2020 ಬಿಬಿಎಂಪಿ ಚುನಾವಣೆಗೆ ಆಮ್ ಆದ್ಮಿ ಪಕ್ಷ ತಾಲೀಮು ಚುರುಕು
ಬೆಂಗಳೂರು, ಸೆ. 25: 'ಬೆಂಗಳೂರು ನಗರವನ್ನು ಕಾಡುತ್ತಿರುವ ಕಸ ವಿಲೇವಾರಿ, ಕುಡಿಯುವ ನೀರು, ಟ್ರಾಫಿಕ್, ಪಾರ್ಕಿಂಗ್ ಮುಂತಾದ ಸಮಸ್ಯೆಗಳನ್ನು ಕಿತ್ತೊಗೆದು ನವೀನ ಬೆಂಗಳೂರನ್ನು ಕಟ್ಟಲು ಪಣತೊಟ್ಟಿರುವ ಆಮ್ ಆದ್ಮಿ ಪಕ್ಷವು 2020ರ ಬಿಬಿಎಂಪಿ ಚುನಾವಣೆಗೆ ಸಕಲ ಸಿದ್ಧತೆಗಳೊಂದಿಗೆ ತಾಲೀಮು ನಡೆಸಿದೆ' ಎಂದು ಪಕ್ಷದ ಬಿಬಿಎಂಪಿ ಚುನಾವಣಾ ಉಸ್ತುವಾರಿ ಹೊತ್ತಿರುವ ಶಾಂತಲಾ ದಾಮ್ಲೆಯವರು ತಿಳಿಸಿದ್ದಾರೆ.
ಮಹಿಳಾ ಸಾಧಕಿ- 3: 'ಅವಳ ಹೆಜ್ಜೆ'ಯ ಶಾಂತಲಾ ದಾಮ್ಲೆ
ಪಕ್ಷದ ವಿಜಯನಗರ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾಂತಲಾ ದಾಮ್ಲೆಯವರು ಕಳೆದು ಎರಡು ವರ್ಷಗಳಿಂದ ಬಿಬಿಎಂಪಿಯ ಅವ್ಯವಹಾರಗಳು ಹಾಗೂ ಬೇಜವಾಬ್ದಾರಿತನವನ್ನು ವಿರೋಧಿಸಿ ಹೋರಾಟಗಳನ್ನು ನಡೆಸುತ್ತಿರುವ ಆಮ್ ಆದ್ಮಿ ಪಕ್ಷವು ಈ ಬಾರಿಯ ಬಿಬಿಎಂಪಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ಒಂದು ವರ್ಷದಿಂದ ಸಿದ್ಧತೆ ನಡೆಸುತ್ತಿದೆ. ಚುನಾವಣಾ ಸಿದ್ಧತೆಯನ್ನು ಚುರುಕುಗೊಳಿಸಿರುವ ಆಮ್ ಆದ್ಮಿ ಪಕ್ಷವು ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ 50 ದಿನಗಳ ಜನ ಸಂಪರ್ಕ ಕಾರ್ಯಕ್ರಮ ಮತ್ತು ಸದಸ್ಯತ್ವ ಅಭಿಯಾನವನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದೆ ಎಂದು ತಿಳಿಸಿದರು.
ಚುನಾವಣೆಯ ಪ್ರಚಾರ ಮತ್ತು ಜನರ ಸಮಸ್ಯೆಗಳನ್ನು ಅರಿಯಲು ಪ್ರತಿ ವಾರ್ಡ್ ಗಳಲ್ಲಿಯೂ ಪಕ್ಷದ ಹಿರಿಯರು ಮತ್ತು ಯುವ ಮುಖಂಡರ ಕಾರ್ಯಪಡೆಯನ್ನು ರಚನೆ ಮಾಡಲಾಗುತ್ತಿದೆ. ತಂಡಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ವಿಜಯನಗರ ಕ್ಷೇತ್ರದಲ್ಲಿ ಮೊದಲ ಸುತ್ತಿನ ಜನ ಸಂಪರ್ಕ ಕಾರ್ಯಕ್ರಮವನ್ನು ಮುಂದಿನ 50 ದಿನಗಳ ಕಾಲ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ಪಕ್ಷದ ವಿಜಯನಗರ ಕ್ಷೇತ್ರದ ಅಧ್ಯಕ್ಷರಾದ ಚನ್ನಪ್ಪಗೌಡ, ಸಂತೋಷ್, ಮತ್ತಿತರರು ಮಾತನಾಡಿದರು.