ಕೊರೊನಾ: ಚಾಲಕರಿಗೆ 5000 ರೂ ಸಹಾಯಧನಕ್ಕೆ ಆಪ್ ಆಗ್ರಹ
ಬೆಂಗಳೂರು, ಏಪ್ರಿಲ್ 3: ಕೊರೊನಾ ದುರಂತದಿಂದ ಸಂಕಷ್ಟಕ್ಕೆ ತುತ್ತಾಗಿರುವ ರಾಜ್ಯದಲ್ಲಿ ವಾಣಿಜ್ಯ ವಾಹನಗಳನ್ನು ಚಲಾಯಿಸುವ ಚಾಲಕರಿಗೆ ಸರ್ಕಾರ 5000 ರುಪಾಯಿ ಘೋಷಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರದ ಮುಖೇನ ಸರ್ಕಾರಕ್ಕೆ ಒತ್ತಾಯಿಸಿರುವ ಅವರು, ಚಾಲಕ ವರ್ಗಗಳು ಅಸಂಘಟಿತ ಕಾರ್ಮಿಕರಾಗಿದ್ದು ಸರಕಾರದಿಂದ ಕೊಡಮಾಡುವ ಸವಲತ್ತುಗಳಿಂದ ಬಹುತೇಕ ವಂಚಿತರಾಗಿರುತ್ತಾರೆ ಎಂದಿದ್ದಾರೆ.
ಜನರಿಗೆ ಆರೋಗ್ಯ ಒದಗಿಸುವಲ್ಲಿ ಹಿಂದುಳಿದ ರಾಜ್ಯ ಸರ್ಕಾರ: ಎಎಪಿ
ತಮ್ಮ ಜೀವಿತಾವಧಿಯ ಪೂರ್ಣ ಚಾಲನಾ ಕಾರ್ಯದಲ್ಲಿ ಮಗ್ನರಾಗಿದ್ದು ಇದೀಗ ಲಾಕ್ ಡೌನ್ ಪರಿಣಾಮವಾಗಿ ಅವರುಗಳ ಕುಟುಂಬಗಳು ಅಕ್ಷರಶಃ ಬೀದಿಗೆ ಬೀಳುವ ಸಾಧ್ಯತೆಗಳು ಇವೆ. ಆಟೊ,ಲಗೇಜ್ ಆಟೋ ಚಾಲಕರುಗಳು , ಓಲಾ- ಉಬೆರ್ ಕಾರು ಚಾಲಕರುಗಳು ,ಖಾಸಗಿ ಟ್ರಕ್-ಬಸ್ ಚಾಲಕರುಗಳು ಇನ್ನು ಮುಂತಾದ ವಾಣಿಜ್ಯ ವಾಹನಗಳನ್ನು ಓಡಿಸುವ ಚಾಲಕರುಗಳು ಹಾಗೂ ಅವರ ಕುಟುಂಬ ಸದಸ್ಯರುಗಳು ಅಚಾನಕ್ಕಾಗಿ ಬಂದೊದಗಿದ ಈ ಮಹಾಮಾರಿಯ ಲಾಕ್ ಡೌನ್ ಪರಿಣಾಮವಾಗಿ ಅತ್ಯಂತ ಹೀನಾಯ ಪರಿಸ್ಥಿತಿಗೆ ತಲುಪುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಾನಸಿಕ ಕ್ಷೋಭೆಗೂ ಸಹ ಗುರಿಯಾಗುವ ಸಂಭವವಿರುವುದರಿಂದ ಈ ಚಾಲಕ ವರ್ಗಗಳಿಗೆ ಸರ್ಕಾರವು ಈ ಕೂಡಲೇ ತಕ್ಷಣದಿಂದ 5000 ರೂ.ಗಳ ಸಹಾಯಧನವನ್ನು ಅವರುಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕೆಂದು ಆಮ್ ಆದ್ಮಿ ಪಕ್ಷವು ಒತ್ತಾಯಿಸುತ್ತದೆ ಎಂದಿದ್ದಾರೆ.