ಆಟೋ, ಕ್ಯಾಬ್, ಚಾಲಕರಿಗೆ ಆರ್ಥಿಕ ಸಹಾಯ: ಎಎಪಿ ಮನವಿ
ಬೆಂಗಳೂರು, ಏಪ್ರಿಲ್ 29: ಆಟೋ, ಕ್ಯಾಬ್, ಅರೆ ಸರಕು ಸಾಗಾಣೆ ಚಾಲಕರಿಗೆ ಆರ್ಥಿಕ ಸಹಾಯ ಪರಿಹಾರ ನೀಡುವಂತೆ ಆಮ್ ಆದ್ಮಿ ಪಕ್ಷ ಮನವಿ ಮಾಡಿದೆ. ಕರ್ನಾಟಕದ ರಾಜ್ಯ ಆಟೋ ಘಟಕದ ಅಧ್ಯಕ್ಷರಾದ ಅಯೂಬ್ ಖಾನ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲೂ ಮಾಸ್ಕ್ ಗಳನ್ನು ಕಡ್ಡಾಯಗೊಳಿಸಲು ಎಎಪಿ ಮನವಿ
ಸರ್ಕಾರ ಕೊರೋನಾ ಸಾಂಕ್ರಮಿಕ ರೋಗದ ನಿಯಂತ್ರಣಕ್ಕಾಗಿ ಕೈಗೊಂಡ ಲಾಕ್ ಡೌನ್ ಕ್ರಮವನ್ನು ಆಮ್ ಆದ್ಮಿ ಪಕ್ಷ ಬೆಂಬಲಿಸುತ್ತದೆ. ಈಗಾಗಲೇ ಪಕ್ಷದ ಕಾರ್ಯಕರ್ತರು ಕೊರೋನಾ ವಾರಿಯರ್ಸ್ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಜತೆಗೆ ಜನರ ಸಂಕಷ್ಟಕ್ಕೆ ನೆರವಾಗಿದ್ದಾರೆ. ಬಡ ಜನತೆಗೆ ರಾಜ್ಯದಾದ್ಯಂತ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎನ್ನುವುದು ಪಕ್ಷದ ಆಶಯವಾಗಿದೆ ಎಂದು ತಿಳಿಸಲಾಗಿದೆ.
ಜನರ ಪರಿಸ್ಥಿತಿ ಏನು?
''ಆರ್ಥಿಕ ಸಂಕಷ್ಟದ ಜತೆಗೆ ಕೊರೋನಾ ಲಾಕ್ಡೌನ್ ಎಲ್ಲಾ ರೀತಿಯ ಕಾರ್ಮಿಕ ವರ್ಗದವರ ಕೈಯಲ್ಲಿ ಚಿಕ್ಕಾಸನ್ನೂ ಉಳಿಸದೆ ಮುಂದಿನ ಜೀವನ ನಿರ್ವಹಣೆಗೆ ಪರದಾಡುವಂತೆ ಮಾಡಿದೆ. ಲಾಕ್ ಡೌನ್ ಘೋಷಣೆ ಮಾಡಿ ಒಂದು ತಿಂಗಳು ಕಳೆದಿದ್ದು, ಸೋಂಕು ಇನ್ನೂ ನಿಯಂತ್ರಣಕ್ಕೆ ಬರದ ಪರಿಣಾಮ ಇನ್ನೂ ಒಂದಷ್ಟು ದಿನ ಲಾಕ್ಡೌನ್ ಮುಂದಕ್ಕೆ ಹೋದರೆ ದಿನದ ದುಡಿಮೆಯನ್ನೆ ನೆಚ್ಚಿಕೊಂಡು ಬದುಕುತ್ತಿರುವ ಜನರ ಪರಿಸ್ಥಿತಿ ಏನು?. ಅದರಲ್ಲೂ ಬಹುದೊಡ್ಡ ಕಾರ್ಮಿಕ ವರ್ಗವಾದ ಆಟೋ ಮತ್ತು ಕ್ಯಾಬ್ ಚಾಲಕರು, ಮೆಕ್ಯಾನಿಕ್ಗಳು ಉದ್ಯೋಗವಿಲ್ಲದೇ ಆರ್ಥಿಕ ಸಮಸ್ಯೆಗಳು ಇವರ ಉಸಿರುಗಟ್ಟಿಸುವುದರಲ್ಲಿ ಸಂಶಯವೇ ಇಲ್ಲ.'' ಎಂದಿದ್ದಾರೆ.
