ಬಿಬಿಎಂಪಿಗೆ ಸರ್ಕಾರಿ ಶಾಲೆ ನಿರ್ವಹಣೆ ಪಾಠ ಮಾಡಲು ಎಎಪಿ ಸಜ್ಜು
ಬೆಂಗಳೂರು, ಅಕ್ಟೋಬರ್ 24: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕಾರ್ಪೋರೇಷನ್ ಶಾಲೆಗಳನ್ನು ದಾಖಲಾತಿ ಮತ್ತು ಹಾಜರಾತಿಯ ಕೊರತೆಯಿದೆ ಎಂಬ ಕಾರಣ ನೀಡಿ ಮುಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ ಮತ್ತು ಆ ಸ್ಥಳವನ್ನು ತಮ್ಮ ವಾಣಿಜ್ಯ ಲಾಭಕ್ಕಾಗಿ ಖಾಸಗಿ ಬಿಲ್ಡರ್ ಗಳಿಗೆ ಹಸ್ತಾಂತರಿಸುವ ಸುದ್ದಿ ಬಂದಿದೆ. ಈ ಬಗ್ಗೆ ನಗರದ ಮೊದಲ ಪ್ರಜೆ ಮೇಯರ್ ಕ್ರಮ ಜರುಗಿಸುತ್ತಾರೆ ಎಂಬ ಭರವಸೆ ಇದೆ, ಬಡವರ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವುದಿಲ್ಲ ಎಂಬುದು ನಮ್ಮ ನಂಬಿಕೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ನಗರದಲ್ಲಿ ನಡೆಯುತ್ತಿರುವ ಇಂತಹ ಒಪ್ಪಂದಗಳಲ್ಲಿ ನೀವೂ ಸಹ ಭಾಗಿಯಾಗಿದ್ದೀರಿ ಎಂಬ ವದಂತಿಗಳು ಅಧಿಕಾರಿಗಳಿಂದ ಕೇಳಿ ಬರುತ್ತಿರುವುದು ಆಶ್ಚರ್ಯಕರ ಮತ್ತು ಆಘಾತಕಾರಿಯಾಗಿದೆ. ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಕಡಿಮೆಯಾಗಿರುವುದರ ಹಿಂದಿನ ನೈಜ ಕಾರಣಗಳನ್ನು ಹುಡುಕಲು ಮೇಯರ್ ಆಗಿರುವ ನೀವು ಆದೇಶಿಸದೇ ಇರುವುದು ನಮಗೆ ಆಶ್ವರ್ಯವಾಗಿದೆ.
ಬಿಬಿಎಂಪಿ ಚುನಾವಣೆ: ಎಎಪಿಯಿಂದ ಸೂಕ್ತ ಸ್ಪರ್ಧಿಗಳ ಆಯ್ಕೆ ಕಸರತ್ತು
ವಾಸ್ತವವೇನೆಂದರೆ, ಈ ಭಾಗದ ಬಡ ಮತ್ತು ಮಧ್ಯಮ ವರ್ಗದ ಪೋಷಕರು ತಮ್ಮ ಮಕ್ಕಳು ವಿದ್ಯಾವಂತರಾಗಬೇಕೆಂದು ಬಯಸುತ್ತಾರೆ ಮತ್ತು ಖಾಸಗಿ ಶಾಲೆಗಳಲ್ಲಿ ತಮ್ಮ ಆರ್ಥಿಕ ಸ್ಥಿತಿಗೂ ಮೀರಿದ ದುಬಾರಿ ಡೊನೇಷನ್ ಕಟ್ಟಲು ಮುಂದಾಗುತ್ತಾರೆ. ಆದರೆ ಉಚಿತವಾಗಿ ಶಿಕ್ಷಣ ಸಿಗುವ ಬಿಬಿಎಂಪಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸಲು ಸಿದ್ಧರಿಲ್ಲ. ಏಕೆಂದರೆ ಆ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಶೌಚಾಲಯದ ಸಮಸ್ಯೆ, ಪ್ರಯೋಗಾಲಯಗಳು ಅಥವಾ ಗ್ರಂಥಾಲಯಗಳ ಕೊರತೆ, ಮುರಿದ ಸೀಲಿಂಗ್ ಮತ್ತು ಬಿರುಕು ಬಿಟ್ಟ ಗೋಡೆಗಳು ಮತ್ತು ಕಳಪೆ ಮೂಲಸೌಕರ್ಯಗಳಿಂದ ಕೂಡಿದೆ.
