ಕೊಟ್ಟ ಮಾತಿನಂತೆ ನಡೆದ ಸಿಎಂ: ಎಎಪಿ ಅಭಿನಂದನೆ
ಬೆಂಗಳೂರು, ಮೇ 6: ಆಟೋ ಮತ್ತು ಕ್ಯಾಬ್ ಚಾಲಕರಿಗೆ ಆರ್ಥಿಕ ಸಹಾಯ ಮಾಡಿದ ಸರ್ಕಾರ ಯೋಜನೆಯನ್ನು ಎಎಪಿ ಸ್ವಾಗತ ಮಾಡಿದೆ.ಪಕ್ಷಕ್ಕೆ ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಡೆದುಕೊಂಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ.
ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಮಾರ್ಚ್ 30ರಂದು ದೆಹಲಿಯ ಆಟೋ ಮತ್ತು ಕ್ಯಾಬ್ ಚಾಲಕರಿಗೆ 5000 ರುಪಾಯಿಗಳ ಸಹಾಯ ಧನ ನೀಡಿದರು. ಅಂದೇ ಆಮ್ ಆದ್ಮಿ ಪಕ್ಷವು ಇದೇ ಮಾದರಿಯ ಸಹಾಯ ಧನವನ್ನು ರಾಜ್ಯದ ಆಟೋ ಚಾಲಕರಿಗೂ ನೀಡುವಂತೆ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿತು. ತದ ನಂತರ ಪಕ್ಷವು ಎಪ್ರಿಲ್ 7 ಮತ್ತು 18ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿತ್ತು.
ಕೊರೊನಾ ಸಂಕಷ್ಟ: 1,610 ಕೋಟಿ ರೂ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
ಎರಡನೇ ಪತ್ರದ ನಂತರ ಆಮ್ ಆದ್ಮಿ ಪಕ್ಷದ ಮುಖಂಡರನ್ನು ಎಪ್ರಿಲ್ 29ರಂದು ಮಾತುಕತೆಗೆ ಆಹ್ವಾನಿಸಿ ಪಕ್ಷದ ಮನವಿಯನ್ನು ಆಲಿಸಿ, ಪಕ್ಷದ ರಾಜ್ಯ ಆಟೋ ಘಟಕದ ಅಧ್ಯಕ್ಷರಾದ ಅಯೂಬ್ ಖಾನ್, ಆಟೋ ಘಟಕದ ಪದಾಧಿಕಾರಿಗಳಾದ ವೆಂಕಟೇ ಗೌಡ, ಸೈಯದ್ ಅತೀಕ್ ಹಾಗೂ ಪಕ್ಷದ ಮುಖಂಡರಾದ ಅಡ್ವೋಕೇಟ್ ಲಕ್ಷ್ಮೀಕಾಂತ ರಾವ್ ಮತ್ತು ನಗರದ ವಿವಿಧ ಆಟೋ ಚಾಲಕರ ಸಂಘಟನೆಗಳು ಇದ್ದ ನಿಯೋಗಕ್ಕೆ ದೆಹಲಿ ಸರಕಾರದ ಮಾದರಿಯಲ್ಲಿಯೇ ಸಹಾಯಧನ ನೀಡುವುದಾಗಿ ಭರವಸೆ ನೀಡಿದ್ದರು.
ತದನಂತರ ಈ ಸಂಬಂಧಿಸಿದ ಅಗತ್ಯತೆಯನ್ನು ಮನವರಿಕೆ ಮಾಡಲು ಕಾರ್ಮಿಕ ಕಾರ್ಯದರ್ಶಿಗಳನ್ನು ಮತ್ತು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಶ್ರೀ ಲಕ್ಷ್ಮಣ ಸವದಿಯವರನ್ನು ಕೂಡ ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು.
ಈ ಹಿಂದೆ ಕೂಡ 2016ರಲ್ಲಿ ಕೇಂದ್ರ ಸರಕಾರವು ಕೇಂದ್ರ ಮೋಟಾರು ಕಾಯ್ದೆಗೆ ತಿದ್ದುಪಡಿ ತಂದು ವಾಣಿಜ್ಯ ಡ್ರೈವಿಂಗ್ ಲೈಸನ್ಸ್ ಗೆ 8ನೇ ತರಗತಿ ಪಾಸು ಕಡ್ಡಾಯ ಎಂಬ ಕುರುಡು ನಿಯಮ ತಂದಿತ್ತು. ಈ ಮಾರಕ ಕಾಯ್ದೆಯ ವಿರುದ್ದ ಅರವಿಂದ್ ಕೇಜ್ರೀವಾಲ್ ರವರು ಕೇಂದ್ರ ಸರಕಾರಕ್ಕೆ ಈ ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹ ಪಡಿಸಿದ್ದರು. ಮಾತ್ರವಲ್ಲದೆ ಬೆಂಗಳೂರಿನಲ್ಲಿ ಜನವರಿ 30, 2016 ರಂದು ಆಮ್ ಆದ್ಮಿ ಪಕ್ಷ ಮತ್ತು ಆಟೋ ಸಂಘಟನೆಗಳು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಆಟೋ ಚಾಲಕರ ಪರವಾಗಿ ದನಿಯೆತ್ತಿ ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಆಮ್ ಆದ್ಮಿ ಪಕ್ಷ ಆಟೋ ಸಂಘಟನೆಗಳು ಹಾಗೂ ಅರವಿಂದ್ ಕೇಜ್ರೀವಾಲ್ ಒತ್ತಡಕ್ಕೆ ಮಣಿದ ಕೇಂದ್ರ ಸರಕಾರವು ಈ ಕಾಯ್ದೆಯನ್ನು ಹಿಂತೆಗೆದುಕೊಂಡಿತು.
ಹೀಗೆಯೇ ಸದಾ ದನಿಯಿಲ್ಲದವರ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯ ದನಿಯಾಗಿ ಜನಪರವಾಗಿ ಆಮ್ ಆದ್ಮಿ ಪಕ್ಷ ನಿಲ್ಲಲಿದೆ. ಹಾಗೆಯೇ ಈ ಸಂಬಂಧ ಸರಕಾರದ ಮೇಲೆ ಒತ್ತಡ ಹೇರಿದ ಎಲ್ಲಾ ಮಾಧ್ಯಮ ಮಿತ್ರರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇವೆ. ಎಂದು ಎಎಪಿ ತಿಳಿಸಿದೆ.