ಬೆಂಗಳೂರಿನಲ್ಲಿ 1 ಲಕ್ಷದಷ್ಟು ಆಟೋ
''ಬೆಂಗಳೂರು ನಗರ ಒಂದರಲ್ಲೇ ಸುಮಾರು 1.5 ಲಕ್ಷದಷ್ಟು ಆಟೋ ಚಾಲಕರು, 1 ಲಕ್ಷದಷ್ಟು ಆಟೋ ಮೆಕ್ಯಾನಿಕ್ಗಳು, 85 ಸಾವಿರದಷ್ಟು ಕ್ಯಾಬ್ ಚಾಲಕರಿದ್ದಾರೆ. ಇವರಲ್ಲಿ ಹೆಚ್ಚಿನವರು ಬ್ಯಾಂಕ್ನಿಂದ ವಾಹನ ಸಾಲ, ಖಾಸಗಿ ಲೇವಾದೇವಿಗಾರರಿಂದ, ಫೈನಾನ್ಸ್ಗಳಿಂದ ಹಣ ಪಡೆದು ತಿಂಗಳ, ತಿಂಗಳ ಕಂತುಗಳಲ್ಲಿ ಹಣವನ್ನು ಕಟ್ಟುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದವರು, ಅಂದಂದಿನ ದುಡಿಮೆಯನ್ನೇ ನಂಬಿಕೊಂಡವರು ಇಂದು ಅಕ್ಷರಶಃ ಖಾಲಿ ಕೈಯಾಗಿ ಕುಳಿತುಕೊಳ್ಳುವಂತಾಗಿದೆ.'' ಎಂದು ತಿಳಿಸಿದ್ದಾರೆ.
ಪಾದರಾಯನಪುರ ಘಟನೆ: ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಎಎಪಿ ಆಗ್ರಹ
ದೆಹಲಿ ಸರ್ಕಾರದ ಆರ್ಥಿಕ ನೆರವು
''ಇಂತಹ ಅನೇಕ ಸಮಸ್ಯೆಗಳನ್ನು ಮನಗಂಡ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ದೆಹಲಿ ಸರ್ಕಾರ ಈಗಾಗಲೇ ಆಟೋ, ಟ್ಯಾಕ್ಸಿ ಚಾಲಕರಿಗೆ 5,000 ರುಪಾಯಿಗಳ ಸಹಾಯ ನಿಧಿಯನ್ನು ನೀಡಿದೆ. ಈ ಆರ್ಥಿಕ ನೆರವಿನ ಲಾಭ ಗ್ರಾಮೀಣ್ ಸೇವಾ, ಇ-ರಿಕ್ಷಾಗಳು, ಕ್ಯಾಬ್, ಶಾಲಾ ವಾಹನಗಳು ಮೊದಲಾದ ಅರೆ ಸಾಗಣೆ ವಾಹನಗಳ ಚಾಲಕರಿಗೆ ನೀಡಲಾಗಿದೆ. ಇದೇ ಯೋಜನೆಯನ್ನು ರಾಜ್ಯದಲ್ಲಿಯೂ ರೂಪಿಸಬೇಕು'' ಎಂದು ಮನವಿ ಮಾಡಲಾಗಿದೆ.
ಬ್ಯಾಂಕ್ ಖಾತೆಗೆ ಹಣ
''ಅದಕ್ಕಾಗಿ ಫಲಾನುಭವಿಗಳ ಆಧಾರ್ ಸಂಖ್ಯೆ ಜೋಡಿಸಿರುವ ಬ್ಯಾಂಕ್ ಖಾತೆಯ ಮಾಹಿತಿಯನ್ನು ಪಡೆಯಬೇಕು, ಹಣವು ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುವಂತೆ ನೋಡಿಕೊಳ್ಳಬೇಕು ಹಾಗೂ ಆಟೋ ಚಾಲಕರ ಸಂಘಟನೆಗಳ ಮೂಲಕ ಕಾರ್ಮಿಕರ ಪಟ್ಟಿ ತಯಾರಿಸಿ ದಿನಸಿ ಸಾಮಗ್ರಿಗಳನ್ನು ವಿತರಿಸಬೇಕು. ಇಎಂಐ ಕಟ್ಟಲು ಒತ್ತಡ ಹಾಕದಂತೆ ಬ್ಯಾಂಕ್ಗಳಲ್ಲಿ ಖಾಸಗಿ ಫೈನಾನ್ಸ್ ಕಂಪೆನಿಗಳಿಗೆ ಖಡಕ್ ಎಚ್ಚರಿಗೆ ನೀಡಬೇಕು.'' ಎಂದು ತಿಳಿಸಿದ್ದಾರೆ.
