ಎಸ್ಎಸ್ಎಲ್ಸಿ ಪರೀಕ್ಷೆ ರದ್ದುಗೊಳಿಸಿ: ಆಮ್ ಆದ್ಮಿ ಪಕ್ಷದ ಆಗ್ರಹ
ಬೆಂಗಳೂರು, ಜೂನ್ 11: ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಬೇಕು ಎಂಬುದನ್ನೇ ಪ್ರತಿಷ್ಠೆಯಾಗಿಸಿಕೊಂಡು ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಗೊಂದಲ ಮೂಡಿಸುತ್ತಿರುವ ರಾಜ್ಯ ಸರ್ಕಾರದ ಹಾಗೂ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರ ಗೊಂದಲದ ನಡೆಯನ್ನು ಆಮ್ ಆದ್ಮಿ ಪಕ್ಷ ಕಟು ಶಬ್ದಗಳಿಂದ ಖಂಡಿಸಿದೆ.
Recommended Video
ಈಗಾಗಲೇ ನೆರೆಯ ರಾಜ್ಯಗಳಾದ ತೆಲಂಗಾಣ, ತಮಿಳುನಾಡು, ಪುದುಚೇರಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ರದ್ದುಗೊಳಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ, ಆದರೆ ರಾಜ್ಯ ಸರ್ಕಾರ ಈ ವಿಷಯದಲ್ಲಿ ಹಗ್ಗ ಜಗ್ಗಾಟ ನಡೆಸುತ್ತಾ, ಸದಾ ಮಾಧ್ಯಮಗಳಲ್ಲಿ ಸುದ್ದಿ ಯಾಗಬೇಕೆಂಬ ಇರಾದೆ ಇಟ್ಟುಕೊಂಡು ಈ ರೀತಿಯಲ್ಲಿ ವರ್ತಿಸುತ್ತಿರುವ ಸಚಿವರ ನಡೆ ಎಎಪಿ ಖಂಡಿಸಿದೆ.
ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ: ಸರಕಾರಕ್ಕೆ ವಾಟಾಳ್ ನಾಗರಾಜ್ ವಿಶಿಷ್ಟ ಆಗ್ರಹ
ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಯ ಸಲುವಾಗಿ ಈಗಾಗಲೇ 4 ಪೂರ್ವ ತಯಾರಿ ಪರೀಕ್ಷೆಗಳನ್ನು ಹಾಗೂ ಸಿದ್ಧತಾ ಪರೀಕ್ಷೆಯನ್ನು ನಡೆಸಲಾಗಿದೆ. ಈ ಕೊನೆಯ ಹಂತದ ಪರೀಕ್ಷೆಯಿಂದ ಮತ್ತೆ ಅವರ ಸಾಮರ್ಥ್ಯ ಸಾಬೀತು ಮಾಡಬೇಕು ಎನ್ನುವ ಹಠವೇಕೆ? ದೇಶದ ಪ್ರಧಾನಿಗಳ ಜೀವ ಮೊದಲು ಜೀವನ ಆನಂತರ ಎನ್ನುವ ಘೋಷವಾಕ್ಯವನ್ನು ರಾಜ್ಯ ಬಿಜೆಪಿ ಸರ್ಕಾರ ಮರೆತಿರುವಂತಿದೆ ಎಂದಿದೆ.
ಒಟ್ಟಾರೆ, 15 ಲಕ್ಷ ಜನ ಈ ಪರೀಕ್ಷಾ ವ್ಯವಸ್ಥೆಗೆ ಕಾರ್ಯ ತತ್ಪರರಾಗಬೇಕಾದ ಅವಶ್ಯಕತೆ ನಿಜಕ್ಕೂ ಇದೆಯೇ ಎಂಬುದು ಪ್ರಶ್ನೆಯಾಗಿದೆ. ತಮ್ಮ ಪ್ರತಿಷ್ಠೆಗೆ ನಡೆಸುವ ಪರೀಕ್ಷೆಗಳಿಂದ ಮಕ್ಕಳ ಮೇಲಾಗುವ ಅವಘಡಗಳಿಗೆ ಸರ್ಕಾರವು ಜವಾಬ್ದಾರಿ ಯಾಗುತ್ತದೆಯೇ ?. ಈ ಪರೀಕ್ಷೆಯಿಂದ ಮುಂಬೈ ನಗರದ ರೀತಿಯ ಮತ್ತೊಂದು ಧಾರಾವಿ ಸೃಷ್ಟಿಯಾಗುವುದರಲ್ಲಿ ಸಂಶಯವೇ ಇಲ್ಲ. ಸ್ಪೇನ್ ಅಮೆರಿಕಾದಂತಹ ಹಲವು ರಾಷ್ಟ್ರಗಳು ಇದೇ ರೀತಿಯ ಪರೀಕ್ಷೆಗಳಿಂದ ಸಾಕಷ್ಟು ಅವಘಡಗಳನ್ನು ಎದುರಿಸಿರುವುದು ನಮ್ಮ ಕಣ್ಮುಂದೆಯೇ ಇರುವಾಗ ಸಚಿವರಿಗೆ ಈ ಬಗ್ಗೆ ಕಿಂಚಿತ್ತು ಅರಿವಿಲ್ಲವೇ ಎಂಬುದು ಪ್ರಶ್ನೆಯಾಗಿದೆ.
ಆದ ಕಾರಣ ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಮಾಡಿ ಸಾಮೂಹಿಕವಾಗಿ ಉತ್ತೀರ್ಣಗೊಳಿಸುವ ಮೂಲಕ ವಿದ್ಯಾರ್ಥಿಗಳನ್ನು ನಿರಾಳಗೊಳಿಸಬೇಕು. ತಜ್ಞರ ಸಮಿತಿಯನ್ನು ನೇಮಿಸಿ ಮುಂದಿನ ಹಂತದ ಶಿಕ್ಷಣ ದಾಖಲಾತಿಗೆ ಹೊಸ ಮಾನದಂಡಗಳನ್ನು ರೂಪಿಸಬೇಕು ಎಂದು ಆಮ್ ಆದ್ಮಿ ಪಕ್ಷವು ಆಗ್ರಹಿಸಿದೆ.
ರಾಜ್ಯದ ಅನೇಕಾನೇಕ ಶಿಕ್ಷಣ ತಜ್ಞರು,ಪೋಷಕರುಗಳು ಈಗಾಗಲೇ ಪರೀಕ್ಷೆ ಬೇಡ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನು ಪ್ರಮುಖವಾಗಿ ಪರಿಗಣಿಸಬೇಕು. ಹೆಚ್ಚು ಶುಲ್ಕವನ್ನು ವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಒಂದು ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದರೂ ಸಹ ಇದುವರೆವಿಗೂ ಯಾರ ಮೇಲೂ ಕಠಿಣ ಕ್ರಮವನ್ನು ತೆಗೆದುಕೊಳ್ಳದ ಶಿಕ್ಷಣ ಸಚಿವರ ನಡೆ ಅನುಮಾನ ಮೂಡಿಸುವಂತಿದೆ. ಪೋಷಕರಿಗೆ ವಸೂಲಿ ಆಗಿರುವ ಹೆಚ್ಚುವರಿ ಶುಲ್ಕವನ್ನು ಹಿಂತಿರುಗಿಸುವಂತಹ ಕಠಿಣ ಆದೇಶಗಳನ್ನು ಹೊರಡಿಸಲು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.