ಎಲಿವೇಟೆಡ್ ಕಾರಿಡಾರ್ ಯೋಜನೆ ವಿರುದ್ಧ ಎಎಪಿ ಪ್ರತಿಭಟನೆ
ಬೆಂಗಳೂರು, ಫೆಬ್ರವರಿ 26: ಎಲಿವೇಟೆಡ್ ಕಾರಿಡಾರ್ ಜಾರಿಗೆ ತರಲು ತವಕಿಸುತ್ತಿರುವ ಬಿಜೆಪಿ ಶಾಸಕರ ನಡೆಯನ್ನು ವಿರೋಧಿಸಿ, ಎಲಿವೇಟೆಡ್ ಕಾರಿಡಾರ್ ಯೋಜನೆ ಜಾರಿ ಮಾಡದಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದ ಟೌನ್ ಹಾಲ್ ಬಳಿ ಪ್ರತಿಭಟನೆಯನ್ನು ಮಾಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ, "ಸರ್ಕಾರಗಳು ನೂತನವಾಗಿ ರಚನೆಯಾದಾಗಲೆಲ್ಲ ಅಥವಾ ಪ್ರತಿವರ್ಷ ಬಜೆಟ್ ಮಂಡನೆಯಾಗುವ ಹೊಸ್ತಿಲಿನಲ್ಲಿ ಎಲಿವೇಟೆಡ್ ಕಾರಿಡಾರ್ ಅಥವಾ ಎತ್ತರಿಸಿದ ಮಾರ್ಗ ಎಂಬ ಗುಮ್ಮ ಧುತ್ತನೆ ವಿಧಾನಸಭೆಯ ಪಡಸಾಲೆಗಳಲ್ಲಿ, ಮಂತ್ರಿಮಹೋದಯರು ಹಾಗೂ ಅಧಿಕಾರಿಗಳ ಸಮ್ಮುಖ ಸಭೆಗಳಲ್ಲಿ ಪ್ರತ್ಯಕ್ಷವಾಗಿ ಸಾವಿರಾರು ಕೋಟಿ ರೂಗಳ ಅನುದಾನವೆಂಬ ಮಹಾ ಮೋಸಕ್ಕೆ ಇಂಬು ನೀಡುತ್ತಿದೆ" ಎಂದು ಅರೋಪಿಸಿದರು.
ಮೇಖ್ರಿ ವೃತ್ತ ಹೆಬ್ಬಾಳ ನಡುವಿನ ಎಲಿವೇಟೆಡ್ ಕಾರಿಡಾರ್ ಯೋಜನೆ ಅಂತಿಮ
ಕಳೆದ ಹಲವಾರು ವರ್ಷಗಳಿಂದ ಬೆಂಗಳೂರಿನ ಜನತೆ ಸಂಚಾರ ಸಮಸ್ಯೆಗಳಿಂದ ಇಕ್ಕಟ್ಟಿಗೆ ಸಿಲುಕಿ ಪಡಬಾರದ ಪಡಿಪಾಟಲು ಬೀಳುತ್ತಿರುವ ಈ ಜ್ವಲಂತ ಸಮಸ್ಯೆಯನ್ನು ಅಧಿಕಾರಸ್ಥರು ಸರ್ಕಾರದ ಖಜಾನೆ ಕೊಳ್ಳೆಹೊಡೆಯುವ ಮಾರ್ಗವನ್ನಾಗಿ ಬಳಸಿಕೊಳ್ಳುತ್ತಿರುವುದು ತೀರಾ ಅಸಹ್ಯ ಎನಿಸುತ್ತದೆ ಎಂದರು.
