ಡಿಕೆ ಶಿವಕುಮಾರ್ ಮೇಲೆ ಕ್ರಮಕ್ಕೆ ಆಮ್ ಆದ್ಮಿ ಪಕ್ಷ ಆಗ್ರಹ
ಬೆಂಗಳೂರು, ಜುಲೈ 3: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಡಿ.ಕೆ.ಶಿವಕುಮಾರ್ ಅವರಿಗೆ ಆಮ್ ಆದ್ಮಿ ಪಕ್ಷ ಅಭಿನಂದನೆಗಳನ್ನು ತಿಳಿಸಿದೆ. ಆದರೆ, ಆರೋಗ್ಯ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಂಪೂರ್ಣ ವೈಫಲ್ಯವನ್ನು ಕಂಡಿರುವಾಗ ಸಮರ್ಥ ವಿರೋಧ ಪಕ್ಷದ ಅಧ್ಯಕ್ಷರಾಗಿ ಗುರುತರವಾದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ನಾವುಗಳು ನಂಬಿದ್ದೇವೆ ಎಂದು ಹೇಳಿದೆ.
Recommended Video
ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ವ್ಯಾಪಕವಾಗಿ ಕೋರೋನಾ ಸೋಂಕು ಹರಡುತ್ತಿರುವ ವೇಳೆಯಲ್ಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಠ ಬಿದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ನಡೆಸುತ್ತಿರುವ ರೀತಿಯಲ್ಲಿಯೇ ಮೊಂಡು ಹಠ ಮಾಡಿ ಪದಗ್ರಹಣ ಮಾಡುವ ಮೂಲಕ ನಿಮ್ಮ ಹಠ ಸಾಧಿಸಿದ್ದಾರೇ ಹೊರತು ಮತ್ತೇನನ್ನೂ ಸಾಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಡಿಕೆಶಿ ಪದಗ್ರಹಣ: ಟಿವಿಯಲ್ಲಿ 10ಲಕ್ಷ ಜನರನ್ನು ಸೇರಿಸುವುದು ತಾಕತ್ ಅಲ್ಲ
ಅನೇಕ ಅಕ್ರಮಗಳನ್ನು ಮಾಡಿ ಗುರುತರವಾದ ಆಪಾದನೆಗಳನ್ನು ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರು ಇವುಗಳೆಲ್ಲವನ್ನೂ ರಾಜ್ಯದ ಜನತೆ ಮರೆತಿದ್ದರೆಂಬ ಭಾವನೆಯಲ್ಲಿ ಮಾಡಿದ ಭ್ರಷ್ಟ ಕೆಲಸಗಳ ಕಳಂಕ ತೊಳೆದುಕೊಳ್ಳಲು ಹೊರಟಿದ್ದೀರಿ ಎಂದು ಎಎಪಿ ಹೇಳಿದೆ.
ಕೆಟ್ಟ ರಾಜಕಾರಣ
ನಿಮ್ಮ ಹೀರೋಯಿಸಂ ಅನ್ನು ಬಿಂಬಿಸಿಕೊಳ್ಳಲು ಈಗಾಗಲೇ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವ ಮಾಧ್ಯಮಗಳನ್ನು ನಿಮ್ಮ ಕಳ್ಳ ಗಂಟಿನ ಮೂಲಕ ದೊಡ್ಡ ದೊಡ್ಡ ಜಾಹೀರಾತುಗಳನ್ನು ನೀಡಿ, ನೇರ ಪ್ರಸಾರಗಳನ್ನು ಮಾಡಿಸಿಕೊಳ್ಳುವ ಮೂಲಕ ಬಿಜೆಪಿ ಮಾಡಿದಂತಹ ಕೆಟ್ಟ ರಾಜಕಾರಣವನ್ನೇ ಕಾಂಗ್ರೆಸ್ ಪಕ್ಷವು ಸಹ ಮಾಡಲು ಹೊರಟಿರುವುದು ನಿಮ್ಮ ನೈತಿಕ ದಿವಾಳಿತನ ತೋರಿಸುತ್ತದೆ.
