ಲಾಕ್ಡೌನ್ ಮುಗಿಯುವಷ್ಟರಲ್ಲಿ ಹಾಸಿಗೆ ಸಾಮರ್ಥ್ಯ 1.5 ಲಕ್ಷಕ್ಕೆ ಏರಿಸಿ
ಬೆಂಗಳೂರು, ಜುಲೈ 15: ಇಷ್ಟು ದಿನ ಇದ್ದಂತಹ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿ ಈಗ ಸೋಂಕು ಹೆಚ್ಚಳವಾಗುತ್ತಿರುವ ಸಮಯದಲ್ಲಿ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಿಸಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಹಾಸ್ಯಸ್ಪದ ಎಂದು ಆಮ್ ಆದ್ಮಿ ಪಕ್ಷ ಅಭಿಪ್ರಾಯಪಟ್ಟಿದೆ.
Recommended Video
ಸರ್ಕಾರದ ಕೋವಿಡ್ 19 ಡ್ಯಾಶ್ಬೋರ್ಡ್ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು ಖಾಲಿ ಇರುವ ಹಾಸಿಗೆಗಳು ಕೇವಲ 2300 ಹಾಸಿಗೆಗಳ ಮಾತ್ರ, ಆಗಸ್ಟ್ ಮಧ್ಯಂತರದ ಹೊತ್ತಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2.6 ಲಕ್ಷಕ್ಕೆ ಏರುತ್ತದೆ ಎಂದು ಸೋಂಕು ಶಾಸ್ತ್ರದ ಪ್ರಕಾರ ತಿಳಿಸಲಾಗಿದೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಏಕೆಂದರೆ ಕೊರೋನಾ ಸೋಂಕಿತರು ಹಾಗೂ ಇತರೆ ರೋಗಿಗಳು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾಯುತ್ತಿರುವ ಆತಂಕದ ವಾತಾವರಣದ ಇದೆ. ಸೋಂಕು ಮತ್ತಷ್ಟು ಹೆಚ್ಚಾದರೆ ಇತರೆ ರೋಗಿಗಳು ಹಾಗೂ ಸೋಂಕಿತರ ಪಾಡೇನು?
ಸೋಂಕಿತರ ರಕ್ಷಣೆಗೆ ಪಲ್ಸ್ ಆಕ್ಸಿ ಮೀಟರ್ ವಿತರಿಸಿ: ಆಮ್ ಆದ್ಮಿ ಪಕ್ಷ
ಆದ ಕಾರಣ ದಿನಕ್ಕೆ 10 ಸಾವಿರ ಹಾಸಿಗೆಗಳಂತೆ ಮಿನಿ ಲಾಕ್ಡೌನ್ ಸಮಯವನ್ನು ಬಳಸಿಕೊಂಡು ಒಟ್ಟು ರಾಜ್ಯದ ಹಾಸಿಗೆ ಸಾಮರ್ಥ್ಯವನ್ನು 1.5 ಲಕ್ಷಕ್ಕೆ ಏರಿಸಬೇಕು. ಜುಲೈ ಅಥವಾ ಆಗಸ್ಟ್ ಮಧ್ಯಂತರದ ಒಳಗೆ ಈ ಪ್ರಕ್ರಿಯೆ ಮುಗಿಸದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಆಮ್ ಆದ್ಮಿ ಪಕ್ಷ ಎಚ್ಚರಿಸುತ್ತದೆ.
ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಆವರಣದಲ್ಲಿ ಈಗ ಮಾಡುತ್ತಿರುವ ಹಾಸಿಗೆ ವ್ಯವಸ್ಥೆಯಂತೆ ಪ್ರತಿ ಜಿಲ್ಲೆಯಲ್ಲೂ ಸಹ ಇದೇ ರೀತಿ ಆರೈಕೆ ಕೇಂದ್ರಗಳನ್ನು ತೆರೆಯಬೇಕು. ಏಕೆಂದರೆ ಒಂದೇ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರು ಹಾಗೂ ಇತರೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಅನೇಕ ಕಡೆ ಖಾಸಗಿ ಆಸ್ಪತ್ರೆಗಳು ಹೊರ ರೋಗಿಗಳ ವಿಭಾಗವನ್ನೇ ಬಂದ್ ಮಾಡಿವೆ ಆದ ಕಾರಣ ನಗರದಿಂದ ಹೊರಗೆ ಆರೈಕೆ ಕೇಂದ್ರ ತೆರೆದರೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾಯುತ್ತಿರುವ ಇತರೆ ರೋಗಿಗಳು ಹಾಗೂ ಸೋಂಕಿತರನ್ನು ಪ್ರಾಣಾಪಾಯದಿಂದ ಪಾರುಮಾಡಬಹುದು ಎಂದು ಸಲಹೆ ನೀಡುತ್ತದೆ ಎಂದು ಆಮ್ ಆದ್ಮಿ ಪಕ್ಷ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಹೇಳಿದರು.