ಕೋವಿಡ್ 19 ಪರಿಹಾರ ವಿತರಣೆಯಲ್ಲಿ ರಾಜ್ಯಕ್ಕೆ ಅನ್ಯಾಯ- ಎಎಪಿ ಆಕ್ರೋಶ
ಬೆಂಗಳೂರು, ಮೇ 12: ಕೋವಿಡ್ 19 ಸಂದರ್ಭದಲ್ಲಿ ರಾಜ್ಯಗಳ ಆದಾಯ ಕೊರತೆಯನ್ನು ಸರಿದೂಗಿಸಲು 14 ರಾಜ್ಯಗಳಿಗೆ 6195 ಕೋಟಿ ರೂ.ಗಳನ್ನು ನಿನ್ನೆ ಕೇಂದ್ರ ಹಣಕಾಸು ಸಚಿವಾಲಯವು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕರ್ನಾಟಕ ರಾಜ್ಯವನ್ನು ಕೈಬಿಡಲಾಗಿದೆ. ಇದು ಮಲತಾಯಿ ಧೋರಣೆ ಎಂದು ಆಮ್ ಆದ್ಮಿ ಪಾರ್ಟಿ ಅಸಮಾಧಾನ ಹೊರ ಹಾಕಿದೆ.
''ಕೇಂದ್ರ ಹಣಕಾಸು ಮಂತ್ರಿ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ, ಮನೆಗೆ ಮಾರಿಯಂತೆ ನಡೆದುಕೊಳ್ಳುತ್ತಿದ್ದು, ಪ್ರತೀ ಬಾರಿಯೂ ಅನುದಾನಕ್ಕಾಗಿ, ಜಿಎಸ್ಟಿ ಬಾಬ್ತಿನ ಮರುಪಾವತಿಗಾಗಿ ಕಾಡಿಬೇಡಿ ಅಂಗಲಾಚುವಂತಹ ಸ್ಥಿತಿ ತಂದಿಟ್ಟಿದ್ದಾರೆ. ಇಂತಹ ಹೀನಾಯ ಸ್ಥಿತಿ ಕರ್ನಾಟಕ ರಾಜ್ಯಕ್ಕೆ ಹಿಂದೆಂದೂ ಬಂದಿರಲಿಲ್ಲ.'' ಎಂದು ಎಎಪಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಬೇಸರ ವ್ಯಕ್ತಪಡಿಸಿದ್ದಾರೆ.
ಬಿಲ್ಡರ್ಗಳ ಲಾಭಿಗೆ ಸರ್ಕಾರ ಮಣಿದಿದೆ: ಎಎಪಿ ಅಸಮಾಧಾನ
ಕೇಂದ್ರ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಆಂಧ್ರಪ್ರದೇಶಕ್ಕೆ 491 ಕೋಟಿ ರೂ.ಗಳು, ಹಿಮಾಚಲ ಪ್ರದೇಶಕ್ಕೆ 952 ಕೋಟಿ ರೂ.ಗಳು, ಕೇರಳಕ್ಕೆ 1276 ಕೋಟಿ ರೂ.ಗಳು ಸೇರಿದಂತೆ ಇನ್ನಿತರ ರಾಜ್ಯಗಳಿಗೆ ಸಹಾಯ ಧನವನ್ನು ವಿತರಿಸಲಾಗಿದೆ.
ನಯಾಪೈಸೆಯನ್ನೂ ನೀಡಿಲ್ಲ
ಜಲಪ್ರಳಯದಲ್ಲಿ 35 ಸಾವಿರ ಕೋಟಿ ನಷ್ಟದ ಅಂದಾಜು ಮಾಡಿದ್ದರೂ, ಸಾರ್ವಜನಿಕ ಸಭೆಯಲ್ಲಿಯೇ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಕೈ ಮುಗಿದು ಬೇಡಿಕೊಂಡರೂ, ಪ್ರಧಾನಿ ನರೇಂದ್ರ ಮೋದಿಯವರು ಕೊಂಚವೂ ಸ್ಪಂದಿಸಲಿಲ್ಲ, ನೆಪ ಮಾತ್ರಕ್ಕೆ ಸಹ ಕೇವಲ ಒಂದು ಸಾವಿರ ಕೋಟಿ ರೂಗಳನ್ನು ಮಾತ್ರ ಕೊಟ್ಟು ಕೈ ತೊಳೆದುಕೊಂಡರು. ಕೇಂದ್ರ ಸರ್ಕಾರವು ಈಗ ಕೋರೋನ ಮಹಾ ಭೀತಿಯ ಸಂದರ್ಭದಲ್ಲಿಯೂ ಸಹ ನಯಾಪೈಸೆಯನ್ನೂ ನೀಡದೆಯೇ ಕರ್ನಾಟಕ ರಾಜ್ಯಕ್ಕೆ ಸಾಕಷ್ಟು ಅನ್ಯಾಯ ಮಾಡುತ್ತಿದೆ ಎಂದು ಎಎಪಿ ತಾಕೀತು ಮಾಡಿದೆ.