ಆರೋಗ್ಯ ತುರ್ತು ಪರಿಸ್ಥಿತಿ
ಕಾಂಗ್ರೆಸ್ ಮಾಡುವುದನ್ನು ಮೂಕ ಪ್ರೇಕ್ಷಕರಂತೆ ರಾಜ್ಯ ಸರ್ಕಾರ ನೋಡುತ್ತದೆ ಎಂದರೆ ನಮ್ಮ ರಾಜ್ಯ ಸರ್ಕಾರ ನಿಮ್ಮ ಭಯ ಭೀತಿಯಿಂದ ನರಳುತ್ತಿದೆ ಅಥವಾ ನಿಮ್ಮ ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ಹೊಂದಾಣಿಕೆಯ ರಾಜಕಾರಣ ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷ ನೇರವಾಗಿ ಆರೋಪ ಮಾಡುತ್ತಿದೆ. ಆರೋಗ್ಯ ತುರ್ತು ಪರಿಸ್ಥಿತಿಯಂತಹ ಈ ಸಂದರ್ಭದಲ್ಲಿ ನಿಮ್ಮ ಪಕ್ಷದ ಕಾರ್ಯಕರ್ತರುಗಳ ಆರೋಗ್ಯವನ್ನೂ ಸಹ ಪರಿಗಣಿಸಬೇಕಾಗುತ್ತದೆ ಎಂದಿದೆ.
ಅವಶ್ಯಕತೆ ನಿಜಕ್ಕೂ ಇತ್ತೇ?
ಸೋಂಕು ಹರಡುವ ಭೀತಿ ಇರುವ ಕಾರಣ 50 ಜನರಿಗಿಂತ ಹೆಚ್ಚಿನ ಜನ ಸೇರಬಾರದು ಎನ್ನುವ ಕಾನೂನು ಇದ್ದರೂ ರಾಜ್ಯದ ನಾನಾ ಭಾಗದಲ್ಲಿ ಎಲ್ಇಡಿ ಪರದೆಗಳ ಎದುರು ಹಾಗೂ ಬೆಂಗಳೂರಿನ ಕೆಪಿಸಿಸಿ ಕಚೇರಿ ಎದುರು ನೂರಾರು ಜನ ಭಾಗವಹಿಸಿ ನಿಯಮ ಉಲ್ಲಂಘಿಸಿದ್ದಾರೆ. ಇದೇ ರೀತಿ ರಾಜ್ಯಾದ್ಯಂತ 16000 ಕಡೆಗಳಲ್ಲಿ 19 ಲಕ್ಷ ಕಾರ್ಯಕರ್ತರುಗಳನ್ನು ಸೇರಿಸಿ ಕಾರ್ಯಕ್ರಮಗಳನ್ನು ನಡೆಸುವ ಅವಶ್ಯಕತೆ ನಿಜಕ್ಕೂ ಇತ್ತೇ ? ಎಂದು ಪ್ರಶ್ನೆ ಮಾಡಿದೆ.
ಡಿಕೆ ಶಿವಕುಮಾರ್ ಕ್ರಮ
ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರುಗಳ ಮೇಲೆ ಮೇಲೆ ರಾಷ್ಟ್ರೀಯ ವಿಪತ್ತು ಕಾಯ್ದೆಯ ಪ್ರಕಾರ ಕ್ರಮ ಕೈಗೊಂಡು ರಾಜ್ಯ ಸರ್ಕಾರ ಜನತೆಗೆ ಮಾದರಿಯಾಗಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ. ಈ ಮೂಲಕ ಆಳುವವರಿಗೂ ಒಂದೇ ಕಾನೂನು ಜನಸಾಮಾನ್ಯರಿಗೂ ಒಂದೇ ಕಾನೂನು ಎಂಬುದನ್ನು ಸಾಬೀತು ಪಡಿಸುವ ಜವಾಬ್ದಾರಿ ರಾಜ್ಯ ಸರಕಾರದ ಮೇಲಿದೆ.