಪ್ ಲೈನ್ ನೀರು ಪೂರೈಸುವಂತೆ ಬಿಜೆಪಿಗೆ ಎಎಪಿ ಸವಾಲು
ಬೆಂಗಳೂರು, ಜನವರಿ 02: ಕೇಂದ್ರದ ಗೃಹಮಂತ್ರಿಗಳಾದ ಅಮಿತ್ ಷಾರವರು ಕಳೆದ ವಾರ ಮಾತನಾಡುತ್ತಾ, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ 70 ವರ್ಷಗಳಲ್ಲಿ ದೆಹಲಿಯಲ್ಲಿ ಕೇವಲ 50% ಮನೆಗಳಿಗೆ ಮಾತ್ರ ಕೊಳಾಯಿಗಳ ಮೂಲಕ ಕುಡಿಯುವ ನೀರಿನ ಪೂರೈಕೆಯಾಗುತ್ತಿತ್ತು. ಮೋದಿಯವರು ಅಧಿಕಾರಕ್ಕೆ ಬಂದ ನಂತರ ಅದನ್ನು 93% ಮನೆಗಳಿಗೆ ವಿಸ್ತರಿಸಿದ್ದಾರಂತೆ. ಮೋದಿಯವರ ಕೆಲಸದ ಕ್ರೆಡಿಟ್ ಅನ್ನು ಅರವಿಂದ್ ಕೇಜ್ರಿವಾಲ್ ಅವರು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅದಷ್ಟೇ ಅಲ್ಲದೆ, 2024ಕ್ಕೆ ದೇಶದಾದ್ಯಂತ ಎಲ್ಲಾ ಮನೆಗಳಿಗೂ ಸ್ವಚ್ಛ ಕುಡಿಯುವ ನೀರನ್ನು ಕೊಳಾಯಿಗಳ ಮೂಲಕ ತಲುಪಿಸಿಯೇ ತೀರುತ್ತೇವೆ. ಆದರೆ ದೆಹಲಿಯಲ್ಲಿ ಕೆಲಸ ಮಾಡಲು ಅರವಿಂದ್ ಕೇಜ್ರಿವಾಲ್ ಬಿಡುತ್ತಿಲ್ಲ, ದೆಹಲಿಯನ್ನು ಕೆಲಸ ಮಾಡಲು ಸಾಧ್ಯವಾಗಿದ್ದರೆ ದೆಹಲಿಯ ಚಹರೆಯೇ ಬದಲಾಗಿಬಿಡುತ್ತಿತ್ತು ಎಂದು ವೀರಾವೇಷದ ಭಾಷಣವನ್ನು ಅಮಿತ್ ಷಾ ಮಾಡಿದ್ದಾರೆ.
ಇದರಂತೆ, ಸಧ್ಯದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ BWSSBಯು ಕೇವಲ 40% ಜನರಿಗೆ ಮಾತ್ರ ಕುಡಿಯುವ ನೀರಿನ ಪೂರೈಕೆ ಮಾಡುತ್ತಿದೆ. ಅಲ್ಲದೆ ಬೆಂಗಳೂರಿಗೆ ಕಾವೇರಿ ನದಿಯಿಂದ 13.5 ಮಿಲಿಯನ್ ಲೀಟರ್ ನೀರು ಹರಿದು ಬರುತ್ತಿದ್ದು, ಇದರಲ್ಲಿ ಶೇ.45 ರಷ್ಟು ನೀರು ಪೋಲಾಗುತ್ತಿದೆ. ಅದು ಎಲ್ಲಿಗೆ ಹೋಗುತ್ತಿದೆ ಎಂಬುದೇ ಇವರಿಗೆ ತಿಳಿದಿಲ್ಲ, ಅದನ್ನು ನಿಯಂತ್ರಿಸುವ ಕೆಲಸಕ್ಕೂ ಮುಂದಾಗಿಲ್ಲ.
ಅಮಿತ್ ಷಾರವರ ಅದ್ಭುತ ಭಾಷಣವನ್ನು ಕೇಳಿದ ಮೇಲೆ ಬೆಂಗಳೂರಿಗರಾದ ನಮಗೆ ಯಾವುದೇ ಅನುಮಾನವಿಲ್ಲದ ಭರವಸೆ ಮೂಡಿದೆ. ಅದೇನೆಂದರೆ ಅಭಿವೃದ್ಧಿಯ ಪಥದಲ್ಲಿ ವಿರೋಚಿತವಾಗಿ ಓಡುತ್ತಿದ್ದೇವೆಂದು ಹೇಳಿಕೊಳ್ಳುತ್ತಿರುವ ಬಿಜೆಪಿ ನೇತೃತ್ವದಲ್ಲಿಯೇ ಬಿಬಿಎಂಪಿ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಆಡಳಿತ ನಡೆಸುತ್ತಿದ್ದು, ಯಾವುದೇ ಅಡ್ಡಿ ಆತಂಕವಿಲ್ಲದೆ ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರಿನ ಉಳಿದ 60% ಜನರಿಗೂ ನಲ್ಲಿ(ಕೊಳಾಯಿ)ಗಳ ಮೂಲಕ ಕುಡಿಯುವ ನೀರನ್ನು ತಲುಪಿಸುತ್ತಾರೆ ಎಂಬುದು. ನಾವೆಲ್ಲರೂ ಇನ್ನು ಒಂದೆರಡು ತಿಂಗಳಲ್ಲಿ ಇಡೀ ಬೆಂಗಳೂರು ಪೂರ್ತಿ ಕುಡಿಯುವ ನೀರನ್ನು ಜನರು ನಲ್ಲಿಗಳಲ್ಲಿ ಪಡೆಯುತ್ತಿದ್ದಾರೆಂಬ ಗುಡ್ ನ್ಯೂಸ್ ಕೇಳುತ್ತೇವೆ ಎಂದು ಮೋಹನ್ ದಾಸರಿಯವರು ವ್ಯಂಗ್ಯಮಾಡಿದರು.