ಒಟ್ಟಾರೆ ವಾತಾವರಣವು ತುಂಬಾ ಪೇಲವ ಸ್ಥಿತಿಯಲ್ಲಿದ್ದು, ಕಡು ಬಡವರು ಸಹ ತಮ್ಮ ಮಕ್ಕಳನ್ನು ಕಳುಹಿಸಲು ಯೋಗ್ಯವಾದ ಸ್ಥಳವಲ್ಲ ಎಂದು ಭಾವಿಸುತ್ತಾರೆ. ನೀವು ಎಂದಾದರೂ ಈ ಶಾಲೆಗಳಿಗೆ ಭೇಟಿ ನೀಡಿದ್ದರೆ ಗೊತ್ತಾಗುತ್ತಿತ್ತು. ರಾಜಕೀಯ ಮತ್ತು ಅಧಿಕಾರಶಾಹಿಯ ನಿರಾಸಕ್ತಿ ಮತ್ತು ನಿರ್ಲಕ್ಷ್ಯ ತನದ ಕಾರಣಕ್ಕೆ ನಾವು ಪೋಷಕರು ಮತ್ತು ಮಕ್ಕಳನ್ನು ದೂಷಿಸಲು ಸಾಧ್ಯವಿಲ್ಲ. ಈ ಶಾಲೆಗಳಲ್ಲಿ ನೀವು ತಿಂಗಳಿಗೊಮ್ಮೆ ಕೌನ್ಸಿಲ್ ಸಭೆಗಳನ್ನು ಕರೆದು, ಆ ಸಭೆಗಳಿಗೆ ಎಷ್ಟು ಜನ ಕಾರ್ಪೋರೇಟರ್ಗಳು ಮತ್ತು ಅಧಿಕಾರಿಗಳು ಭಾಗವಹಿಸುತ್ತಾರೆ ಎಂಬುದನ್ನು ನೋಡಲು ನಾವು ನಿಮಗೆ ಸವಾಲು ಹಾಕುತ್ತೇವೆ.
ದೆಹಲಿ ಮಾದರಿಯಲ್ಲಿ ಬಿಬಿಎಂಪಿಯಲ್ಲಿ ವಾರ್ಡ್ ನಿರ್ವಹಣೆಗೆ ಕೈಪಿಡಿ
ಬಿಬಿಎಂಪಿಯು ಸಾರ್ವಜನಿಕ ಶಿಕ್ಷಣಕ್ಕೆ ಕಡಿಮೆ ಆದ್ಯತೆ ನೀಡಿರುವುದರ ಬಗ್ಗೆ ಬಿಬಿಎಂಪಿ ಬಜೆಟ್ ಸಂಪೂರ್ಣ ಪುರಾವೆ ಒದಗಿಸುತ್ತದೆ. ಇದು ಒಟ್ಟು ಬಜೆಟ್ನ 0.5%ಗಿಂತಲೂ ಕಡಿಮೆಯಾಗಿದೆ. ಮುರಿದುಹೋಗಿರುವ ಗೋಡೆಗಳು, ಹೊಲಸು ಶೌಚಾಲಯಗಳು, ಹಾಳಾಗಿರುವ ಮೈದಾನಗಳು, ಮುರಿದ ಮೇಜುಗಳು ಮತ್ತು ಶಾಲೆಗಳ ಸೋರುವ ಮೇಲ್ಚಾವಣಿಗಳನ್ನು ರಿಪೇರಿ ಮಾಡಿಸಲು ಬಿಬಿಎಂಪಿಯಲ್ಲಿ ಯಾವುದೇ ಹಣ ಲಭ್ಯವಿಲ್ಲ. ಈ ಶಾಲೆಗಳನ್ನು ನವೀಕರಿಸಲು ಮತ್ತು ನಿರ್ವಹಿಸಲು ಗರಿಷ್ಠ ರೂ. 10 ಕೋಟಿ ಬೇಕು.