ಪ್ರತಿಭಟನೆಯಲ್ಲಿ ಪಕ್ಷದ ರಾಜಕೀಯ ಚಟುವಟಿಕೆಗಳ ಉಸ್ತುವಾರಿ ವಿ. ಲಕ್ಷ್ಮೀಕಾಂತ್ ರಾವ್, ಪಕ್ಷದ ಮುಖಂಡರಾದ ರೇಣುಕಾ ವಿಶ್ವನಾಥನ್, ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ ಸದಂ, ವಿವಿಧ ಕ್ಷೇತ್ರಗಳ ಅಧ್ಯಕ್ಷರುಗಳಾದ ಚನ್ನಪ್ಪ ನಲ್ಲೂರು, ಜಗದೀಶ್ ಚಂದ್ರ, ಫಿರೋಜ್ ಖಾನ್ ಹಾಗೂ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಿ
ಬೆಂಗಳೂರಿಗರ ನೈಜ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಕಳೆದ ಹಲವಾರು ವರ್ಷಗಳಿಂದ ಅನೇಕಾನೇಕ ಮೆಟ್ರೋ ಯೋಜನೆಗಳು, ಫ್ಲೈ ಓವರ್ ಗಳು, ಅಂಡರ್ ಪಾಸ್ಗಳು, ರಸ್ತೆ ಅಗಲೀಕರಣಗಳು, ಫುಟ್ಪಾತ್ ಅಭಿವೃದ್ಧಿ, ವೈಟ್ ಟ್ಯಾಪಿಂಗ್, ಬ್ಲ್ಯಾಕ್ ಟ್ಯಾಪಿಂಗ್, ಬಿ ಟ್ರ್ಯಾಕ್ ನಾಮಫಲಕಗಳು, ಜಾಹೀರಾತು ಫಲಕಗಳಂತಹ ಮತ್ತಿತರ ನವನವೀನ ಸುಧಾರಣೆಗಳನ್ನು ಜಾರಿಗೆ ತಂದರೂ ಸಹ ಯಾವುದೇ ಸಮಸ್ಯೆಗಳನ್ನು ಬಗಹರಿಸಲು ಸಾಧ್ಯವಾಗಿಲ್ಲ. ಬದಲಾಗಿ ಮತ್ತಷ್ಟು ಟ್ರಾಫಿಕ್ ಸಮಸ್ಯೆಗಳು ಬೃಹದಾಕಾರವಾಗಿ ತಲೆ ಎತ್ತುತ್ತಿರುವುದು ಆಳುವ ಸರ್ಕಾರಗಳಲ್ಲಿ ವೈಜ್ಞಾನಿಕ ದೃಷ್ಟಿಕೋನ ಇಲ್ಲದಿರುವುದು ಸ್ಪಷ್ಟವಾಗಿ ಸಾಬೀತಾಗುತ್ತಿದೆ ಎಂದು ತಿಳಿಸಿದರು.
ಈ ಎಲ್ಲಾ ಯೋಜನೆಗಳು ಬೆಂಗಳೂರಿಗರ ಮೂಲಭೂತ ಸೌಕರ್ಯಗಳ ಅಡಿಯಲ್ಲಿ ಬಂದರೂ ಸಹ ಬೆಂಗಳೂರಿಗರಿಗೆ ಯಾವುದೇ ಮೂಲಭೂತ ಸೌಕರ್ಯಗಳ ಶಾಶ್ವತ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಈ ಯೋಜನೆಗಳೆಲ್ಲ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕಮಿಷನ್ ದಂಧೆಗೆ ಮತ್ತಷ್ಟು ಇಂಬು ನೀಡುತ್ತಿದೆಯೇ ಹೊರತು ಮತ್ತಿನ್ಯಾವ ಮಹಾನ್ ಸಾಧನೆಯೂ ಆಗಿಲ್ಲ ಎಂದು ಆರೋಪಿಸಿದರು.