ಇಂದು ಪ್ರಧಾನಿ ಮೋದಿಯವರು ಬೆಂಗಳೂರಿಗೆ ಬರುತ್ತಿದ್ದಾರೆ. ಅವರು ಸಂಚರಿಸಲಿರುವ ರಸ್ತೆಗಳು ಚೆನ್ನಾಗಿದ್ದರೂ ಮತ್ತೆ ಡಾಂಬರೀಕರಿಸಿ ಶೃಂಗಾರ ಮಾಡಿ ಅಲಂಕರಿಸಿದ್ದಾರೆ. ಬೆಂಗಳೂರಿಗೆ ಬರುವ ಮೋದಿಯವರು ಅಮಿಶ್ ಷಾರವರು ರಾಜಾರೋಷದ ಭಾಷಣದಂತೆ 2020 ಮುಗಿಯುವುದರೊಳಗಾಗಿ ಬೆಂಗಳೂರಿನ ಜನರಿಗೆ ಸಂಪೂರ್ಣ ಕೊಳಾಯಿ ನೀರಿನ ವ್ಯವಸ್ಥೆ ಮಾಡುತ್ತೇವೆಂದು ಸಾರ್ವಜನಿಕವಾಗಿ ಘೋಷಿಸುತ್ತಾರೆಂದು ನಂಬಿದ್ದೇವೆ.
ಒಂದು ವೇಳೆ ಈ ವರ್ಷ(2020) ಮುಗಿಯುವುದರೊಳಗಾಗಿ ಬೆಂಗಳೂರಿನಲ್ಲಿ ಈ ಕೆಲಸ ಮಾಡಲು ಕೇಂದ್ರ ಸರ್ಕಾರ ವಿಫಲವಾದರೆ BBMP, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಮೂರರಲ್ಲೂ ಅಧಿಕಾರದಲ್ಲಿರುವ ಬಿಜೆಪಿಯು ತಮ್ಮ ಅಧಿಕಾರ ತೊರೆದು, ಈಗಾಗಲೇ ದೆಹಲಿಯಲ್ಲಿ ಕ್ರಾಂತಿಕಾರಕ ಬದಲಾವಣೆಗಳ ಮೂಲಕ ಅಭಿವೃದ್ಧಿ ಮಾಡಿರುವ ಆಮ್ ಆದ್ಮಿ ಪಕ್ಷಕ್ಕೆ ಅಧಿಕಾರ ಬಿಟ್ಟುಕೊಡಬೇಕು ಎಂದು ಆಗ್ರಹಿಸಿದರು.
ಆಮ್ ಆದ್ಮಿ ಪಕ್ಷದ ಸರ್ಕಾರವು ಈಗಾಗಲೇ ದೆಹಲಿಯಲ್ಲಿ 205 ಕೆರೆಗಳನ್ನು ಪುನರುಜ್ಜೀವನಗೊಳಿಸಿದೆ. ಯಮುನಾ ದಂಡೆಯಲ್ಲಿ ಪ್ರವಾಹದಿಂದ ಉಕ್ಕುವ ನೀರನ್ನು ಸಂಗ್ರಹಿಸಲು ಜಲಾಶಯವನ್ನು ನಿರ್ಮಿಸಿ, ನೀರು ಇಂಗುವಂತೆ ಮಾಡಿ ಅಂತರ್ಜಲದ ಮಟ್ಟ ಹೆಚ್ಚುವಂತೆ ಮಾಡಿದೆ. ಅಲ್ಲದೆ ಅಮಿತ್ ಷಾ ಹೇಳುತ್ತಿರುವ 93% ಮನೆಗಳಿಗೆ ಕೊಳಾಯಿಗಳ ಮೂಲಕ ಕುಡಿಯುವ ನೀರನ್ನು ಪೂರೈಸಿರುವುದೂ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವೇ...
ಹಾಗಾಗಿ 2020ರ ಕೊನೆಯ ವೇಳೆಗೆ ಇಡೀ ಬೆಂಗಳೂರಿನಾದ್ಯಂತ ಕುಡಿಯುವ ನೀರಿನ ಕೊಳಾಯಿಗಳ ಅಳವಡಿಯಾಗದಿದ್ದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಆಡಳಿತಾಧಿಕಾರ ಹಸ್ತಾಂತರಿಸಬೇಕು ಎಂದು ಅಮಿತ್ ಷಾ ಅವರಿಗೆ ಸವಾಲು ಹಾಕುತ್ತಿದ್ದೇವೆ.