ವಾಜಪೇಯಿ ಕ್ರೀಡಾಂಗಣ ಕುಸಿಯಲು 40% ಕಮಿಷನ್ ಕಾರಣ: ಆಪ್ ಪ್ರತಿಭಟನೆ
ಬೆಂಗಳೂರು, ಮೇ 10: ಕಳೆಪೆ ಕಾಮಗಾರಿಯಿಂದ ನಗರದ ಎಚ್ಎಸ್ಆರ್ ಲೇಔಟ್ನ ವಾಜಪೇಯಿ ಕ್ರೀಡಾಂಗಣದ ಗ್ಯಾಲರಿಯು ಕುಸಿದು ನೆಲಕ್ಕೆ ಉರುಳಿರುವುದು ರಾಜ್ಯ ಬಿಜೆಪಿ ಸರ್ಕಾರದ 40% ಕಮಿಷನ್ ದಂಧೆಯೇ ಕಾರಣವೆಂದು ಆರೋಪಿಸಿ ಆಮ್ ಆದ್ಮಿ ಪಾರ್ಟಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದರು.
ಶೇಕಡಾ 40ರಷ್ಟು ಕಮಿಷನ್
ಪ್ರತಿಭಟನೆಯಲ್ಲಿ ನೇತೃತ್ವವನ್ನು ವಹಿಸಿದ್ದ ಬೆಂಗಳೂರು ನಗರದ ಆಪ್ ಪಕ್ಷದ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿಯವರಿಂದ ಲೋಕಾರ್ಪಣೆಗೊಂಡ ಎರಡೇ ತಿಂಗಳಲ್ಲಿ ಗ್ಯಾಲರಿಯ ಮೇಲ್ಚಾವಣಿ ಕುಸಿದು ಬಿದ್ದಿದೆ. ಬಿಜೆಪಿ ಸರ್ಕಾರ ಹಾಗೂ ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಶೇಕಡಾ 40ರಷ್ಟು ಕಮಿಷನ್ ಪಡೆದುಕೊಂಡಿರುವ ದಂಧೆಗೆ ಇದೊಂದು ನಿದರ್ಶನವಾಗಿದೆ ಎಂದು ಅವರು ಆರೋಪಿಸಿದರು.
ಕಳಪೆ ಕಾಮಗಾರಿಯನ್ನು ಜನರಿಗೆ ತೋರಿಸಲು ಸ್ಥಳಕ್ಕೆ ಆಗಮಿಸಿದ ಎಎಪಿ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಗೂಂಡಾ ವರ್ತನೆ ತೋರಿರುವುದು ಖಂಡನೀಯ. ಭ್ರಷ್ಟ ಹಾಗೂ ಗೂಂಡಾ ಪಕ್ಷವಾದ ಬಿಜೆಪಿಯನ್ನು ನಾವು ಅಧಿಕಾರದಿಂದ ಕಿತ್ತೊಗೆಯುತ್ತೇವೆ ಎಂದು ಹೇಳಿದರು.
4 ಕೋಟಿ ರೂ. ವೆಚ್ಚದ ಕಳೆಪೆ ಕಾಮಗಾರಿ
ವಾಜಪೇಯಿ ಕ್ರೀಡಾಂಗಣದಲ್ಲಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಕಳಪೆ ಕಾಮಗಾರಿಯಿಂದ ನಿರ್ಮಾಣವಾಗಿದ್ದು, ಇದರ ಸಂಪೂರ್ಣ ತನಿಖೆಯಾಗಬೇಕಾಗಿದೆ ಹಾಗೂ ಲೋಕೋಪಯೋಗಿ ಇಲಾಖೆ ತನಿಖೆ ನಡೆಸಿ, ಈ ಅಕ್ರಮದಲ್ಲಿ ಭಾಗಿಯಾದ ಗುತ್ತಿಗೆದಾರರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ ಜನರ ಹಣವು ಭ್ರಷ್ಟರ ಪಾಲಾಗಿ, ಸಾರ್ವಜನಿಕ ಆಸ್ತಿಗಳು ಕಳಪೆಯಾಗುವುದನ್ನು ನೋಡಿಕೊಂಡು ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಮೋಹನ್ ದಾಸರಿ ಆಗ್ರಹಿಸಿರು.
ತೇಜಸ್ವಿ ಸೂರ್ಯಗೆ ತಾಕತ್ತಿದ್ದರೆ..
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಎಪಿ ಉಸ್ತುವಾರಿ ಸೀತಾರಾಮ್ ಗುಂಡಪ್ಪ ಮಾತನಾಡಿ, "ಸಂಸದ ತೇಜಸ್ವಿ ಸೂರ್ಯರವರು ದೆಹಲಿ ಸಿಎಂ ನಿವಾಸದೆದುರು ಬಿಜೆಪಿ ಕಾರ್ಯಕರ್ತರೊಡನೆ ದಾಂಧಲೆ ಮಾಡಿದ್ದರು. ಎಎಪಿಯ ರಾಜ್ಯ ಕಚೇರಿಗೂ ಗೂಂಡಾ ಕಾರ್ಯಕರ್ತರನ್ನು ಕಳುಹಿಸಿದ್ದರು. ಅವರಿಗೆ ತಾಕತ್ತಿದ್ದರೆ ಅವರದ್ದೇ ಕ್ಷೇತ್ರದಲ್ಲಿ 40% ಕಮಿಷನ್ ದಂಧೆಗೆ ಒಳಗಾಗಿರುವ ವಾಜಪೇಯಿ ಕ್ರೀಡಾಂಗಣಕ್ಕೆ ಬಂದು ಕಳಪೆ ಕಾಮಗಾರಿ ಬಗ್ಗೆ ಮಾತನಾಡಲಿ" ಎಂದು ಸವಾಲು ಹಾಕಿದರು.
ಜಂಟಿ ಆಯುಕ್ತರಿಂದ ದೂರು ಸ್ವೀಕಾರ
ನಂತರ ಜಂಟಿ ಆಯುಕ್ತರು ಕಳಪೆ ಕಾಮಗಾರಿಯ ತನಿಖೆಯ ಬಗ್ಗೆ ದೂರನ್ನು ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಎಎಪಿ ಮುಖಂಡರಾದ , ಜಗದೀಶ್ ಚಂದ್ರ ಜಗದೀಶ್ ಚಂದ್ರ, ಯೋಗಿತಾ ರೆಡ್ಡಿ, ಪಲ್ಲವಿ ಚಿದಂಬರಂ, ನಾಗಭೂಷಣ ರೆಡ್ಡಿ, ಮಂಜುನಾಥಸ್ವಾಮಿ, ಕಲೈ, ಫಿರೋಜ್ ಖಾನ್, ವೀಣಾ ರಾವ್, ಸತೀಶ್ ಗೌಡ ಮತ್ತಿತರ ಮುಖಂಡರು, ಆಪ್ ಕಾರ್ಯಕರ್ತರು ಭಾಗವಹಿಸಿದ್ದರು.
Recommended Video