ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲ: ಎಎಪಿ
ಬೆಂಗಳೂರು, ಆ.6: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ, ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇತ್ತು. ರಾಜ್ಯ 11 ನೇ ಸ್ಥಾನದಲ್ಲಿ ಇತ್ತು. ನಮ್ಮ ರಾಜ್ಯದ ಮಂತ್ರಿಗಳು ಕೊರೋನ ವಾರಿಯರ್ ಗಳೆಂಬಂತೆ ಸೇವೆಯ ಹೆಸರಿನಲ್ಲಿ ಪ್ರಚಾರ ಪಡೆಯುವುದರಲ್ಲಿ ನಿರತರಾಗಿದ್ದರು. ಜುಲೈನಿಂದ ರಾಜ್ಯದ ಪರಿಸ್ಥಿತಿಯು ಸಂಪೂರ್ಣವಾಗಿ ನಿಯಂತ್ರಣ ತಪ್ಪಿತು. ಈಗಾಗಲೇ ರಾಜ್ಯ 4 ನೇ ಸ್ಥಾನವನ್ನು ತಲುಪಿದೆ. ಆದರೆ ಸೋಂಕು ತಡೆಯಲು ಸಮರ್ಪಕ ಪರಿಹಾರಗಳನ್ನು ಕಂಡುಕೊಂಡು ಜನರಿಗೆ ಸಾಂತ್ವನ ನೀಡಿ ಮಾರ್ಗದರ್ಶನ ಮಾಡುವ ಜವಾಬ್ದಾರಿಯನ್ನು ಸರಕಾರದ ಯಾವೊಬ್ಬ ನಾಯಕನೂ ನಿಭಾಯಿಸಿಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಅವರು ಹೇಳಿದರು.
Recommended Video
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಕರ್ನಾಟಕದಲ್ಲಿ ಸೋಂಕು ಉತ್ತುಂಗಕ್ಕೆ ಏರಿದ ಮೇಲೆ ಎಚ್ಚೆತ್ತುಕೊಂಡಿದೆ. ರಾಜ್ಯದಾದ್ಯಂತ ವೈದ್ಯರು, ಆರೋಗ್ಯ ಸಿಬ್ಬಂಧಿಗಳು, ರಕ್ಷಣಾ ಸಿಬ್ಬಂದಿಗಳು ಎದುರಿಸುತ್ತಿರುವ ಸವಾಲುಗಳನ್ನು ನೋಡಿಯೂ ತನ್ನ ಯೋಜನೆಗಳನ್ನು ರೂಪಿಸಿರಲಿಲ್ಲ. ದೆಹಲಿಯಂತಹ ರಾಜ್ಯಗಳಲ್ಲಿ ವೈದ್ಯಕೀಯ ಉಪಕರಣಗಳು, ಪರೀಕ್ಷೆ ಹಾಗೂ ಚಿಕಿತ್ಸಾ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಜಾರಿ ಮಾಡಿವೆ. ಈ ಯಶಸ್ಸು ನಮ್ಮ ಕಣ್ಣ ಮುಂದೆ ಇದ್ದರೂ ರಾಜ್ಯ ಸರ್ಕಾರ ಇದನ್ನು ಮಾದರಿಯಾಗಿ ಪರಿಗಣಿಸಿರಲಿಲ್ಲ. ಹೀಗಾಗಿ ರಾಜ್ಯ ಸರಕಾರ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಪೃಥ್ವಿ ರೆಡ್ಡಿಯವರು ಅಭಿಪ್ರಾಯ ಪಟ್ಟರು.
ಬೆಡ್ಡು, ಆಂಬ್ಯುಲೆನ್ಸ್ ಇಲ್ದೆ ಜನರ ಸಾವು, ಬಿಜೆಪಿ ಅಧ್ಯಕ್ಷಗಿರಿ ಹಂಚಿಕೆ!
ದೆಹಲಿ ಸರಕಾರ ತೆಗೆದುಕೊಂಡಿರುವ ಸಮರ್ಪಕ ನಿಲುವುಗಳಿಂದ ಇಂದು ಅಲ್ಲಿ ಸೋಂಕು ನಿಯಂತ್ರಣಗೊಂಡಿದೆ. ಇದರ ಆಧಾರದ ಮೇಲೆ ಆಮ್ ಆದ್ಮಿ ಪಕ್ಷವು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಲಹೆಗಳನ್ನು ನೀಡಲಾಗಿತ್ತು. ಆದರೆ ಸರಕಾರ ಪಕ್ಷದ ಯಾವುದೇ ಸಲಹೆಗಳಿಗೆ, ಮನವಿಗಳಿಗೆ ಪೂರಕವಾಗಿ ಸ್ಪಂದಿಸದೇ ಇರುವುದು ವಿಪರ್ಯಾಸ.
