ಬಿಲ್ಡರ್ಗಳ ಲಾಭಿಗೆ ಸರ್ಕಾರ ಮಣಿದಿದೆ: ಎಎಪಿ ಅಸಮಾಧಾನ
ಬೆಂಗಳೂರು, ಮೇ 8: ''ರಾಜ್ಯದಲ್ಲಿ ಕಾರ್ಮಿಕ ನೀತಿ ಸತ್ತು ಹೋಗಿದೆ. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ನೆಲೆಯೇ ಇಲ್ಲದ ಕಾರ್ಮಿಕರನ್ನು ಅನಾಥರನ್ನಾಗಿಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಮಾನವೀಯ ಹೃದಯವಿದೆಯೇ'' ಎಂದು ಎಎಪಿ ಪ್ರಶ್ನೆ ಮಾಡಿದೆ.
Recommended Video
ಕಾರ್ಮಿಕರ ಮೂಲಭೂತ ಹಕ್ಕಿಗೆ ಕುತ್ತು ತಂದು ಕಾರ್ಮಿಕರು ತಮ್ಮ ತಮ್ಮ ಸ್ವಂತ ಊರಿಗೆ ತೆರಳಲು ಇದ್ದಂತಹ ರೈಲು ಸೌಲಭ್ಯವನ್ನು ರದ್ದು ಮಾಡಿ ನಂತರ ಒತ್ತಡಕ್ಕೆ ಮಣಿದು ಪ್ರಾರಂಭಿಸಿದ್ದು ಏಕೆ?. ಬೇರೆ ರಾಜ್ಯದವರು ಕಾರ್ಮಿಕರನ್ನು ಕಳುಹಿಸಬೇಡಿ ಎಂದು ಸುಳ್ಳು ಹೇಳಿ, ಊರುಗಳಿಗೆ ಹೋಗುವಂತಹ ಹಕ್ಕನ್ನು ಕಸಿದುಕೊಳ್ಳುತ್ತಿರುವುದು ನ್ಯಾಯವೇ ಮುಖ್ಯಮಂತ್ರಿಗಳೇ. ಎಂದು ಆಮ್ ಅದ್ಮಿ ಪಕ್ಷ ಸರ್ಕಾರವನ್ನು ಪ್ರಶ್ನೆಸಿದೆ.
ಸರ್ಕಾರಿ ಬಸ್ನಲ್ಲಿ ಮೂರು ಪಟ್ಟು ದರ: ಖಂಡಿಸಿದ ಎಎಪಿ
ಪರ ಊರುಗಳಿಂದ ಬದುಕು ಕಟ್ಟಲು ಬಂದಂತಹ ದಿನಗೂಲಿ ಕಾರ್ಮಿಕರನ್ನು ಕಾಲು ಕಸದಂತೆ ಕಂಡ ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಈಗ ಕೈ ಮುಗಿದು ಊರಿಗೆ ಹೋಗಬೇಡಿ ಎಂದು ಬೇಡಿಕೊಂಡರೆ ಏನು ಪ್ರಯೋಜನ? ಎಂದು ಕೇಳಿದೆ.
ಊಟಕ್ಕೂ ಪರದಾಡುವಂಥ ಪರಿಸ್ಥಿತಿ
43 ದಿನಗಳ ಲಾಕ್ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರನ್ನು ಗೌರವದಿಂದ ನಡೆಸಿಕೊಳ್ಳದ ಸರ್ಕಾರ, ಒಂದೊತ್ತಿನ ಊಟಕ್ಕೂ ಪರದಾಡುವಂಥ ಪರಿಸ್ಥಿತಿಗೆ ತಳ್ಳಿತ್ತು. ಈಗ ಬಿಲ್ಡರ್ಗಳ, ಉಳ್ಳವರ ಲಾಬಿಗೆ ಮಣಿದು ಉಳಿದ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲು ಮೀನಾಮೇಷ ಎಣಿಸುತ್ತಿರುವುದು ನಿಜಕ್ಕೂ ವಿಷಾದನೀಯ ಎಂದು ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದ೦ ಹೇಳಿದ್ದಾರೆ.
ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ
ಮುಖ್ಯಮಂತ್ರಿಗಳೇ ನೀವು ಬಿಲ್ಡರ್ಗಳ ಲಾಭಿಗೆ ಮಣಿದು ನಿರ್ಮಾಣ ಕಾರ್ಯ ಕೈಗೊಂಡ ತಕ್ಷಣ ಬೆಂಗಳೂರು ರಾತ್ರೋ ರಾತ್ರಿ ಅಭಿವೃದ್ಧಿ ಹೊಂದುವುದಿಲ್ಲ. ಆದರೆ, ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಗೌರವದಿಂದ ಕಾಣಬೇಕು ಎನ್ನುವುದು ಪ್ರಾಥಮಿಕ ಪಾಠ ಸಂಸ್ಕೃತಿ ಎಂದು ಬೊಬ್ಬೆ ಹೊಡೆಯುವ ನಿಮಗೆ ಈ ಪಾಠವನ್ನು ಹೇಳಿಕೊಡಬೇಕಾಗಿಲ್ಲ ಅಲ್ಲವೇ.ಕೊರೊನಾ ಆತಂಕ ಮುಗಿದ ಮೇಲೆ ಅವರ ಹೊಟ್ಟೆ ತುಂಬಿಸಲು ನಗರದ ಆಶ್ರಯ ಪಡೆಯಲೇ ಬೇಕು. ಇದುವರೆಗೆ ಮೂಲ ಬೆಂಗಳೂರಿಗರು ವಲಸೆ ಕಾರ್ಮಿಕರನ್ನು ಎಂದಿಗೂ ಕೀಳಾಗಿ ನಡೆಸಿಕೊಂಡಿಲ್ಲ. ಆದರೆ ಬಿಜೆಪಿ ಸರ್ಕಾರ ಮಾತ್ರ ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ. ಎಂದು ಎಎಪಿ ಆರೋಪ ಮಾಡಿದೆ.
ಕಾರ್ಮಿಕರ ಸಂಕಷ್ಟದಲ್ಲಿ ಖುಷಿ ಪಡುತ್ತಿದ್ದಾರೆ
ನಿಮ್ಮ ಪಕ್ಷದ ಪ್ರತಿಷ್ಠಿತ ಬೆಂಗಳೂರಿನ ಸಂಸದರೊಬ್ಬರು ರೈಲನ್ನು ರದ್ದು ಮಾಡಿರುವ ಸಂಗತಿ ನಿಜಕ್ಕೂ ಖುಷಿ ನೀಡುತ್ತದೆ. ಏಕೆಂದರೆ ಕಾರ್ಮಿಕರು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಸಕಾಲ ಎಂದು ಅವಿವೇಕತನದ ಟ್ವೀಟ್ ಮಾಡುತ್ತಾರೆ ಎಂದರೆ ಇದು ನಿಮ್ಮ ಪಕ್ಷದವರ ನೈತಿಕ ಅದಃಪತನ ಎಂದೇ ಹೇಳಬಹುದು. ಅಲೆಮಾರಿ ಕಾರ್ಮಿಕರ ಸಂಕಷ್ಟದಲ್ಲಿ ಖುಷಿ ಪಡುತ್ತಿದ್ದಾರೆ. ಸರಕಾರದ ಗಂಟೆಗೊಂದು ಎಡಬಿಡಂಗಿ ಆದೇಶ ಗಳಿಂದಾಗಿ ವಲಸಿಗ ಕಾರ್ಮಿಕರು ಪ್ರತಿಭಟನೆ ಮಾಡುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವಾಗುವ ಪರಿಸ್ಥಿತಿಗೆ ಸರಕಾರವೇ ಕಾರಣವಾಗುತ್ತಿದೆ. ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಮತ್ತೆ ಬಸ್ ಬಿಡಬೇಕು
ಉಚಿತ ಕೆಎಸ್ಆರ್ಟಿಸಿ ಬಸ್ ನಿಲ್ಲಿಸಿರುವುದನ್ನು ಈ ಕೂಡಲೇ ಪ್ರಾರಂಭಿಸಿ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹೋಗಲು ಅನುವು ಮಾಡಿಕೊಡಬೇಕು. ಅಲ್ಲದೇ ಈ ಸೌಲಭ್ಯವನ್ನು ಇನ್ನೂ 15 ದಿನಗಳ ಕಾಲ ವಿಸ್ತರಿಸಬೇಕು. ಕಾರ್ಮಿಕರ ವಿಚಾರದಲ್ಲಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡದಂತೆ ನಿಮ್ಮ ಪಕ್ಷದ ಮುಖಂಡರಿಗೆ ಸೂಚಿಸಬೇಕು ಎಂದು ಆಮ್ ಆದ್ಮಿ ಪಕ್ಷವು ಸರಕಾರವನ್ನು ಆಗ್ರಹಿಸಿದೆ.