ಜಿ ಎಸ್ ಟಿ ಬಾಕಿ ಮೊತ್ತ 9,500 ಕೋಟಿ
ಕಳೆದ ಸಾಲಿನ, ರಾಜ್ಯದ ಪಾಲಿನ ಜಿ ಎಸ್ ಟಿ ಬಾಕಿ ಮೊತ್ತವಾದ 9,500 ಕೋಟಿ ರೂಪಾಯಿಗಳನ್ನು ಸಹ ಇದುವರೆಗೂ ಬಿಡುಗಡೆ ಮಾಡಿಲ್ಲ. ಕೇಂದ್ರದ ಈ ಅಸಹಕಾರ ರಾಜ್ಯ ಸರ್ಕಾರವನ್ನು ಏಕಾಂಗಿಯಾಗಿಸಿದೆ. ಬಿಜೆಪಿ ಆಡಳಿತದ ರಾಜ್ಯ ಸರ್ಕಾರದ್ದೇ ಈ ಪಾಡಾದರೆ ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯ ಸರಕಾರಗಳ ಪಜೀತಿ ಊಹಿಸಲೂ ಅಸಾಧ್ಯ!. 26ಕ್ಕೂ ಹೆಚ್ಚು ಬಿಜೆಪಿ ಸಂಸದರು ಹಾಗೂ ಕೇಂದ್ರ ಹಣಕಾಸು ಸಚಿವೆ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರೂ ಸಹ ಕೇಂದ್ರ ಸರ್ಕಾರವು ಪದೇ ಪದೇ ಈ ರೀತಿಯ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿರುವುದು ದೇಶದ ಒಕ್ಕೂಟ ವ್ಯವಸ್ಥೆಗೆ ತೀರಾ ಮಾರಕವಾಗಿದೆ ಎಂದು ಎಎಪಿ ಆರೋಪಿಸುತ್ತದೆ.
ಆರೋಗ್ಯ ಸಮೀಕ್ಷೆ ಹೆಸರಲ್ಲಿ ಮತದಾರರ ಮಾಹಿತಿ: ಬಿಜೆಪಿ ಮೇಲೆ ಆರೋಪ
ತೆರಿಗೆ ಹಣ ಪೋಲು
ಈ ಕರ್ನಾಟಕಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಅನುದಾನಗಳ ಬಗ್ಗೆ ದನಿ ಎತ್ತಬೇಕಿದ್ದ ಸಂಸದರು ತಮಗೂ ಇದಕ್ಕೆ ಸಂಬಂಧವಿಲ್ಲ ಎಂಬಂತೆ ಕೂತಿದ್ದಾರೆ. ಅದರಲ್ಲೂ ಬಿಜೆಪಿಯಿಂದಲೇ ಆಯ್ಕೆಯಾಗಿರುವ 25 ಜನ ಸಂಸದರು ಗೊಡ್ಡು ದನಗಳಂತಿದ್ದು, ರಾಜ್ಯದ ಜನರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ. ಇಂತಹ ಅಯೋಗ್ಯರನ್ನು ಆರಿಸಿದ್ದಕ್ಕಾಗಿ ರಾಜ್ಯದ ಜನ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಆಮ್ ಆದ್ಮಿ ಪಕ್ಷವು ರಾಜ್ಯದ ಸಂಸದರ ನಿಷ್ಕ್ರಿಯತೆಯನ್ನು ತೀವ್ರವಾಗಿ ಖಂಡಿಸಿದೆ.
ಸಹಾಯ ಧನ ಬಿಡುಗಡೆ ಮಾಡಬೇಕು
ಈ ಕೂಡಲೇ ಕೇಂದ್ರ ಸರಕಾರವು ಎಚ್ಚೆತ್ತುಕೊಂಡು, ಕರ್ನಾಟಕ ವಿರೋಧಿ ಹಾಗೂ ಒಕ್ಕೂಟ ವಿರೋಧಿ, ಸರ್ವಾಧಿಕಾರಿ ಮನಸ್ಥಿತಿಯನ್ನು ಬಿಟ್ಟು, ಕೊರೊನಾ ಮಹಾ ಭೀತಿಯ ಸಹಾಯಧನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಎಎಪಿ ಆಗ್ರಹಿಸುತ್ತದೆ ಎಂದು ಅಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ತಿಳಿಸಿದ್ದಾರೆ.