ಆದರೆ ರೂ. 2 ಕೋಟಿ ಖರ್ಚು ಮಾಡಲಾಗಿದೆ. ಇದು ದಾಖಲಾತಿಯ ಕೊರತೆಯಲ್ಲ ಆದರೆ ತೆರಿಗೆ ಕಟ್ಟುವ ನಾಗರಿಕರಿಗೆ ಉತ್ತಮ ಗುಣಮಟ್ಟದ ಸಾರ್ವಜನಿಕ ಶಿಕ್ಷಣವು ದೊರೆಯುವ ರೀತಿಯಲ್ಲಿ ಪರಿವರ್ತಿಸುವುದರಲ್ಲಿ ರಾಜಕೀಯ ವರ್ಗ ಮತ್ತು ಅಧಿಕಾರಿಗಳ ಉತ್ಸಾಹದ ಕೊರತೆಯಾಗಿದೆ. ನಾಚಿಕೆ ಎಂಬುದನ್ನೇ ಮರೆತಿರುವ ವರ್ಗವು ಶಾಲೆಗಳನ್ನು ಮುಚ್ಚಲು ಮತ್ತು ರಿಯಲ್ ಎಸ್ಟೇಟ್ ಮಾಫಿಯಾದೊಂದಿಗೆ ಭೂ ವ್ಯವಹಾರಗಳನ್ನು ಮಾಡಲು ಸಿದ್ಧವಾಗಿದೆ. ನಾಲ್ಕು ವರ್ಷಗಳ ಹಿಂದೆ ದೆಹಲಿ ಶಾಲೆಗಳ ಸ್ಥಿತಿಯೂ ಇದಕ್ಕೆ ಹೊರತಾಗಿರಲಿಲ್ಲ. ಆದರೆ ದೆಹಲಿಯ ಎಎಪಿ ಸರ್ಕಾರವು ಅದನ್ನು ಪರಿವರ್ತನೆಗೊಳಿಸಿ, ಇಡೀ ಪ್ರಪಂಚವೇ ದೆಹಲಿ ಮಾದರಿಯ ಶಿಕ್ಷಣದ ಬಗ್ಗೆ ಅಧ್ಯಯನ ನಡೆಸುವಂತೆ ಮಾಡಿದೆ. ಅಲ್ಲದೆ ವಿವಿಧ ರಾಜ್ಯಗಳ ರಾಜಕೀಯ ನಾಯಕರು ದೆಹಲಿ ಸರ್ಕಾರಿ ಶಾಲೆಗಳಲ್ಲಾಗಿರುವ ಕ್ರಾಂತಿಕಾರಕ ಬದಲಾವಣೆಯನ್ನು ಅಭಿನಂದಿಸುತ್ತಿದ್ದಾರೆ.
ನೀವು ನಮ್ಮೊಂದಿಗೆ ಸಭೆ ಕರೆಯುವುದಾದರೆ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಬಿಬಿಎಂಪಿಗೆ ಯಾವುದೇ ಯೋಜನೆಗಳಿಲ್ಲದಿದ್ದರೆ, ಕಾರ್ಯರೂಪದಲ್ಲಿರುವ ಮಾದರಿಯನ್ನು ಆಮ್ ಆದ್ಮಿ ಪಕ್ಷವು ಹೊಂದಿದೆ. ಅದನ್ನು ಅನುಷ್ಠಾನ ಮಾಡಲು ನೆರವು ನೀಡುತ್ತೇವೆ. ಸರ್ಕಾರಿ ಶಾಲೆಗಳಲ್ಲಿ ಕಲಿಯುವುದು ಸಾರ್ವಜನಿಕರ ಹೆಮ್ಮೆಯ ವಿಷಯವೆಂಬಂತೆ ಸರ್ಕಾರಿ ಶಾಲೆಗಳನ್ನು ಪರಿವರ್ತಿಸಲು ಪಕ್ಷವು ತಜ್ಞರ ನೆರವು ನೀಡುತ್ತೇವೆ.
ದೆಹಲಿ ಮಾದರಿಯ ಶಾಲಾ ವ್ಯವಸ್ಥೆ ಬಗ್ಗೆ ಅಧ್ಯಯನ ನಡೆಸಲು ಬಿಬಿಎಂಪಿ ಸ್ಥಾಯಿ ಸಮಿತಿ ಸದಸ್ಯರು ತೆರಳುವುದಾದರೆ ರಾಜ್ಯದ ಎಎಪಿ ಮುಖಂಡರು ದೆಹಲಿ ಸರ್ಕಾರದೊಂದಿಗೆ ವ್ಯವಸ್ಥೆ ಕಲ್ಪಿಸಲು ನೆರವು ನೀಡುತ್ತೇವೆ. ದೆಹಲಿಯ ಶಿಕ್ಷಣ ಕ್ರಾಂತಿಯ ಕುರಿತಾಗಿ ಸಂಪೂರ್ಣ ವಿವರಗಳೊಂದಿಗೆ ದೆಹಲಿ ಶಿಕ್ಷಣ ಮಂತ್ರಿ ಮನೀಶ್ ಸಿಸೋಡಿಯಾ ಅವರು ಬರೆದಿರುವ 'ಶಿಕ್ಷಾ' ಪುಸ್ತಕವನ್ನು ನಿಮಗೆ ಒದಗಿಸುತ್ತೇವೆ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕುರಿತು ಬಿಬಿಎಂಪಿ ಮೇಯರ್ ಆಗಿರುವ ನೀವು ಮತ್ತು ನಿಮ್ಮ ಅಧಿಕಾರಿಗಳೊಂದಿಗೆ ಚರ್ಚಿಸಿ ವಿವರಿಸಲು ಸಿದ್ಧರಿದ್ದೇವೆ. ನೀವು ನಮ್ಮೊಂದಿಗೆ ಚರ್ಚಿಸಲು ಸಭೆ ಕರೆಯಬೇಕೆಂದು ಆಗ್ರಹಿಸುತ್ತೇವೆ.