ಎಲಿವೇಟೆಡ್ ಕಾರಿಡಾರ್ ಎಂಬ ಗುಮ್ಮ
ಹೀಗಿರುವಾಗ ಮತ್ತೊಮ್ಮೆ ಎಲಿವೇಟೆಡ್ ಕಾರಿಡಾರ್ ಎಂಬ ಗುಮ್ಮನಿಗಾಗಿ 26,000 ಕೋಟಿ ವೆಚ್ಚವಾಗುತ್ತದೆ. ಅದಕ್ಕೆ 9,300 ಕೋಟಿ ರೂಗಳು ಪ್ರಥಮ ಹಂತದ ಪೂರ್ವ-ಪಶ್ಚಿಮ ಕಾರಿಡಾರ್ಗಾಗಿ ಮೀಸಲು ನೀಡಬೇಕೆಂದು ಬೆಂಗಳೂರಿನ ಮಂತ್ರಿಮಹೋದಯರು ಹಾಗೂ ಶಾಸಕರುಗಳು ಕಳೆದ ವಾರ ನಡೆಸಿದ ಸಭೆಯಲ್ಲಿ ವ್ಯಕ್ತವಾದ ಬೇಡಿಕೆಗಳು. ಈಗಾಗಲೇ ನಗರ ಯೋಜನಾ ತಜ್ಞರುಗಳು, ಸಂಚಾರ ವಿಜ್ಞಾನಿಗಳು, ನಾಗರಿಕ ಸಂಘಗಳು ಹಾಗೂ ಬೆಂಗಳೂರಿನ ಸಮಸ್ತ ಜನತೆ ಇದನ್ನು ವಿರೋಧಿಸಿದರೂ ಸಹ ಮತ್ತೊಮ್ಮೆ ಬಜೆಟ್ನಲ್ಲಿ ಬೇಡಿಕೆ ಇಟ್ಟಿರುವುದು ನಿಜಕ್ಕೂ ಖೇದವೆನಿಸುತ್ತದೆ.
ಏನಿದು ಉಕ್ಕಿನ ಮೇಲ್ಸೇತುವೆ ಯೋಜನೆ? ಏಕೆ ವಿರೋಧ?
ಟ್ರಾಫಿಕ್ ಸಮಸ್ಯೆಗಳ ಶಾಶ್ವತ ನಿವಾರಣೆ
ಬೆಂಗಳೂರಿಗರ ಟ್ರಾಫಿಕ್ ಸಮಸ್ಯೆಗಳ ಶಾಶ್ವತ ನಿವಾರಣೆಗಾಗಿ ಬಹು ವರ್ಷಗಳ ಕನಸಾದ ಸಬ್ ಅರ್ಬನ್ ರೈಲ್ವೆ ನಿರ್ಮಾಣಕ್ಕಾಗಿ ಕೇಂದ್ರ ಮೀಸಲಿಟ್ಟಿರುವುದು ಕೇವಲ ಒಂದು ಕೋಟಿ. ಕೇಂದ್ರ ಸರ್ಕಾರದ ಈ ಮಹಾ ಮೋಸವನ್ನು ವಿರೋಧಿಸದ ಬೆಂಗಳೂರಿನ ಮಂತ್ರಿಗಳು, ಶಾಸಕರುಗಳು ಎಲಿವೇಟೆಡ್ ಕಾರಿಡಾರ್ ಯೋಜನೆಗಾಗಿ ಮೀಸಲಿಡಲು ಕೇಳುತ್ತಿರುವುದು 9,300 ಕೋಟಿ ರೂಗಳು.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಸಬರ್ಬನ್ ರೈಲು, ಬಿಎಂಟಿಸಿ ಬಸ್ಸುಗಳ ಸುಧಾರಣೆ, ಶೇರ್ ಆಟೋಗಳು, ಬಸ್ ಪಥಗಳಂತಹ ಸಮೂಹ ಸಾರಿಗೆಗಳನ್ನು ಉತ್ತೇಜಿಸುವಂತಹ ವೈಜ್ಞಾನಿಕ ಹಾಗೂ ಶಾಶ್ವತ ಯೋಜನೆಗಳನ್ನು ಜಾರಿಗೆ ತರಲು ಬೆಂಗಳೂರಿನ ಯಾವೊಬ್ಬ ಶಾಸಕರುಗಳಿಗೂ ಮನಸ್ಸಿಲ್ಲದೆ ಇರುವುದು ನಿಜಕ್ಕೂ ದುರಂತ ವೆನಿಸುತ್ತಿದೆ.
