ಏಕಾಏಕಿ ಅಂಗಡಿಗಳನ್ನು ಮುಚ್ಚಿಸುವುದು ದಡ್ಡತನ: ಎಎಪಿ
ಬೆಂಗಳೂರು, ಏಪ್ರಿಲ್ 23: ರಾಜ್ಯ ಸರ್ಕಾರವು ಗುರುವಾರದಂದು ಏಕಾಏಕಿ ಕರ್ನಾಟಕದ ಎಲ್ಲ ಅಂಗಡಿಗಳನ್ನು ಮುಚ್ಚಲು ಆದೇಶಿಸಿರುವುದು ನಿಜಕ್ಕೂ ರಾಜ್ಯಸರ್ಕಾರದ ದಡ್ಡತನದ ಪರಮಾವಧಿ ಎಂದು ಎಎಪಿ ಕರ್ನಾಟಕ ಖಂಡಿಸಿದೆ.
ಈ ಬಗ್ಗೆ ನಿರ್ಣಯಗಳನ್ನು ತೆಗೆದುಕೊಳ್ಳುವ ಮೊದಲು ರಾಜ್ಯದ ರಾಜಸ್ವ ತೆರಿಗೆ ಸಂಗ್ರಹಣೆಯಲ್ಲಿ ಅಗ್ರ ಪಾಲನ್ನು ಹೊಂದಿರುವ ವರ್ತಕರ ಸಂಘಗಳೊಂದಿಗೆ ಚರ್ಚಿಸಿ ಇದರ ಪರಿಣಾಮಗಳ ಬಗ್ಗೆ ಆಲೋಚಿಸದೆ ಏಕಾಏಕಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ.
ಈಗಾಗಲೇ ರಾಜ್ಯದ ವರ್ತಕರುಗಳು ಕಳೆದ ವರ್ಷದ ಕೊರೋನಾ ಮಹಾಮಾರಿಯ ಪರಿಣಾಮವಾಗಿ ದೀರ್ಘಕಾಲಿಕ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ರೀತಿಯ ಅವೈಜ್ಞಾನಿಕ ಆದೇಶಗಳ ಮೂಲಕ ಮತ್ತಷ್ಟು ಮರ್ಮಾಘಾತವನ್ನು ಸರ್ಕಾರವು ನೀಡುತ್ತಿದೆ.
ಇಂಥ ಕ್ಲಿಷ್ಟಕರ ಸಂದರ್ಭದಲ್ಲಿ ರಾಜ್ಯದ ಆರ್ಥಿಕ ಪರಿಣಾಮಗಳನ್ನು ಕೂಲಂಕುಷವಾಗಿ ಪರಿಶೀಲಿಸದೆ ರಾಜ್ಯ ಸರ್ಕಾರವು ಮಧ್ಯಾಹ್ನದಿಂದಲೇ ಏಕಾಏಕಿ ಅಂಗಡಿಗಳನ್ನು ಮುಚ್ಚಲು ಆದೇಶಿಸಿ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿರುವುದು ತೀರಾ ಖಂಡನೀಯ.
ಈ ಕೂಡಲೇ ರಾಜ್ಯದ ಎಲ್ಲಾ ವರ್ತಕರ ಸಂಘಗಳೊಂದಿಗೆ ಚರ್ಚಿಸಿ ತನ್ನ ಆದೇಶವನ್ನು ಮರುಪರಿಶೀಲಿಸಬೇಕೆಂದು ಆಮ್ ಆದ್ಮಿ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಆಗ್ರಹಿಸಿದ್ದಾರೆ.
Recommended Video