ಚುನಾಯಿತ ಪ್ರತಿನಿಧಿಯ ಅಡಿಯಲ್ಲಿ ಸಮಿತಿ
''ಚುನಾಯಿತ ಪ್ರತಿನಿಧಿಯ ಅಡಿಯಲ್ಲಿ ಸಮಿತಿ ರಚಿಸಬೇಕು. ಎಲ್ಲಾ ರೀತಿಯ ಚಾಲಕರ ಶಾಶ್ವತ ಪಟ್ಟಿ ತಯಾರಿಸಬೇಕು. ಪೊಲೀಸ್ ಇಲಾಖೆ, ಆರ್ಟಿಓ ಇಲಾಖೆಗಳು ಈ ವೇಳೆ ಸಮನ್ವತೆಯಿಂದ ಕೆಲಸ ಮಾಡುವಂತೆ ಸೂಚಿಸಬೇಕು. ಈ ಕಾರ್ಮಿಕ ವರ್ಗಕ್ಕೆ ಸರಕಾರ ತಕ್ಷಣದ ಆರ್ಥಿಕ ನೆರವನ್ನು ನೀಡಿ ಕೈ ಹಿಡಿಯಬೇಕು. ಇವರಿಗೆ ದೆಹಲಿ ಮಾದರಿಯ ನೆರವನ್ನು ಜಾರಿಗೊಳಿಸಬೇಕು. ಇಂತಹ ಸಂದರ್ಭದಲ್ಲಿ ಕೈ ಹಿಡಿದು ಮೇಲೆತ್ತುವ ಜವಾಬ್ದಾರಿ ಸರಕಾರದ್ದು.'' ಎಂದಿದೆ.
ಅಪಾಯಕಾರಿ ನಿರ್ಧಾರ
''ಈ ನಿಟ್ಟಿನಲ್ಲಿ ದೆಹಲಿ ಸರಕಾರ ಜಾರಿಗೆ ತಂದಿರುವ ಈ ಕ್ರಮಗಳನ್ನು ರಾಜ್ಯ ಸರಕಾರ ಗಮನಿಸಿ ಕರ್ನಾಟಕದಲ್ಲೂ ಜಾರಿಗೊಳಿಸ ಬೇಕು. ಇಂತಹ ಕೆಲಸಗಳಿಗೆ ಕೈ ಜೋಡಿಸಲು ಆಮ್ ಆದ್ಮಿ ಪಕ್ಷ ಸದಾ ಸಿದ್ಧವಿರುತ್ತದೆ. ಈಗಾಗಲೇ ಕ್ಯಾಬ್ ಡ್ರೈವರ್ಗಳು ಮನೆಯಿಂದಲೇ ನಡೆಸುತ್ತಿರುವ ನಡೆಸುತ್ತಿರುವ ವಿನೂತನ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ಅಲ್ಲದೇ ಅಭಿಯಾನಕ್ಕೆ ಬೆಂಬಲ ಸೂಚಿಸುತ್ತದೆ. ಶೀಘ್ರವೇ ಈ ಮೇಲಿನ ಬೇಡಿಕೆಗಳನ್ನು ಈಡೇರಿಸದೆ ಇದ್ದರೆ ನಗರದಲ್ಲಿರುವ ಲಕ್ಷಾಂತರ ಚಾಲಕರು ಅನಿವಾರ್ಯವಾಗಿ ಬೀದಿಗೆ ಇಳಿಯಬೇಕಾದ ಸಂದರ್ಭ ಸೃಷ್ಟಿ ಆಗುತ್ತದೆ. ಇಂತಹ ಅಪಾಯಕಾರಿ ನಿರ್ಧಾರ ಕೈಗೊಳ್ಳುವ ಮೊದಲು ಚಾಲಕರ ನೆರವಿಗೆ ನಿಲ್ಲಬೇಕಾಗಿ'' ಆಮ್ ಆದ್ಮಿ ಪಕ್ಷ ಮನವಿ ಮಾಡಿದೆ.