ಇಂದು ಸಾಕಷ್ಟು PPE ಕಿಟ್ ಗಳನ್ನು ಸಮರ್ಪಕವಾಗಿ ಸರಕಾರ ಒದಗಿಸದೇ ಇರುವ ಕಾರಣ ವೈದ್ಯರು, ದಾದಿಯರು, ಪೊಲೀಸ್ ಸಿಬ್ಬಂದಿ, ಬಿಬಿಎಂಪಿ ಪೌರಕರ್ಮಿಕರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿದೆ. ಇದರ ಪರಿಣಾಮವಾಗಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಪಡೆಯಲ್ಲಿ ಆರೋಗ್ಯ ಕಾರ್ಯಕರ್ತರ ಸಂಖ್ಯೆ ಕಡಿಮೆಯಾಗಿದೆ.
ಕೊವಿಡ್ 19 ಹಗರಣ: ಆರೋಗ್ಯ ಸಚಿವರ ರಾಜೀನಾಮೆಗೆ ಎಎಪಿ ಆಗ್ರಹ
ಸರಕಾರಕ್ಕೆ ಆಶಾ ಕಾರ್ಯಕರ್ತೆಯರ ವೇತನ ಸಮಸ್ಯೆಯನ್ನು ಮೂರು ತಿಂಗಳಾದರೂ ಇತ್ಯರ್ಥ ಮಾಡಿಲ್ಲ. ರಾಜ್ಯದ ಅನೇಕ ಭಾಗಗಳಲ್ಲಿ ದಾದಿಯರು ಮತ್ತು ವೈದ್ಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟಿಸುತ್ತಿದ್ದಾರೆ. ಆದರೆ ಸರಕಾರ ಇದನ್ನು ನೋಡಿಯೂ ನೋಡದಂತೆ ನಿರ್ಲಕ್ಷಿಸುತ್ತಿದೆ ಎಂದು ಪೃಥ್ವಿ ರೆಡ್ಡಿ ಆರೋಪಿಸಿದರು.
ಈ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು ಸಾಮಾಜಿಕ ಕಳಕಳಿಯೊಂದಿಗೆ ಆಮ್ ಆದ್ಮಿ ಪಕ್ಷವು ಬೆಂಗಳೂರಿನಾದ್ಯಂತ "ಆಪ್ ಕೇರ್" ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ. ಸೋಂಕು ತಡೆಯಲು ಪಕ್ಷದ ಕಾರ್ಯಕರ್ತರು ಶ್ರಮಿಸಲಿದ್ದಾರೆ. PPE ಕಿಟ್ ಗಳನ್ನು ಧರಿಸಿ ಪಕ್ಷದ ಕಾರ್ಯಕರ್ತರು ಸೋಂಕಿನ ಲಕ್ಷಣಗಳು ಇರುವ ನಾಗರಿಕರ ಮನೆಗಳಿಗೆ ಭೇಟಿ ನೀಡಿ ಅವರ ದೇಹದ ತಾಪಮಾನ, ಆಮ್ಲಜನಕದ ಮಟ್ಟಗಳನ್ನು ಪರೀಕ್ಷಿಸುತ್ತಾರೆ. ಅವರ ಮನೆ ಮನೆಗಳಿಗೂ ಸ್ಯಾನಿಟೈಸೇಶನ್ ಮಾಡಲಿದ್ದಾರೆ. ಸೋಂಕಿನ ಬಗ್ಗೆ ಮಾಹಿತಿ ನೀಡಿ ಸುರಕ್ಷತಾ ಮಾರ್ಗಗಳ ಬಗ್ಗೆ ಅರಿವು ಮೂಡಿಸಲಿದ್ದಾರೆ. ಬಿಬಿಎಂಪಿ ಆರೋಗ್ಯ ಅಧಿಕಾರಿಗಳ, ಆಸ್ಪತ್ರೆಗಳ ಸಂಪರ್ಕ ವಿವರಗಳನ್ನು ನೀಡುತ್ತಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿಯವರು ಆಪ್ ಕೇರ್ಸ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಆಮ್ ಆದ್ಮಿ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕರಾಗಿರುವ ಜಗದೀಶ್ ಸದಂ ಅವರು ಉಪಸ್ಥಿತರಿದ್ದರು.