ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿ ಪ್ರತಿಭಟನೆಗೆ ಎಎಪಿ ಬೆಂಬಲ
ಬೆಂಗಳೂರು, ಜೂನ್ 3: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪುನರ್ ಪರಿಷ್ಕರಣೆಯಲ್ಲಿ ನಾಡಿನ ಅನೇಕ ಗಣ್ಯರಿಗೆ ಅಪಮಾನ ಮಾಡಿರುವುದನ್ನು ಖಂಡಿಸಿ ಕುವೆಂಪು ಹೋರಾಟ ಸಮಿತಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಗೆ ಆಮ್ ಆದ್ಮಿ ಪಾರ್ಟಿ ಸಂಪೂರ್ಣ ಬೆಂಬಲ ಘೋಷಿಸಿದೆ.
ಬೆಂಗಳೂರು ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್. ವಿ. ಸದಂ, "ಜೂನ್ 18ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಆಮ್ ಆದ್ಮಿ ಪಾರ್ಟಿಯ ಸಂಪೂರ್ಣ ಬೆಂಬಲವಿದೆ. ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಬಾಲಗಂಗಾಧರ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಬಾಬಾ ಸಾಹೇಬ್ ಅಂಬೇಡ್ಕರ್, ಬಸವಣ್ಣ, ಕುವೆಂಪು ಮತ್ತಿತರ ಅನೇಕರಿಗಾದ ಅವಮಾನವನ್ನು ಸಹಿಸಿಕೊಂಡು ಸುಮ್ಮನಿರುವ ಪ್ರಶ್ನೆಯೇ ಇಲ್ಲ" ಎಂದು ಹೇಳಿದರು.
ಪರಿಷ್ಕೃತ ಪಠ್ಯ ಪುಸ್ತಕ ವಾಪಸಿಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರ ಪ್ರತಿಭಟನೆ
"ಪಠ್ಯಪುಸ್ತಕಗಳ ಪುನರ್ ಪರಿಷ್ಕರಣೆಯನ್ನು ಸಮರ್ಥಿಸಿಕೊಳ್ಳಲು ಶಿಕ್ಷಣ ಸಚಿವ ನಾಗೇಶ್ ಅತ್ಯಂತ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಸಾಹಿತಿ ಬರಗೂರು ರಾಮಚಂದ್ರಪ್ಪ ಪರಿಷ್ಕರಣೆಯಲ್ಲಿದ್ದ ಅನೇಕ ಮಹತ್ವದ ಸಾಲುಗಳು ಈಗ ಕೈಬಿಟ್ಟಿರುವುದು ಕಾಣುತ್ತಿದ್ದರೂ, ಯಾವುದೇ ಬದಲಾವಣೆ ಮಾಡಿಲ್ಲವೆಂದು ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಹೇಳುವ ಮೂಲಕ ನಾಡಿನ ಜನತೆಯನ್ನು ವಂಚಿಸುತ್ತಿರುವವರು ಶಿಕ್ಷಣ ಸಚಿವ ಸ್ಥಾನದಲ್ಲಿರುವುದು ನಾಡಿನ ದುರದೃಷ್ಟ" ಎಂದು ಜಗದೀಶ್ ವಿ. ಸದಂ ಹೇಳಿದರು.
ಮನೆ ಪಾಠ ಹೇಳುವವನ ಕೈಯಲ್ಲಿ ಬಿಜೆಪಿ ಸರಕಾರ ಪಠ್ಯ ಪರಿಷ್ಕರಣೆ ಮಾಡಿಸಿದೆ: ಈಶ್ವರ ಖಂಡ್ರೆ
ಸಚಿವ ನಾಗೇಶ್, ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮಕ್ಕೆ ಆಗ್ರಹ
"ತನ್ನ ಸಿದ್ಧಾಂತಗಳನ್ನು ಪಠ್ಯಪುಸ್ತಕದಲ್ಲಿ ತುರುಕಲೆಂದೇ ಶಿಕ್ಷಣ ಸಚಿವ ನಾಗೇಶ್, ಪರಿಷ್ಕರಣೆಯ ಜವಾಬ್ದಾರಿಯನ್ನು ನಾಡು, ನುಡಿ ಹಾಗೂ ಗಣ್ಯರ ಬಗ್ಗೆ ಗೌರವವಿಲ್ಲದ ರೋಹಿತ್ ಚಕ್ರತೀರ್ಥನಿಗೆ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿಗೆ ಬಸವಣ್ಣ, ಕುವೆಂಪು ಮುಂತಾದವರ ಬಗ್ಗೆ ಸ್ವಲ್ಪವಾದರೂ ಗೌರವವಿದ್ದರೆ ಸಚಿವ ನಾಗೇಶ್ ಹಾಗೂ ರೋಹಿತ್ ಚಕ್ರತೀರ್ಥ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಲಿ" ಎಂದು ಜಗದೀಶ್ ಆಗ್ರಹಿಸಿದರು.
