ಬಿಎಂಟಿಸಿ ಸಾರಿಗೆಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಲು ಮನವಿ
ಬೆಂಗಳೂರು, ಮಾರ್ಚ್ 4: ದೆಹಲಿ ಮಾದರಿಯಲ್ಲಿ ಮಹಿಳೆಯರಿಗೆ ರಾಜ್ಯದಾದ್ಯಂತ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಸಾರಿಗೆಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಆಮ್ ಆದ್ಮಿ ಪಕ್ಷ ಮನವಿ ಸಲ್ಲಿಸಿದೆ.
ಭೇಟಿ ಬಚಾವೋ, ಭೇಟಿ ಪಡಾವೋ ಎಂಬ ಮಹಿಳಾ ಪರ ಘೋಷವಾಕ್ಯಗಳನ್ನು ಬಿಜೆಪಿ ಘೋಷಿಸಿ ಸುಮಾರು ಆರು ವರ್ಷಗಳು ಕಳೆದಿವೆ. ಆದರೆ ಮಹಿಳಾ ಪರವಾದ ಯೋಜನೆಗಳಾಗಲಿ, ಮಹಿಳಾ ಸಬಲೀಕರಣ ಮತ್ತು ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುವ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ಬಿಜೆಪಿ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಎಎಪಿ ಟೀಕಿಸಿದೆ.
"ಪ್ರಸ್ತುತದಲ್ಲಿ ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಿದ್ದು ಜನೋಪಯೋಗಿ ಕಾರ್ಯಕ್ರಮಗಳನ್ನು ತರಲು ಮುಂದಾಗಬೇಕು . ಕೇಂದ್ರ ಮತ್ತು ರಾಜ್ಯಗಳೆರಡರಲ್ಲೂ ಒಂದೇ ಪಕ್ಷದ ಸರ್ಕಾರ ಅಸ್ತಿತ್ವದಲ್ಲಿದ್ದರೆ ಹೆಚ್ಚು ಉಪಯುಕ್ತ ವೆಂಬ ಭಾವನೆ ಜನತೆಯಲ್ಲಿದೆ .ಇಂತಹ ಸುಸಂದರ್ಭವನ್ನು ಬಳಸಿಕೊಂಡು ಜನಪರ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ'' ಎಂದು ಎಎಪಿ ವಕ್ತಾರರು ಹೇಳಿದರು.
ಮಹಿಳೆಯ ಆರ್ಥಿಕ- ಸಾಮಾಜಿಕ ಅಭಿವೃದ್ಧಿ
ಅಂತೆಯೇ ಮಹಿಳೆಯರು ಸ್ವತಂತ್ರವಾಗಿ ಬದುಕಲು ಬಯಸುತ್ತಿರುವ ಇಂದಿನ ಕಾಲದಲ್ಲಿ ಮಹಿಳೆಯ ಆರ್ಥಿಕ- ಸಾಮಾಜಿಕ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡುವುದು ಸರ್ಕಾರಗಳ ಬಹುಮುಖ್ಯ ಕರ್ತವ್ಯವಾಗಬೇಕು.ಹಾಗಾಗಿ ದೆಹಲಿ ಆಮ್ ಆದ್ಮಿ ಪಕ್ಷದ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲೂ ಸಹ ಮಹಿಳೆಯರಿಗೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಸಾರಿಗೆಗಳಲ್ಲಿ ಉಚಿತ ಪ್ರಯಾಣವನ್ನು ಕಲ್ಪಿಸಿಕೊಡಬೇಕು.
ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸಿ
ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವುದು ಕಷ್ಟವಾದ ಕೆಲಸವೇನೂ ಅಲ್ಲ. ಈಗಾಗಲೇ ದೆಹಲಿಯಲ್ಲಿ ಮಹಿಳೆಯರಿಗೆ ಮತ್ತು ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಉಚಿತ ಪ್ರಯಾಣವನ್ನು ಒದಗಿಸಲಾಗಿದೆ .ಇದಕ್ಕಾಗಿ ದೆಹಲಿ ಸರ್ಕಾರ ಕೇವಲ 150 ಕೋಟಿ ರೂಗಳ ವೆಚ್ಚವನ್ನು ಮಾಡುತ್ತಿದೆ.ಈ ಮೊತ್ತವು ರಾಜ್ಯ ಸರ್ಕಾರಕ್ಕೆ ಭರಿಸಲಾರದಷ್ಟು ಹೊರೆಯೇನೂ ಆಗುವುದಿಲ್ಲ ಎಂಬುದು ಆಮ್ ಆದ್ಮಿ ಪಕ್ಷದ ಭಾವನೆ.
ವಿಶ್ವ ಮಹಿಳಾ ದಿನಾಚರಣೆ
ಇದೇ ತಿಂಗಳ ಎಂಟನೇ ತಾರೀಖಿನಂದು ವಿಶ್ವ ಮಹಿಳಾ ದಿನಾಚರಣೆ ಇರುವುದರಿಂದ ಕರ್ನಾಟಕದ ಮಹಿಳೆಯರಿಗಾಗಿ ಈ ಒಂದು ವಿಶೇಷ ಉಚಿತ ಪ್ರಯಾಣ ಯೋಜನೆ ಯನ್ನು ಸರ್ಕಾರ ಘೋಷಿಸಬೇಕೆಂದು ಆಮ್ ಆದ್ಮಿ ಪಕ್ಷವು ಒತ್ತಾಯಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತಿದೆ.
ಯಡಿಯೂರಪ್ಪರಿಗೆ ಮನವಿ ಪತ್ರ
ಈ ಸಂಬಂಧ ಆಮ್ ಆದ್ಮಿ ಪಕ್ಷದ ನಿಯೋಗವು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು. ನಿಯೋಗದಲ್ಲಿ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ, ರಾಜಕೀಯ ಚಟುವಟಿಕೆಗಳ ಮುಖ್ಯಸ್ಥರಾಗಿರುವ ಲಕ್ಷ್ಮೀಕಾಂತ ರಾವ್, ಚನ್ನಪ್ಪ ಗುರುಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.