ಬೆಂಗಳೂರನ್ನು ನರಕ ಮಾಡುತ್ತಿರುವ ಮಳೆ: ಎಎಪಿ ಸಲಹೆ
ಬೆಂಗಳೂರು, ಜೂನ್ 27: ಒಂದು ಸಣ್ಣ ಮಳೆಗೂ ಮುಳುಗಿ ಹೋಗುವ ರಾಜಧಾನಿ ಬೆಂಗಳೂರು ಜನ ಸಾಮಾನ್ಯರ ಪಾಲಿಗೆ ಅಕ್ಷರಶಃ ನರಕವಾಗಿದೆ. ಮಳೆ ಬೆಂಗಳೂರನ್ನು ನರಕ ಮಾಡುತ್ತಿದ್ದು, ದೆಹಲಿ ಮಾದರಿಯಂತೆ ಸ್ವಯಂಚಾಲಿತ ಒಳ ಚರಂಡಿ ಯಂತ್ರಗಳನ್ನು ಖರೀದಿಸಿ ಎಂದು ಆಮ್ ಆದ್ಮಿ ಪಕ್ಷ ಕರ್ನಾಟಕ ಸಲಹೆ ನೀಡಿದೆ.
ಸಣ್ಣ ಮಳೆ ಸುರಿದರೂ ನಗರದ ಚರಂಡಿಗಳು ತುಂಬಿ ಮಳೆ ನೀರೆಲ್ಲ ರಸ್ತೆಗೆ ಹರಿಯುವುದು ಸಾಮಾನ್ಯವಾಗಿದೆ. ಇದಕ್ಕೆ ಒಳಚರಂಡಿಗಳ ಅವೈಜ್ಞಾನಿಕ ನಿರ್ವಹಣೆಯೇ ಕಾರಣ. ಈ ಬಾರಿಯ ಮಳೆಗಾಲ ಜನರ ಸಮಸ್ಯೆಗಳನ್ನು ಹಾಗೂ ಬಿಬಿಎಂಪಿ ಹಾಗೂ ಸರ್ಕಾರ ನಡೆಸಿರುವ ಒಂದೊಂದೆ ಹಗರಣಗಳನ್ನು ಹೊರ ಹಾಕುತ್ತಿದೆ. ಕಾಮಗಾರಿಯ ಹೆಸರಿನಲ್ಲಿ ನಗರದ ಎಲ್ಲಾ ಕಡೆ ಒಳಚರಂಡಿಗಳನ್ನು ಹಾಳುಗೆಡವಲಾಗಿದೆ ಎಂದು ಎಎಪಿ ಆರೋಪ ಮಾಡಿದೆ.
ಮಳೆಯಿಂದ ನೆಲಕ್ಕುರುಳಿದ ಬೃಹತ್ ಬೇವಿನ ಮರ, 6 ಕಾರುಗಳು ಜಖಂ
ಅತ್ಯಾಧುನಿಕ ಸ್ವಚ್ಚತಾ ಯಂತ್ರಗಳು ಇದ್ದರೂ ನಮ್ಮಲ್ಲಿ ಈಗಲೂ ಕೈಯಿಂದಲೇ ಒಳಚರಂಡಿ ಸ್ವಚ್ಚಗೊಳಿಸುವ ವ್ಯವಸ್ಥೆ ಇದ್ದು ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ. *ಆದ ಕಾರಣ ಈ ಕೂಡಲೇ ರಾಜ್ಯ ಸರ್ಕಾರ ದೆಹಲಿ ಮಾದರಿಯಲ್ಲಿ ಸ್ವಯಂ ಚಾಲಿತ ಕ್ಲೀನಿಂಗ್ ಮೆಷಿನ್ (automatic sewage cleaning machine) ಖರೀದಿಸಬೇಕು ಎಂದು ಒತ್ತಾಯ ಮಾಡಿದೆ.
ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಮಳೆ ಬಂದಾಗ ಬಾವಿ ತೋಡುವ ಕೆಲಸ ಬಿಟ್ಟು ಒಂದಷ್ಟು ತುರ್ತು ಕೆಲಸಗಳನ್ನು ಈ ಕೂಡಲೇ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸುತ್ತದೆ. ಮಳೆಯಿಂದ ನಡೆದ ವೃಷಭಾವತಿ ತಡೆಗೋಡೆ ಕುಸಿತ ದುರ್ಘಟನೆಗೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಗುರಿಯಾಗಿಸಿ *ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸಿನ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅವರಿಗೆ ಆಮ್ ಆದ್ಮಿ ಪಕ್ಷದಿಂದ ದೂರು ಸಲ್ಲಿಸಲಾಗಿದೆ.
ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಕೇವಲ 6 ತಿಂಗಳ ಹಿಂದೆ ನಿರ್ಮಿಸಿದಗದ ವೃಷಭಾವತಿ ನದಿ ತಡೆಗೋಡೆ ಕುಸಿದ ಕಾರಣ, ಬಿಬಿಎಂಪಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸಿನ ಸೂಪರಿಂಟೆಂಡೆಂಟ್ ಆಫ್ ಪೊಲೀಸರಿಗೆ ಆಮ್ ಆದ್ಮಿ ಪಕ್ಷದ ಕಡೆಯಿಂದ ದೂರು ಸಲ್ಲಿಸಲಾಯಿತು. ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಸುರೇಶ್ ರಾಥೋಡ್, ಜ್ಞಾನ ಭಾರತಿ ವಾರ್ಡ್ ಅಧ್ಯಕ್ಷರಾದ ಸತೀಶ್, ಕೊಟ್ಟಿಗೆ ಪಾಳ್ಯ ವಾರ್ಡ್ ಅಧ್ಯಕ್ಷರಾದ ಸಂತೋಷ್ ಇದ್ದರು.