ವಿವಾದಗಳ ಮೂಲಕ ವೈಫಲ್ಯ ಮುಚ್ಚಲು ಯತ್ನ
ರಾಜ್ಯ ಬಿಜೆಪಿ ಸರ್ಕಾರಕ್ಕೆ ಸರ್ಕಾರಿ ಶಾಲೆಗಳ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಮನಸ್ಸಿಲ್ಲ ಎಂದು ಅವರು ಆರೋಪಿಸಿದರು. ಶಿಕ್ಷಕರ ನೇಮಕಾತಿಗೂ ಸರ್ಕಾರ ನಿರುತ್ಸಾಹ ತೋರುತ್ತಿದೆ. ತರಗತಿಗಳು ಆರಂಭವಾಗಿದ್ದರೂ ಸದ್ಯಕ್ಕೆ ಸಮವಸ್ತ್ರ ವಿತರಿಸುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಹೇಳಿದರು.
ಈ ಹಿಂದೆ ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಸೈಕಲ್, ಶೂ, ಸಾಕ್ಸ್ ಮುಂತಾದವುಗಳನ್ನು ಸರ್ಕಾರ ಸದ್ದಿಲ್ಲದೇ ಸ್ಥಗಿತಗೊಳಿಸಿದೆ. ಹಿಜಾಬ್, ಪಠ್ಯಪುಸ್ತಕ ಪರಿಷ್ಕರಣೆ ವಿವಾದಗಳ ಮೂಲಕ ಅನೇಕ ಹುಳುಕುಗಳನ್ನು ಮುಚ್ಚಿ ಹಾಕಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಜಗದೀಶ್ ಆರೋಪಿಸಿದರು.
ಜೂನ್ 18ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಪಠ್ಯಪುಸ್ತಕದಲ್ಲಿ ನಾಡಿನ ಮಹನೀಯರಿಗೆ ಅವಮಾನ ಮಾಡಿದ ರೋಹಿತ್ ಚಕ್ರತೀರ್ಥನನ್ನು ತಕ್ಷಣವೇ ಬಂಧಿಸಬೇಕು. ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಜೂನ್ 18ರ ಶನಿವಾರದಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ.
ನಗರದ ಕೇಂದ್ರ ರೈಲ್ವೆ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದ್ದು ಫ್ರೀಡಂ ಪಾರ್ಕ್ನಲ್ಲಿ ಸಮಾವೇಶಗೊಳ್ಳಲಿದೆ. ಈ ಹೋರಾಟಕ್ಕೆ ರಾಜ್ಯದ ಹಲವು ಸಂಘ, ಸಂಸ್ಥೆಗಳು, ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.
ಪಠ್ಯಪುಸ್ತಕದಲ್ಲಿ ಸಾವಿತ್ರಿಬಾಯಿ ಫುಲೆಗೆ ಏಕವಚನ
ಪಠ್ಯಪುಸ್ತಕದಲ್ಲಿ ಸಾವಿತ್ರಿಬಾಯಿ ಫುಲೆ ಅವರಿಗೆ ಏಕವಚನ ಬಳಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣದ ಹಕ್ಕು ದೊರೆಯುವಂತೆ ಮಾಡುವಲ್ಲಿ ಹೋರಾಟ ಮಾಡಿದ ಸಾವಿತ್ರಿಬಾಯಿ ಅವರಿಗೆ ಅವಮಾನ ಅವಳು, ಇವಳು ಎಂದು ಏಕವಚನ ಬಳಸಿರುವುದಕ್ಕೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಠ್ಯಪುಸ್ತಕದಲ್ಲಿರುವ ಪಾಠವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಹಲವರು, ರೋಹಿತ್ ಚಕ್ರತೀರ್ಥ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.