4000 ಕೋಟಿ ರೂಗಳ ಅನುದಾನ ಎಲ್ಲಿ ಹೋಯ್ತು?
ಬೆಂಗಳೂರಿನ ಅದರಲ್ಲೂ ಅನರ್ಹ ಮಂತ್ರಿಗಳ ಈ ಒತ್ತಾಯ ಆಪರೇಷನ್ ಕಮಲದ ಷರತ್ತುಗಳು ಹಾಗೂ ಬೇಡಿಕೆಗಳಲ್ಲಿ ಇದು ಸಹ ಒಂದಾಗಿರಬಹುದು ಎಂಬ ಅನುಮಾನ ಮೂಡುತ್ತಿದೆ. ಬಿಜೆಪಿಯವರ ದ್ವಂದ್ವ ನಿಲುವನ್ನು ಸಹ ಈ ಸಂದರ್ಭದಲ್ಲಿ ಖಂಡಿಸಲೇಬೇಕು .ಈಗಾಗಲೇ ಕಳೆದ ಬಜೆಟ್ ನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು 4000 ಕೋಟಿ ರೂಗಳ ಅನುದಾನವನ್ನು ಈ ಯೋಜನೆಗೆ ನೀಡಿದ್ದರು. ಈ ಹಣ ಎಲ್ಲಿ ಹೋಯಿತು ಎಂದು ನೂತನ ಸರ್ಕಾರವು ಮಹಾಜನತೆಗೆ ತಿಳಿಸಬೇಕು.
ಮತ್ತೆ ಎಲಿವೇಟೆಡ್ ಕಾರಿಡಾರ್ ಚರ್ಚೆ: ಅನುಷ್ಠಾನಕ್ಕಿರುವ ತೊಡಕುಗಳು
ಮುಖ್ಯಮಂತ್ರಿಗಳು ಶಾಸಕರ ಈ ಬೇಡಿಕೆಗಳಿಗೆ ಸೊಪ್ಪು ಹಾಕಬಾರದು. ಇಂತಹ ಅನವಶ್ಯಕ ಯೋಜನೆಗಳಿಗಾಗಿ ವಿಸ್ತೃತ ಯೋಜನಾ ವರದಿಗಳನ್ನು ಸಿದ್ಧಪಡಿಸುವ ನೆಪವೊಡ್ಡಿ ಸಾವಿರಾರು ಕೋಟಿ ರೂಗಳನ್ನು ಲೂಟಿ ಮಾಡುವ ಇಂತಹ ಪ್ರಕ್ರಿಯೆಗೆ ಕಡಿವಾಣ ಹಾಕಲೇಬೇಕು .
ಮುಂಬರುವ ಬಜೆಟ್ ನಲ್ಲಿ ರಾಜ್ಯ ಸರ್ಕಾರವು ಸಬರ್ಬನ್ ರೈಲ್ವೆ ಯೋಜನೆಗಾಗಿ ತನ್ನ ಪಾಲಿನ ಶೇಕಡ 20ರಷ್ಟು ಹಣವನ್ನು ಬಿಡುಗಡೆ ಮಾಡಿ ಈ ಕೂಡಲೇ ಕೆಲಸವನ್ನು ಪ್ರಾರಂಭಿಸಬೇಕೆಂದು ಆಮ್ ಆದ್ಮಿ ಪಕ್ಷವು ಒತ್ತಾಯಪೂರ್ವಕವಾಗಿ ಆಗ್ರಹಿಸುತ್ತದೆ ಎಂದು ತಿಳಿಸಿದರು.